ಮಕ್ಕಳಿಬ್ಬರಿಗೆ ವಿಷವುಣಿಸಿ ತಾನೂ ಕುಡಿದ್ಳು – ಕಂದಮ್ಮಗಳು ಬಲಿ, ತಾಯಿ ಗಂಭೀರ

Public TV
1 Min Read

ಕೋಲಾರ: ಪತಿಯ ಕಿರುಕುಳ ತಾಳಲಾರದೆ ಪತ್ನಿ ತನ್ನಿಬ್ಬರೂ ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಂತಾರ್ಲಹಳ್ಳಿಯಲ್ಲಿ ನಡೆದಿದೆ.

ಮಕ್ಕಳಿಬ್ಬರಿಗೆ ವಿಷವುಣಿಸಿದ್ದ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಕುಮಾರ್(3) ಹಾಗೂ ಮಧು(5) ಮೃತ ಗಂಡು ಮಕ್ಕಳು. ಆದರೆ ತಾಯಿ ರಾಧಮ್ಮ ಸ್ಥಿತಿ ಚಿಂತಾಜನಕವಾಗಿದ್ದು, ಆಕೆಯನ್ನ ಕೋಲಾರದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.

ಪತಿ ಕೃಷ್ಣಪ್ಪ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಪತ್ನಿಗೆ ಪ್ರತಿನಿತ್ಯ ಕಿರುಕುಳ ಕೊಡುತ್ತಿದ್ದನು. ಕೊನೆಗೆ ಮಾನಸಿಕ ಕಿರುಕುಳ ತಾಳಲಾರದೆ ರಾಧಮ್ಮ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದಳು. ಮೊದಲು ತನ್ನಿಬ್ಬರು ಮಕ್ಕಳಿಗೆ ವಿಷಕುಡಿಸಿ ಬಳಿಕ ತಾನು ವಿಷ ಕುಡಿದಿದ್ದಾಳೆ. ಆದರೆ ವಿಷದ ತೀವ್ರತೆಗೆ ಮಕ್ಕಳು ಬಲಿಯಾಗಿದ್ದು, ಈಗ ತಾಯಿ ರಾಧಮ್ಮ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪತಿ ಕೃಷ್ಣಪ್ಪನನ್ನ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಈ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *