ಸಂಸತ್‍ನಲ್ಲಿ ಕನ್ನಡದಲ್ಲಿ ಸುಮಲತಾ ಮೊದಲ ಮಾತು

Public TV
1 Min Read

– ರೈತರ ಸಮಸ್ಯೆ ಬಗ್ಗೆ ಪ್ರಸ್ತಾಪ

ನವದೆಹಲಿ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಕನ್ನಡದಲ್ಲಿ ಮಾತು ಆರಂಭಿಸಿ ಮಂಡ್ಯ ಜನತೆಗೆ ಶುಭ ಕೋರಿದ್ದಾರೆ.

ಸುಮಲತಾ ಅಂಬರೀಶ್ ಅವರು ಸಂಸತ್ತಿನಲ್ಲಿ, ನನ್ನ ಹೆಮ್ಮೆಯ ಕ್ಷೇತ್ರವಾದ ಮಂಡ್ಯದ ಸ್ವಾಭಿಮಾನಿ ಜನತೆಗೆ ಧನ್ಯವಾದಗಳು ಎಂದು ಮಂಡ್ಯ ಜನತೆಗೆ ಕನ್ನಡದಲ್ಲಿ ಶುಭಾಶಯ ಕೋರಿ ಇಂಗ್ಲಿಷ್‍ನಲ್ಲಿ ತಮ್ಮ ಮಾತನ್ನು ಮುಂದುವರಿಸಿದರು.

ರಾಜ್ಯದಲ್ಲಿ ಹಾಗೂ ನನ್ನ ಕ್ಷೇತ್ರ ಮಂಡ್ಯದಲ್ಲಿ ಜನರು ತೀವ್ರ ಬರ ಎದುರಿಸುತ್ತಿದ್ದಾರೆ. ಮಾನ್ಸೂನ್ ಮಳೆ ನಿಗದಿತ ಪ್ರಮಾಣದಲ್ಲಿ ಬಂದಿಲ್ಲ. ಅಲ್ಲದೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಬ್ಬು ಹಾಗೂ ಭತ್ತ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.

ರೈತರು ಕೃಷಿ ಸಾಲ ತೀರಿಸಲಾರದ ಪರಿಸ್ಥಿತಿ ತಲುಪಿದ್ದಾರೆ. ನಾವು ಎಲ್ಲರೂ ಕೂಡಲೇ ರೈತರ ನೆರವಿಗೆ ಬರಬೇಕು. ಪ್ರಧಾನಿ ಮೋದಿ ಹಾಗೂ ಜಲಶಕ್ತಿ ಸಚಿವರು ಈ ಬಗ್ಗೆ ತುರ್ತು ಗಮನ ಕೊಡಬೇಕು. ಬರ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕಿದೆ. ಎಲ್ಲರೂ ಸೇರಿ ಸಮಸ್ಯೆ ಬಗೆಹರಿಸಬೇಕಿದೆ ಎಂದು ಸುಮಲತಾ ಮನವಿ ಮಾಡಿಕೊಂಡರು.

ಸುಮಲತಾ ಅವರು ರೈತರ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ಇದಾದ ಬಳಿಕ ಸುಮಲತಾ ಅವರು ಜೈ ಜವಾನ್, ಜೈ ಕಿಸಾನ್, ಜೈ ಹಿಂದ್, ಜೈ ಕರ್ನಾಟಕ ಎಂದು ಘೋಷಣೆ ಮಾಡುವ ಮೂಲಕ ತಮ್ಮ ಮಾತನ್ನು ಮುಗಿಸಿದರು.

Share This Article
Leave a Comment

Leave a Reply

Your email address will not be published. Required fields are marked *