ಸುಮಲತಾ ಸಹೋದರಿಯಿದ್ದಂತೆ, ನಾನು ಅವರ ಮನೆಯ ಸದಸ್ಯ: ಎಂ.ಬಿ ಪಾಟೀಲ್

Public TV
1 Min Read

– ರಾಜಕೀಯಕ್ಕೆ ಬಂದ್ರೆ ಖಂಡಿತ ಬೆಂಬಲ

ಧಾರವಾಡ: ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಬಳಿಕ ಇದೀಗ ಅವರ ಕುಟುಂಬದಿಂದ ಸುಮಲತಾ ಅವರು ರಾಜಕೀಯಕ್ಕೆ ಬರಬೇಕು. ಅಲ್ಲದೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದು, ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಗೃಹ ಸಚಿವ ಎಂ.ಬಿ ಪಾಟೀಲ್ ಅವರು ಕೂಡ ಸುಮಲತಾ ಅವರಿಗೆ ಬೆಂಬಲ ಸೂಚಿಸುವುದಾಗಿ ಹೇಳಿದ್ದಾರೆ.

ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಹಾಗೂ ನಾನು ಆತ್ಮೀಯ ಹಾಗೂ ಬಹಳ ವರ್ಷದಿಂದ ಸ್ನೇಹಿತರಾಗಿದ್ದೆವು. ಅವರ ಧರ್ಮ ಪತ್ನಿ ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಿದ್ದಾರೆ. ಯಾಕಂದ್ರೆ ಮಂಡ್ಯದಲ್ಲಿ ಅವರ ಅಭಿಮಾನಿಗಳು ಬಹಳಷ್ಟು ಮಂದಿ ಇದ್ದಾರೆ ಎಂದರು.

ಸುಮಲತಾ ಅವರು ನಮ್ಮ ಸಹೋದರಿ ಇದ್ದಂತೆ. ಅವರಿಗೂ ಅಭಿಮಾನಿಗಳು ಬಹಳಷ್ಟು ಇದ್ದಾರೆ. ಅಂಬರೀಶ್ ಅವರ ನಿಧನದ ಬಳಿಕ ಅವರ ಕುಟುಂಬದವರು ರಾಜಕೀಯಕ್ಕೆ ಬರಬೇಕೆಂಬ ಒತ್ತಾಯ ಕೇಳಿಬರುತ್ತದೆ. ಆದ್ರೆ ಸುಮಲತಾ ಅವರು ಇನ್ನೂ ಕೂಡ ತಮ್ಮ ನಿಲುವನ್ನು ವ್ಯಕ್ತಪಡಿಸಿಲ್ಲ. ಒಂದು ವೇಳೆ ಸುಮಲತಾ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆಂದರೆ ನಮ್ಮ ಪಕ್ಷ ಖಂಡಿತವಾಗಿ ಬೆಂಬಲ ಸೂಚಿಸುತ್ತದೆ. ವೈಯಕ್ತಿಕವಾಗಿ ಹೇಳಬೇಕಂದ್ರೆ ನಾನು ಅಂಬರೀಶ್ ಕುಟುಂಬದ ಓರ್ವ ಸದಸ್ಯನಾಗಿದ್ದೇನೆ ಎಂದು ಹೇಳಿದ್ರು.

ಇತ್ತ ಪರಿಷತ್ ಸದಸ್ಯ ಶ್ರೀಕಂಠೇಗೌಡ ಅವರು ಸುಮಲತಾ ಅವರು ಮಂಡ್ಯದ ಗೌಡ್ತಿ ಅಲ್ಲ ಎಂಬ ಹೇಳಿಕೆ ನೀಡಿದ್ದು, ಆ ಬಳಿಕ ಮಂಡ್ಯ ಮನೆ ಮಗಳ ವಾದ ವಿವಾದ ಹುಟ್ಟಿಕೊಂಡಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮನೆಮಗಳು ಯಾರು ಎನ್ನುವುದರ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಮಂಡ್ಯದ ನಿಜವಾದ ಮನೆ ಮಗಳು ಲಕ್ಷ್ಮಿ ಅಶ್ವಿನ್ ಗೌಡ ಅಥವಾ ಸುಮಲತಾ ಎಂಬ ಚರ್ಚೆ ಎದ್ದಿದೆ. ಕಾಂಗ್ರೆಸ್‍ನಿಂದ ಸುಮಲತಾರನ್ನು ಕಣಕ್ಕಿಳಿಸಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಜೆಡಿಎಸ್‍ನಿಂದ ಲಕ್ಷ್ಮಿ ಅಶ್ವಿನ್ ಗೌಡ ಹೆಸರು ಚಾಲ್ತಿಗೆ ಬಂದಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *