ಪೆಗಾಸಸ್ ಮೂಲಕ ಗೂಢಚರ್ಯೆ ಪ್ರಕರಣ – ತನಿಖೆಗೆ ತಜ್ಞರ ಸಮಿತಿ ರಚಿಸಲಿರುವ ಸುಪ್ರೀಂ

Public TV
2 Min Read

ನವದೆಹಲಿ: ಭಾರೀ ವಿವಾದಕ್ಕೆ ಕಾರಣವಾಗಿದ್ದ ಪೆಗಾಸಸ್ ಸ್ಪೈವೇರ್ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ತಜ್ಞರ ಸಮಿತಿ ರಚನೆ ಮಾಡುವುದಾಗಿ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠ ಮೌಖಿಕವಾಗಿ ಹೇಳಿದೆ.

ಇಂದು ವಿಚಾರಣೆ ವೇಳೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಪೀಠ, ಇನ್ನೊಂದು ವಾರದಲ್ಲಿ ಸಮಿತಿ ರಚನೆ ಬಗ್ಗೆ ಅಧಿಕೃತ ಆದೇಶ ನೀಡುವುದಾಗಿ ಹೇಳಿದೆ. ಈ ವಾರವೇ ಆದೇಶ ನೀಡುವ ಉದ್ದೇಶವನ್ನು ಕೋರ್ಟ್ ಹೊಂದಿತ್ತು. ಆದರೆ ಕೆಲವು ತಜ್ಞರ ವೈಯಕ್ತಿಕ ಕಾರಣಗಳಿಂದಾಗಿ ಮುಂದಿನ ವಾರ ತೀರ್ಪು ಪ್ರಕಟಿಸಲು ಕೋರ್ಟ್ ತಿರ್ಮಾನಿಸಿದೆ. ಇದನ್ನೂ ಓದಿ: ರಾಹುಲ್, ಪ್ರಿಯಾಂಕಾ ನನ್ನ ಮಕ್ಕಳಿದ್ದಂತೆ, ಅವರಿಗೆ ಅನುಭವ ಇಲ್ಲ: ಕ್ಯಾ.ಅಮರೀಂದರ್ ಸಿಂಗ್

ಪೆಗಾಸಸ್ ಮೂಲಕ ಗೂಢಚರ್ಯೆ ಆರೋಪದ ಹಿನ್ನೆಲೆ ಸ್ವತಂತ್ರ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸೆಪ್ಟೆಂಬರ್ 13 ರಂದು ಸಿಜೆಐ ಎನ್.ವಿ ರಮಣ, ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಹಿಮಾಕೊಹ್ಲಿ ಅವರನ್ನೊಳಗೊಂಡ ಪೀಠ ಸುದೀರ್ಘ ವಿಚಾರಣೆ ನಡೆಸಿ, ಪೆಗಾಸಸ್ ಪ್ರಕರಣದಲ್ಲಿ ಮಧ್ಯಂತರ ಆದೇಶವನ್ನು ಕಾಯ್ದಿರಿಸಿತ್ತು.

ವಿಚಾರಣೆ ವೇಳೆ ಈ ಬಗ್ಗೆ ವಿಸ್ತøತ ವರದಿ ನೀಡಲು ಸುಪ್ರೀಂಕೋರ್ಟ್ ಸೂಚಿಸಿತ್ತು. ಆದರೆ ಈ ಬಗ್ಗೆ ಅಫಿಡವಿಟ್ ಸಲ್ಲಿಸಲು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ವಿಷಯವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ. ಆದ್ದರಿಂದ ನ್ಯಾಯಾಂಗ ಚರ್ಚೆ ಅಥವಾ ಸಾರ್ವಜನಿಕ ಚರ್ಚೆಯ ವಿಷಯವಾಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: 17 ವರ್ಷದ ದಾಂಪತ್ಯ ಅಂತ್ಯಗೊಳಿಸಿ ಡೈವೋರ್ಸ್ ಪಾರ್ಟಿ ಮಾಡಿದ ಮಹಿಳೆ

ಸರ್ಕಾರವು ಯಾವುದೇ ನಿರ್ಧಿಷ್ಟ ಸಾಫ್ಟ್‍ವೇರ್ ಅನ್ನು ಭದ್ರತಾ ಉದ್ದೇಶಗಳಿಗಾಗಿ ಬಳಸಿದೆಯೇ ಎಂಬುದನ್ನು ಅಫಿಡವಿಟ್‍ನಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಏಕೆಂದರೆ ಅದು ಭಯೋತ್ಪಾದಕ ಗುಂಪುಗಳನ್ನು ಎಚ್ಚರಿಸುತ್ತದೆ. ಆಪಾದನೆಗಳ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರವು ತಾಂತ್ರಿಕ ಸಮಿತಿಯನ್ನು ರಚಿಸಿ ಈ ವಿಷಯವನ್ನು ಪರಿಶೀಲಿಸಲು ಒಪ್ಪಿಕೊಂಡಿದೆ ಎಂದು ಮೆಹ್ತಾ ವಾದಿಸಿದ್ದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ನ್ಯಾಯಪೀಠ, ರಾಷ್ಟ್ರೀಯ ಭದ್ರತೆ ಅಥವಾ ರಕ್ಷಣೆಗೆ ಸಂಬಂಧಿಸಿದ ಯಾವುದೇ ವಿವರಗಳು ತನಗೆ ಬೇಕಾಗಿಲ್ಲ. ಆದರೆ ನಾಗರಿಕರ ಗೌಪ್ಯತೆಗೆ ಸಂಬಂಧಿಸಿದ ಆರೋಪಗಳಿಗೆ ಸ್ಪಷ್ಟೀಕರಣವನ್ನು ಮಾತ್ರ ಬಯಸುತ್ತಿದೆ ಎಂದು ಹೇಳಿತ್ತು. ಈಗ ತಜ್ಞರ ಸಮಿತಿ ರಚಿಸಲು ಮುಂದಾಗಿರುವ ಪೀಠ ಈ ಬಗ್ಗೆ ಸಮಗ್ರ ತನಿಖೆಗೆ ಸೂಚನೆ ನೀಡುವ ಸಾಧ್ಯತೆಗಳಿವೆ.

Share This Article
Leave a Comment

Leave a Reply

Your email address will not be published. Required fields are marked *