-165 ಕೋಟಿ ರೂ. ಖರ್ಚು ಮಾಡಿದ್ದಕ್ಕೆ ಯಾರು ಹೊಣೆ?
ಬೆಂಗಳೂರು: ಜಾತಿಗಣತಿ ವಿಷಯದಲ್ಲಿ 10 ವರ್ಷಗಳ ತಪ್ಪು ದತ್ತಾಂಶವನ್ನು ರಾಜ್ಯದ ಜನರಿಗೆ ಹೇಳಿಕೊಂಡು ಬಂದಿದ್ದಕ್ಕಾಗಿ ಸಿಎಂ (CM Siddaramaiah) ಕ್ಷಮೆ ಕೇಳಿ ರಾಜೀನಾಮೆ ಕೊಡಬೇಕು ಎಂದು ಶಾಸಕ ವಿ.ಸುನಿಲ್ ಕುಮಾರ್ (Sunil Kumar) ಅವರು ಆಗ್ರಹಿಸಿದ್ದಾರೆ.
ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಣಿ ವೈಫಲ್ಯ ಕಂಡವರು ನೀವು. 165 ಕೋಟಿ ರೂ. ದುರುಪಯೋಗವೂ ಆಗಿದೆ. ಮುಡಾ ಹಗರಣದ ವೈಫಲ್ಯ, ವಾಲ್ಮೀಕಿ ಹಗರಣ, ಕಾಲ್ತುಳಿತದ ಪ್ರಕರಣ, ಅಬಕಾರಿ ಹಗರಣ, ಈಗ ಈ ಜಾತಿಗಣತಿ. ಇವೆಲ್ಲವೂ ಸರಣಿ ವೈಫಲ್ಯಗಳು. ಆದ್ದರಿಂದ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.ಇದನ್ನೂ ಓದಿ:ಈಶ್ವರಪ್ಪಗೆ ಶಾಲು ಹೊದಿಸಿ ಸನ್ಮಾನಿಸಿದ ಬಿಎಸ್ವೈ – ಹೆಗಲ ಮೇಲೆ ಕೈ ಹಾಕಿ ಮಾತಾಡಿದ ಕುಚಿಕುಗಳು!
ಇದೀಗ ರಾಜ್ಯದ ಹಿಂದಿನ ಜಾತಿ ಸಮೀಕ್ಷೆಯನ್ನು ಕೈಬಿಟ್ಟಿದ್ದೇವೆ ಎನ್ನುತ್ತಿದ್ದಾರೆ. ಹಾಗಾದರೆ 165 ಕೋಟಿ ರೂ. ಖರ್ಚು ಮಾಡಿದ್ದಕ್ಕೆ ಯಾರು ಹೊಣೆಗಾರರು? ಹಿಂದಿನ ಸರ್ವೇಗೆ ಮಾಡಿದ ಖರ್ಚಿಗೆ ಯಾರನ್ನು ಹೊಣೆ ಮಾಡುತ್ತೀರಿ? ಹೊಸ ಸಮೀಕ್ಷೆಗೆ ತಗಲುವ ವೆಚ್ಚಕ್ಕೆ ಯಾರನ್ನು ಜವಾಬ್ದಾರರನ್ನಾಗಿ ಮಾಡುತ್ತೀರಿ? ರಾಜ್ಯದ ತೆರಿಗೆ ಹಣವನ್ನು ನಿಮಗೆ ಬೇಕಾದಂತೆ ನೀರಿನಲ್ಲಿ ಹೋಮ ಮಾಡಲು ತಯಾರಿ ಮಾಡಿಕೊಂಡಿದ್ದೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.
