-ಚಿತ್ರಮಂದಿರದ ಬಳಿ ಪ್ರತಿಭಟನೆ ಮಾಡಿದರೆ ಕಾನೂನು ಕ್ರಮದ ಎಚ್ಚರಿಕೆ
ಬೆಂಗಳೂರು: ಕಮಲ್ ಹಾಸನ್ (Kamal Haasan) ನಟನೆಯ `ಥಗ್ಲೈಫ್’ (Thug Life) ಸಿನಿಮಾ ರಿಲೀಸ್ಗೆ ಸುಪ್ರೀಂ (Supreme Court) ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಕನ್ನಡ ಪರ ಸಂಘಟನೆಯ ಪ್ರಮುಖರಿಗೆ ಪೊಲೀಸರು ನೋಟಿಸ್ ನೀಡಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಕರವೇ ನಾರಾಯಣ ಗೌಡ, ಪ್ರವೀಣ್ ಶೆಟ್ಟಿ ಸೇರಿದಂತೆ ಕನ್ನಡ ಪರ ಸಂಘಟನೆಯ ಪ್ರಮುಖರಿಗೆ ಮಂಗಳವಾರ ನೋಟಿಸ್ ಕೊಟ್ಟಿದ್ದಾರೆ. ಈ ಮೂಲಕ ಚಿತ್ರಬಿಡುಗಡೆಗೆ ತಡೆ ನೀಡುವ ನಿಟ್ಟಿನಲ್ಲಿ ಆದೇಶ ಮೀರಿ ಹೋರಾಟಕ್ಕೆ ಮುಂದಾದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: Mangaluru | ಹೆದ್ದಾರಿ ತಡೆಗೋಡೆಗೆ ಕಾರು ಡಿಕ್ಕಿ – ಇಬ್ಬರು ಯುವಕರು ಸಾವು
ಪ್ರತಿಭಟನೆ ಮಾಡುವ ಹಾಗಿದ್ದರೆ ಕೋರ್ಟ್ ಆದೇಶದಂತೆ ನೀವು ನಿಗದಿತ ಸ್ಥಳದಲ್ಲಿ ಅಂದರೆ ಫ್ರೀಡಂ ಪಾರ್ಕ್ನಲ್ಲಿ ಮಾತ್ರ ಪ್ರತಿಭಟನೆ ಮಾಡಬೇಕು. ಒಂದು ವೇಳೆ ಥಗ್ಲೈಫ್ ಸಿನಿಮಾ ಬಿಡುಗಡೆ ಆಗಿರುವ ಚಿತ್ರಮಂದಿರದ ಬಳಿ ಹೋಗಿ ಪ್ರತಿಭಟನೆ ಮಾಡಿದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರ ನೋಟಿಸ್ ಬೆನ್ನಲ್ಲೇ ಇಲಾಖೆ ವಿರುದ್ಧ ಕರವೇ ಪ್ರವೀಣ್ ಶೆಟ್ಟಿ ಆಕ್ರೋಶ ಹೊರ ಹಾಕಿದ್ದಾರೆ. `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಕನ್ನಡ ಪರ ಹೋರಾಟಗಾರರು ಉಗ್ರಾಗಾಮಿಗಳೋ, ದೇಶದ್ರೋಹಿಗಳೋ ಅಲ್ಲ. ಕನ್ನಡದ ವಿಚಾರಗಳಿಗಾಗಿ ಎದೆ ತಟ್ಟಿ ನಿಂತಿರುವವರು. ಸಿನಿಮಾ ಬಿಡುಗಡೆ ವಿಚಾರವಾಗಿ, ನಾವು ಇನ್ನೂ ಹೋರಾಟಕ್ಕೆ ನಿರ್ಧಾರವನ್ನೇ ಮಾಡಿಲ್ಲ. ಆಗಲೇ ನೋಟಿಸ್ ಕೊಟ್ಟಿದ್ದಾರೆ ಎಂದರು.
ಸರ್ಕಾರವೇ ನಟನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಆದರೇ ಈಗ ಹೀಗ್ಯಾಕೆ ಮಾಡಿದ್ದಾರೋ ಗೊತ್ತಿಲ್ಲ. ರಾತ್ರಿಯೇ ಮನೆ ಬಳಿ ಬಂದು ನೋಟಿಸ್ ಅಂಟಿಸಿ, ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಜನ ಈಗಾಗಲೇ ಸಿನಿಮಾ ತಿರಸ್ಕಾರ ಮಾಡಿದ್ದಾರೆ. ಆದರೂ ಹುಂಬತನಕ್ಕೆ ಬಿದ್ದು, ಸಿನಿಮಾ ರಿಲೀಸ್ಗೆ ಮುಂದಾಗಿದ್ದಾರೆ. ಥಿಯೇಟರ್ಗೂ ಕೂಡ ನಮ್ಮ ಜನ ಹೋಗಲ್ಲ ಎನ್ನುವ ನಂಬಿಕೆ ಇದೆ. ವಾಣಿಜ್ಯ ಮಂಡಳಿಯವರು ಕೂಡ ಥಿಯೇಟರ್ನವರು ಮುಂದೆ ಬರುತ್ತಿಲ್ಲ ಅಂತ ಹೇಳಿದ್ದಾರೆ. ಹಾಗಾಗಿ ನಮ್ಮ ಜನ ಕೂಡ ತಿರಸ್ಕಾರ ಮಾಡಲಿದ್ದಾರೆ ಎಂದರು.
ಬೆಂಗಳೂರಿಗೆ (Bengaluru) ಥಗ್ಲೈಫ್ ಸಿನಿಮಾ ಪ್ರಮೋಷನ್ಗಾಗಿ ಬಂದಿದ್ದ ನಟ ಕಮಲ್ ಹಾಸನ್ `ತಮಿಳಿನಿಂದಲೇ ಕನ್ನಡ ಹುಟ್ಟಿದ್ದು’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರಿಂದ ಕನ್ನಡಿಗರಲ್ಲಿ ಆಕ್ರೋಶದ ಕಟ್ಟೆಯೊಡೆದಿತ್ತು. ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ಕಮಲ್ಗೆ, ಥಗ್ಲೈಫ್ ರಿಲೀಸ್ಗೆ ಒಂದು ವಾರಗಳ ಕಾಲ ತಡೆ ನೀಡಿ ಆದೇಶ ಹೊರಡಿಸಿ ಶಾಕ್ ನೀಡಿತ್ತು. ಬಳಿಕ ಆದೇಶ ಪ್ರಶ್ನಿಸಿ ನಟ ಸುಪ್ರೀಂ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಸಿನಿಮಾ ಬಿಡುಗಡೆಗೆ ಅನುಮತಿಸಿ ಆದೇಶ ಹೊರಡಿಸಿದೆ.ಇದನ್ನೂ ಓದಿ: ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ ಮತ್ತೆ ವಿಳಂಬ – ಜ್ವೆಜ್ಡಾ ಸೇವಾ ಮಾಡ್ಯೂಲ್ ದುರಸ್ತಿ ಬಳಿಕ ಮಿಷನ್ ಶುರು