ಭೀಮನ ಅಮಾವಾಸ್ಯೆಯಂದು ಗಂಡನ ಪೂಜೆ ಮಾಡಿ ಆತ್ಮಹತ್ಯೆ ಕೇಸ್ – ಪತಿಗೆ ಅನೈತಿಕ ಸಂಬಂಧದ ಶಂಕೆಯಿಂದ ಪತ್ನಿ ಸೂಸೈಡ್

Public TV
2 Min Read

ನೆಲಮಂಗಲ: ಭೀಮನ ಅಮಾವಾಸ್ಯೆಯಂದು ಗಂಡನ ಪೂಜೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ ಮಹಿಳೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಪತಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಮಹಿಳೆ ನೇಣಿಗೆ ಬಲಿಯಾಗಿದ್ದಾಳೆ ಎಂದು ತನಿಖೆ ವೇಳೆ ಬಯಲಾಗಿದೆ.

ಮೃತ ಮಹಿಳೆಯನ್ನು ಸ್ಪಂದನಾ (24) ಎಂದು ಗುರುತಿಸಲಾಗಿದೆ. ಗುರುವಾರ ಬೆಂಗಳೂರು ಉತ್ತರ ತಾಲೂಕಿನ ಅಂಚೆಪಾಳ್ಯ (Anchepalya) ಗ್ರಾಮದಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಕೊಡಗಿನಲ್ಲಿ ನಿರಂತರ ಮಳೆ – ಭೂಕುಸಿತ ಆತಂಕದ ನಡುವೆಯೇ ಜನರ ಜೀವನ

ಸ್ಪಂದನಾ ಕಾಲೇಜಿಗೆ ಹೋಗುತ್ತಿದ್ದ ಸಮಯದಲ್ಲಿ ಅಭಿಷೇಕ್ ಎಂಬಾತನನ್ನು ಪ್ರೀತಿಸಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಳು. ಸ್ಪಂದನಾ ಪೋಷಕರ ವಿರೋಧದ ನಡುವೆಯೇ ಇಬ್ಬರು ಮದುವೆಯಾಗಿದ್ದರು.

ಹಲವು ದಿನಗಳಿಂದ ಅಭಿಷೇಕ್‌ಗೆ ಅಪರಿಚಿತ ಯುವತಿಯೊಬ್ಬಳು ಕರೆ ಮಾಡುತ್ತಿದ್ದಳು. ಹೀಗಾಗಿ ಅಭಿಷೇಕ್ ಕೂಡ ಆ ಯುವತಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಸ್ಪಂದನಾಗೆ ಶಂಕೆ ವ್ಯಕ್ತವಾಗಿತ್ತು. ಜೊತೆಗೆ ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಹಲವು ಬಾರಿ ಗಲಾಟೆಯಾಗಿತ್ತು. ಆ ಸಮಯದಲ್ಲಿ ಇನ್ಮುಂದೆ ಆಕೆಯ ಜೊತೆಗೆ ಮಾತಾಡುವುದಿಲ್ಲ ಎಂದು ಅಭಿಷೇಕ್ ಹೇಳಿದ್ದ. ಆದರೆ ಮೊನ್ನೆ ಭೀಮನ ಅಮಾವಾಸ್ಯೆ ದಿನ ಸ್ಪಂದನಾ ಪತಿ ಅಭಿಷೇಕ್‌ಗೆ ಪೂಜೆ ಮಾಡುವ ವೇಳೆಯೇ ಆ ಯುವತಿಯಿಂದ ಮತ್ತೆ ಕರೆ ಬಂದಿತ್ತು. ಇದರಿಂದ ನೊಂದ ಸ್ಪಂದನಾ ಕೋಣೆಗೆ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

ಇದಕ್ಕೂ ಮುನ್ನ, ಮದುವೆಯಾದ ಬಳಿಕ ಪತಿ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಕಿರುಕುಳ ಸ್ಪಂದನಾ ನೀಡುತ್ತಿದ್ದರು. ಬಳಿಕ 5 ಲಕ್ಷ ರೂ. ಹಣವನ್ನ ಕೊಟ್ಟು ರಾಜಿ ಸಂಧಾನ ಮಾಡಿಸಿದ್ದರು ಎನ್ನಲಾಗಿತ್ತು. ಅತ್ತೆ ಮಾತನ್ನ ಕೇಳಿ ನನ್ನ ಗಂಡ ಕಿರುಕುಳ ಕೊಡ್ತಿದ್ದಾನೆ ಎಂದು ತಂದೆಗೆ ಕರೆ ಮಾಡಿ ಸ್ಪಂದನಾ ಕಣ್ಣೀರಿಟ್ಟಿದ್ದಳು. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಕರೆ ಮಾಡಿ ನಿಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂದು ಪತಿ ಕುಟುಂಬಸ್ಥರು ತಿಳಿಸಿದ್ದರು.

ಸ್ಪಂದನಾ ಕುಟುಂಬಸ್ಥರು ಪತಿ ಅಭಿಷೇಕ್ ಮತ್ತು ಅತ್ತೆ ಲಕ್ಷ್ಮಮ್ಮ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ (Madanayakanahalli) ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.ಇದನ್ನೂ ಓದಿ: ಮುಂಗಾರು ಅಬ್ಬರ – ಕಾವೇರಿ ನದಿಯಲ್ಲಿ ಪಿಂಡ ಪ್ರದಾನ ನಿಷೇಧ

Share This Article