ದತ್ತಾಂಶದ ಬಗ್ಗೆ ಹೈಕಮಾಂಡ್ ಅನುಮಾನ ವ್ಯಕ್ತಪಡಿಸಿದ್ದಾಗಿ ಹೇಳಿದ್ದಾರೆ. ದತ್ತಾಂಶವೇ ಸರಿ ಇಲ್ಲದೇ ಇರುವಾಗ ಅದನ್ನು ಆಧರಿಸಿ ಅವರು ಪ್ರವರ್ಗಗಳನ್ನು ಹೇಗೆ ನಿರ್ಮಾಣ ಮಾಡಿದ್ದಾರೆ? ಮೀಸಲಾತಿ ವರ್ಗೀಕರಣಕ್ಕೆ ಅದನ್ನು ಹೇಗೆ ಬಳಸಿದ್ದಾರೆ. ಒಂದು ಮನೆಯ ಪಂಚಾಂಗವೇ ಸರಿ ಇಲ್ಲದ ಮೇಲೆ ಮನೆ ಕಟ್ಟಲು ಹೇಗೆ ಸಾಧ್ಯ? ಇವುಗಳಿಗೆ ಮುಖ್ಯಮಂತ್ರಿಗಳೇ ಉತ್ತರಿಸಬೇಕಿದೆ. ಬಿಜೆಪಿ ನಾಯಕರು ಇದರ ಕುರಿತು ಪ್ರಶ್ನಿಸಿದಾಗ ಅತ್ಯಂತ ಉಡಾಫೆಯಿಂದ, ನಾನು ಜಾತಿಗಣತಿಗೆ ಬದ್ಧನಿದ್ದೇನೆ. ಅದನ್ನು ಮಾಡಿಯೇ ಮಾಡುತ್ತೇನೆ ಎಂದು ಪದೇಪದೇ ಹೇಳುತ್ತಿದ್ದರು. ಈಗ ಉಲ್ಟಾ ಹೊಡೆದಿದ್ದು ನೋಡಿದರೆ ಹಲವು ರೀತಿಯ ಅನುಮಾನಗಳು ವ್ಯಕ್ತವಾಗುತ್ತಿವೆ ಎಂದಿದ್ದಾರೆ.
ಹೊಸ ಸಮೀಕ್ಷೆಗೆ ಹಣ ಬಿಡುಗಡೆ ಮಾಡುವ ಮೊದಲು ಈ 165 ಕೋಟಿ ರೂ. ಖರ್ಚು ಮಾಡಿದ್ದಕ್ಕೆ ಯಾರು ಹೊಣೆ ಎಂಬುದನ್ನು ಮೊದಲು ಹೇಳಿ. ತೆರಿಗೆ ಹಣವನ್ನು ವ್ಯರ್ಥ ಮಾಡಿದ್ದಕ್ಕೆ ಬಿಜೆಪಿಯಿಂದ ವಿರೋಧವಿದೆ. ಸಿದ್ದರಾಮಯ್ಯನವರಿಗೆ ಹಿಂದುಳಿದ ವರ್ಗಗಳ ಬಗ್ಗೆ ಜನಪರ ಕಾಳಜಿ ಇದ್ದಲ್ಲಿ, ತಾನು ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ಎಲ್ಲವನ್ನೂ ಮಾಡಬಹುದಿತ್ತು. ಆದರೆ 10 ವರ್ಷ ಇದನ್ನು ದೊಡ್ಡ ಪ್ರಮಾಣದಲ್ಲಿ ಎಳೆಯುತ್ತ ಬಂದರು. 2024ರಲ್ಲಿ ಜಯಪ್ರಕಾಶ್ ಹೆಗ್ಡೆ, ವರದಿ ನೀಡಿದ್ದನ್ನು 14 ತಿಂಗಳ ಬಳಿಕ ಸಂಪುಟ ಸಭೆಗೆ ತಂದರು. ನಿಮ್ಮ ಬದ್ಧತೆ ಅಲ್ಲೇ ಗೊತ್ತಾಗಿತ್ತು. ಪದೇಪದೇ ಜನರ ದಿಕ್ಕು ತಪ್ಪಿಸುವ ಕೆಲಸ ನಡೆದಿತ್ತು. 165 ಕೋಟಿ ರೂ. ಖರ್ಚು ಮಾಡಿದ್ದಕ್ಕೆ ಹಿಂದಿನ ಆಯೋಗದ ಅಧ್ಯಕ್ಷರು ಹೊಣೆಯೇ? ಆಯೋಗ ರಚಿಸಿದ ಮುಖ್ಯಮಂತ್ರಿಗಳು, ಸಚಿವ ಸಂಪುಟವನ್ನು ಜವಾಬ್ದಾರಿ ಎನ್ನುತ್ತೀರಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಟೀಕಿಸಿದ್ದಾರೆ.
ಮತ್ತೊಂದು ಜಾತಿಗಣತಿ ಬೇಕೇ?
