ಬೆಳಗಾವಿಯಲ್ಲಿ ಸುಪಾರಿ ಹಂತಕರ ಅಟ್ಟಹಾಸ

Public TV
1 Min Read

ಬೆಳಗಾವಿ: ಜಿಲ್ಲೆಯಲ್ಲಿ ಮತ್ತೆ ಸುಪಾರಿ ಹಂತಕರು ತಮ್ಮ ಅಟ್ಟಹಾಸ ಮುಂದುವರಿಸಿದ್ದಾರೆ.

ಆಸ್ತಿ ವಿವಾದ ಹಿನ್ನೆಲೆಯಲ್ಲಿ ಇನ್ನೊಂದು ಬಳಗದಿಂದ ಸುಪಾರಿ ತೆಗೆದುಕೊಂಡ ಗ್ಯಾಂಗ್ ರಾತ್ರಿ ಬೆಳಗಾವಿ ನಗರದ ವಡಗಾಂವ ನಿವಾಸಿ ಶಂಕರ್ ಶಿಂಧೆ ಎಂಬವರ ಮನೆ ಮುಂಭಾಗದಲ್ಲೇ ಹತ್ಯೆ ಮಾಡಲು ಯತ್ನಿಸಿ ಪರಾರಿಯಾಗಿದೆ. ಅದೇ ಏರಿಯಾದ ಕೃಷ್ಣಾ ಕಟಾಂಬಳೆ ಮತ್ತು ಇಡೀ ಕುಟುಂಬಸ್ಥರು ಹಾಗೂ ಆತನೊಂದಿಗೆ 10ಕ್ಕೂ ಅಧಿಕ ಜನ ಸುಪಾರಿ ಹಂತಕರು ಸೇರಿಕೊಂಡು ಬಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ಹಲ್ಲೆಯಲ್ಲಿ ಶಂಕರ್ ತಲೆಗೆ ಹಾಗೂ ಹೊಟ್ಟೆ ಭಾಗ ತೀವ್ರ ಗಾಯಗಳಾಗಿವೆ. ಜಗಳ ಬಿಡಿಸಲು ಬಂದಿದ್ದ ಶಂಕರ್ ಪತ್ನಿಯನ್ನು ಎಳೆದಾಡಿ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ಹಿಂದೆ ನಾಲ್ಕು ಬಾರಿ ಕೂಡ ಶಂಕರ್ ಮೇಲೆ ಈ ಕೃಷ್ಣಾ ಕಟಾಂಬಳೆ ಹಲ್ಲೆ ಮಾಡಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರಿದ್ದು ಯಾವುದೇ ಕ್ರಮ ಕೂಡ ಆಗಿಲ್ಲ.

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೋರ್ಟ್ ನಲ್ಲಿ ದಾವೆ ಕೂಡ ನಡೆಯುತ್ತಿದೆ. ಇಷ್ಟಾದರೂ ಗೂಂಡಾಗಿರಿ ಮಾಡಿ ಶಂಕರ್ ಮತ್ತು ಆತನ ಕುಟುಂಬವನ್ನ ಹೆದರಿಸಿ ಆಸ್ತಿಯನ್ನು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದ್ಯಾವುದಕ್ಕೂ ಶಂಕರ್ ಒಪ್ಪದಿದ್ದಾಗ ಇಂದು ಏಕಾಏಕಿ 20ಕ್ಕೂ ಅಧಿಕ ಜನರು ಬಂದು ಗಂಡ-ಹೆಂಡತಿ ಮೇಲೆ ಇಟ್ಟಿಗೆ ಹಾಗೂ ಕಲ್ಲು ಸೇರಿದಂತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಶಂಕರ್ ಗೆ ಸದ್ಯ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಈ ಕುರಿತು ಟೀಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಹತ್ಯೆ ಮಾಡಲು ಯತ್ನಿಸಿದವರು ಹಾಗೂ ಸುಪಾರಿ ಹಂತಕರನ್ನು ಬಂಧಿಸಲು ಶಂಕರ್ ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *