ಇಂದು ಸುಪ್ರೀಂನಲ್ಲಿ `ಕಾವೇರಿ’ ಅಂತಿಮ ತೀರ್ಪು- ಬೆಂಗ್ಳೂರು, ಮಂಡ್ಯ, ಮೈಸೂರಲ್ಲಿ ಕಟ್ಟೆಚ್ಚರ

Public TV
2 Min Read

ಬೆಂಗಳೂರು: ಕರ್ನಾಟಕದ ಮತ್ತು ತಮಿಳುನಾಡು ನಡುವಿನ ದಶಕಗಳ ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ಇಂದು ಬೆಳಗ್ಗೆ 10.30ಕ್ಕೆ ಅಂತಿಮ ತೀರ್ಪು ಹೊರಡಿಸುವ ಸಾಧ್ಯತೆ ಇದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎಎಂ ಖಾನ್ವೀಲ್ಕರ್ ಮತ್ತು ಅಮಿತಾವ್ ರಾಯ್ ಅವ್ರನ್ನು ಒಳಗೊಂಡ ತ್ರಿಸದಸ್ಯ ಪೀಠ ಸೆಪ್ಟೆಂಬರ್ 20ರಂದೇ ವಿಚಾರಣೆ ಅಂತ್ಯಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು. 2007ರ ಕಾವೇರಿ ನ್ಯಾಯಾಧಿಕರಣದ ಹೈ ತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಮೇಲ್ಮನವಿ ಸಲ್ಲಿಸಿದ್ದವು. ಇದನ್ನೂ ಓದಿ: ಕಾವೇರಿ ನೀರಿಗೆ ತಮಿಳುನಾಡು ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಯ್ತು? ಇಲ್ಲಿದೆ ಪೂರ್ಣ ವಿವರ

ಈ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದ್ದ ತ್ರಿಸದಸ್ಯ ಪೀಠ, ಕಾವೇರಿ ಕೊಳ್ಳದ ರಾಜ್ಯಗಳ ವಾದ-ಪ್ರತಿವಾದವನ್ನು ಆಲಿಸಿತ್ತು. ನ್ಯಾಯಮೂರ್ತಿ ಅಮಿತಾವ್ ರಾಯ್ ಮಾರ್ಚ್ 1ಕ್ಕೆ ನಿವೃತ್ತಿಯಾಗುತ್ತಿದ್ದು, ಫೆಬ್ರವರಿ 26ರಿಂದ ಮಾರ್ಚ್ 3ರವರೆಗೆ ಸುಪ್ರೀಂಕೋರ್ಟ್‍ಗೆ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ರಜೆ ಕೂಡ ಇದೆ. ಹೀಗಾಗಿ ಇಂದೇ ತೀರ್ಪು ಹೊರಬೀಳುವ ಸಾಧ್ಯತೆ ಹೆಚ್ಚಿದೆ.

ಕರ್ನಾಟಕ-ತಮಿಳುನಾಡಿನ ವಾದ-ಪ್ರತಿವಾದಗಳು ಇಂತಿವೆ..

* ಕರ್ನಾಟಕ – ಕಾವೇರಿ ಅಚ್ಚುಕಟ್ಟು ಪ್ರದೇಶದಿಂದ ಹೊರಗಿರೋ ಬೆಂಗಳೂರಿನ ಅರ್ಧಕ್ಕೂ ಹೆಚ್ಚು ಭಾಗಕ್ಕೆ ಕುಡಿಯುವ ನೀರು ಒದಗಿಸಬೇಕು
* ತಮಿಳುನಾಡು – ಬೆಂಗಳೂರು ಕಾವೇರಿ ಅಚ್ಚುಕಟ್ಟು ಪ್ರದೇಶದಿಂದ ಹೊರಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಕುಡಿಯುವ ನೀರು ಕೊಡಬಾರದು (ಅಂತರ್ಜಲವನ್ನೇ ಬೆಂಗಳೂರು ಆಧರಿಸಲಿ)

* ಕರ್ನಾಟಕ – ತಮಿಳುನಾಡಿನ ಕಾವೇರಿ ಕೊಳ್ಳದ ಭಾಗದಲ್ಲಿ ದೊರೆಯುವ 20 ಟಿಎಂಸಿ ಅಂತರ್ಜಲವನ್ನು ಕೋರ್ಟ್ ಪರಿಗಣಿಸಬೇಕು
* ತಮಿಳುನಾಡು – ಕಾವೇರಿ ನೀರೇ ಬೇರೆ.. ಅಂತರ್ಜಲವೇ ಬೇರೆ.. ಅಂತರ್ಜಲವನ್ನು ಪರಿಗಣಿಸಬೇಡಿ

* ಕರ್ನಾಟಕ – ಕೃಷಿ ನೀರಾವರಿ ಭೂಮಿ ಹೆಚ್ವಿಸಲು ಅನುಮತಿ ಬೇಕು
* ತಮಿಳುನಾಡು – ಕರ್ನಾಟಕದ ಕೃಷಿ ಭೂಮಿ ಭತ್ತ, ಕಬ್ಬು ಬೆಳೆಯಲು ಯೋಗ್ಯವಿಲ್ಲ.. ಒಣ ಬೇಸಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು

* ಕರ್ನಾಟಕ – ಮೇಕೆದಾಟು ಡ್ಯಾಂ ಕಟ್ಟಲು ಅವಕಾಶ ಕೊಡಬೇಕು
* ತಮಿಳುನಾಡು – ಯಾವುದೇ ಕಾರಣಕ್ಕೂ ಮೇಕೆದಾಟು ಸೇರಿ ಯಾವುದೇ ಡ್ಯಾಂ ಕಟ್ಟಲು ಅವಕಾಶ ನೀಡಬಾರದು

* ಕರ್ನಾಟಕ – ತಮಿಳುನಾಡಿಗೆ ಹರಿಸುವ 192 ಟಿಎಂಸಿ ನೀರನ್ನು 102 ಟಿಎಂಸಿಗೆ ಇಳಿಸಬೇಕು
* ತಮಿಳುನಾಡು – ಇಲ್ಲ ಇಲ್ಲ ಅದು ಮಾಡಬೇಡಿ.. ತಮಿಳುನಾಡಿನ ಸಾಂಬಾ ,ಕುರುವೈ ಬೆಳೆಗೆ ಅಗತ್ಯ ನೀರನ್ನು ಹರಿಸಬೇಕು

* ಕರ್ನಾಟಕ – ಬ್ರಿಟೀಷ್ ಕಾಲದ ಒಪ್ಪಂದಗಳು ರಾಜ್ಯಕ್ಕೆ ಮುಳುವಾಗಿದ್ದು ಒಪ್ಪಂದಗಳು ಅಮಾನ್ಯ ಮಾಡಬೇಕು
* ತಮಿಳುನಾಡು – ಬ್ರಿಟೀಷ್ ಕಾಲದ ಒಪ್ಪಂದಗಳ ಅನ್ವಯವೇ ನೀರಿನ ಹಂಚಿಕೆಯಾಗಬೇಕು

* ಕರ್ನಾಟಕ – ಕಾವೇರಿ ನಿರ್ವಹಣ ಮಂಡಳಿ ರಚನೆ ಅವಕಾಶ ನೀಡಬಾರದು
* ತಮಿಳುನಾಡು – ಕಾವೇರಿ ನಿರ್ವಹಣಾ ಮಂಡಳಿ ತುರ್ತಾಗಿ ರಚನೆಯಾಗಬೇಕು

Share This Article
Leave a Comment

Leave a Reply

Your email address will not be published. Required fields are marked *