ಕೇಂದ್ರ ಸರ್ಕಾರವು ಜಾತಿಜನಗಣತಿ ಮಾಡುವುದಾಗಿ ಈಗಾಗಲೇ ಪ್ರಕಟಿಸಿದೆ. ಕೇಂದ್ರ ಒಂದೆಡೆ ಜಾತಿಗಣತಿ ಮಾಡುತ್ತಿರುವಾಗ ರಾಜ್ಯ ಸರ್ಕಾರವೂ ಮತ್ತೊಂದು ಜಾತಿಗಣತಿ ಮಾಡುವ ಅಗತ್ಯ ಇದೆಯೇ? ರಾಜ್ಯ ಸರ್ಕಾರ ಕೇಂದ್ರದ ಜಾತಿ ಜನಗಣತಿಗೆ ಸಹಕಾರ ಕೊಡಬೇಕು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಒಬಿಸಿಯವರನ್ನು ಬಳಸುವುದು ಮತ್ತು ಜನರ ದಿಕ್ಕು ತಪ್ಪಿಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
90 ದಿನಗಳ ಗಡುವು ನೀಡಿದ್ದು ಮತ್ತೊಂದು ಸುಳ್ಳು:
ಜಾತಿಗಣತಿ ಮಾಡಲು 90 ದಿನಗಳ ಗಡುವು ನೀಡಿದ್ದು ಮತ್ತೊಂದು ಸುಳ್ಳು, ಎಸ್ಸಿ (ಪರಿಶಿಷ್ಟ ಜಾತಿ) ಒಳಮೀಸಲಾತಿಗೆ ಸಂಬAಧಿಸಿದAತೆ ಒಂದು ತಿಂಗಳಲ್ಲಿ ಸಮೀಕ್ಷೆ ಮಾಡುವುದಾಗಿ ಹೇಳಿದ್ದರು. ಆ ಸಮೀಕ್ಷೆಯನ್ನೇ 3 ಬಾರಿ ಮುಂದೂಡಿದ್ದೀರಿ. ಈಗ 7 ಕೋಟಿ ಜನರ ಸಮೀಕ್ಷೆಗೆ 3 ತಿಂಗಳ ಗಡುವು ನೀಡಿದ್ದು, ಯಾರನ್ನು ಯಾಮಾರಿಸಲು ಹೊರಟಿದ್ದೀರಿ ಇದು ಸಾಧ್ಯವೇ? ಅಧಿಕಾರ ಬಿಟ್ಟು ಕೊಡಲು ನೀವು 90 ದಿನಗಳ ಗಡುವು ಹಾಕಿದಂತಿದೆ ಎಂದು ನನಗೆ ಅನಿಸುತ್ತದೆ ಎಂದಿದ್ದಾರೆ.
ಹೈಕಮಾಂಡ್ ಕಾಲ್ತುಳಿತಕ್ಕೆ ಸಿಲುಕಿದ ಮುಖ್ಯಮಂತ್ರಿ:
ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ 11 ಜನರು ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ಈ ವಿಷಯದಲ್ಲಿ ದಿನಕ್ಕೊಂದು ಸುಳ್ಳು ಹೇಳುತ್ತ, ಇದೀಗ ಜಾತಿಗಣತಿ ವಿಚಾರದಲ್ಲಿ ಹೈಕಮಾಂಡ್ ಕಾಲ್ತುಳಿತಕ್ಕೆ ಸಿದ್ದರಾಮಯ್ಯನವರು ಒಳಗಾಗಿದ್ದಾರೆ. ಕಳೆದ 10 ವರ್ಷಗಳಿಂದ ತಾವೇ ಮಾಡಿದ ಕಾಂತರಾಜು ಆಯೋಗದ ವರದಿ, ತಮಗೆ ಅಪಾಯ ತಂದಿದೆ ಎಂದು ಅನಿಸಿದಾಗಲೆಲ್ಲ ಜಾತಿಗಣತಿ, ಜಾತಿಗಣತಿ ಎಂದು ನೂರು ಬಾರಿ ಕರ್ನಾಟಕದ ಜನರಿಗೆ ಹೇಳುತ್ತಿದ್ದರು. ಇವತ್ತು ದತ್ತಾಂಶದಲ್ಲಿ ವ್ಯತ್ಯಾಸವಾಗಿದೆ ಎಂದು ಹೈಕಮಾಂಡ್ ಹೇಳಿದ ತಕ್ಷಣ ಈ ವರದಿಯನ್ನು ಕಸದ ಬುಟ್ಟಿಗೆ ಹಾಕುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮಾಡಿರುವುದು ಕರ್ನಾಟಕದ ಜನತೆಗೆ ಮಾಡಿದ ದ್ರೋಹ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಇಡಿ ತನಿಖೆಯಿಂದ ವಾಲ್ಮೀಕಿ ನಿಗಮ ಹಗರಣದ ಹಿಂದಿನ ಮಹಾನಾಯಕರ ಮುಖವಾಡ ಕಳಚಲಿದೆ: ಶ್ರೀರಾಮುಲು