ಕಾಂಗ್ರೆಸ್‍ನವ್ರು ರೈಲು, ಬಸ್ ಯಾವುದಲ್ಲಾದ್ರೂ ಹೋಗ್ಲಿ, ಆದ್ರೆ ಸಂದರ್ಭ ನೋಡಿ ಪ್ರತಿಭಟನೆ ಮಾಡ್ಲಿ: ಸುಧಾಕರ್

Public TV
2 Min Read

ಬೆಂಗಳೂರು: ಕಾಂಗ್ರೆಸ್ ಅವರು ರೈಲಿನಲ್ಲಾದರೂ ಹೋಗಲಿ, ಬಸ್‍ನಲ್ಲಾದರೂ ಹೋಗಲಿ, ಟ್ರೆಕ್ಕಿಂಗ್ ಮಾಡಲಿ. ಇವೆಲ್ಲವೂ ಅವರ ಆರೋಗ್ಯಕ್ಕೆ ಒಳ್ಳೆಯದು. ಮಾಡುವುದನ್ನು ಮಾಡಲಿ, ಸಮಯ ನೋಡಿ ಮಾಡಲಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಅವರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಾದಯಾತ್ರೆ ದುರಾದೃಷ್ಟಕರ. ಸರ್ಕಾರದ ಕಾನೂನು ಪಾಲನೆ ಮಾಡದ ಪಕ್ಷಕ್ಕೆ ವಿರೋಧ ಪಕ್ಷ ಅಂತ ಕರೆಯಕ್ಕಾಗುತ್ತಾ? ಮುಂದೊಂದು ದಿನ ಇವರೇ ಆಡಳಿತ ಮಾಡಿದಾಗ, ವಿಪಕ್ಷಗಳು ಛೀಮಾರಿ ಹಾಕಿದಾಗ ಇವರಿಗೆ ಹೇಗೆ ಅನ್ನಿಸುತ್ತದೆ? ಇದರ ಕನಿಷ್ಟ ತಿಳುವಳಿಕೆ ಅವರಿಗೆ ಇರಬೇಕಿತ್ತು. ಕಾಂಗ್ರೆಸ್‍ನವರು ಕುದುರೆ ರೇಸ್ ಆದರೂ ಮಾಡಲಿ, ಮ್ಯಾರಥಾನ್ ಆದರೂ ಮಾಡಲಿ. ಈಗಾಗಲೇ ಅವರು ಜಟಕಾ ಗಾಡಿ, ಎತ್ತಿನ ಗಾಡಿ, ಸೈಕಲ್‍ನಲ್ಲಿ ಹೋಗಿದ್ದಾರೆ. ಈಗ ರೈಲಿನಲ್ಲಾದರೂ ಹೋಗಲಿ, ಬಸ್‍ನಲ್ಲಾದರೂ ಹೋಗಲಿ, ಟ್ರೆಕ್ಕಿಂಗ್ ಮಾಡಲಿ ಇವೆಲ್ಲವೂ ಅವರ ಆರೋಗ್ಯಕ್ಕೆ ಒಳ್ಳೆಯದು. ಮಾಡುವುದನ್ನು ಮಾಡಲಿ, ಸಮಯ ನೋಡಿ ಮಾಡಲಿ ಎಂದು ಕಾಂಗ್ರೆಸ್ ನಾಯಕರ ಕಾಲೆಳೆದಿದ್ದಾರೆ.

 

ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್ ನಿಯಂತ್ರಿಸಲು ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಜನರಲ್ಲಿ ಒಂದು ಶಿಸ್ತು ಬರಲಿ ಎಂದು ಮಾಡಿದ್ದೇವೆ. ಆದರೆ ಇದು ಸಂಪೂರ್ಣ ಲಾಕ್‍ಡೌನ್ ಅಲ್ಲ. ವೀಕೆಂಡ್ ವೇಳೆ ಎರಡು ದಿನ ಜನರು ಮನೆಯಲ್ಲಿದ್ದು ಅನಗತ್ಯವಾಗಿ ಓಡಾಡುವುದನ್ನು ಕಡಿವಾಣ ಹಾಕಿ ಮಾರ್ಗಸೂಚಿ ಪಾಲಿಸಿದರೆ ಕೊರೊನಾ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ 7.55% ಪಾಸಿಟಿವಿಟಿ ದರ ಇದೆ. ಐದಾರು ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೊದಲನೇ ಮತ್ತು ಎರಡನೇ ಅಲೆಗಳಲ್ಲಿ ನಾವು ಬಹಳಷ್ಟು ಕಷ್ಟ ಅನುಭವಿಸಿದ್ದೇವೆ. ಎಲ್ಲ ತಿಳಿದೂ ಯಾವ ಕ್ರಮ ಕೂಡಾ ತೆಗೆದುಕೊಳ್ಳದೇ ಇರುವುದು ಸರಿಯಲ್ಲ. ಹಾಗಾಗಿ ಮೊದಲಿನಿಂದಲೇ ಸೋಂಕು ನಿಯಂತ್ರಣ ಮಾಡಬೇಕೆಂದು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 8,449, ಬೆಂಗಳೂರಿನಲ್ಲಿ 6,812 ಪಾಸಿಟವ್ – 4 ಸಾವು

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಶೇ. 2ರಷ್ಟು ಸಹ ಇಲ್ಲ. ಸರ್ಕಾರ ಸುಳ್ಳು ಹೇಳುತ್ತಿದೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಬಗ್ಗೆ ಡಿಕೆಶಿಗೆ ಮಾಹಿತಿಯ ಕೊರತೆ ಇದೆ. ಡಿಕೆಶಿ ಆರೋಪಕ್ಕೆ ನಾನು ಏನೂ ಮಾತಾಡುವುದಿಲ್ಲ. ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ. ಇಡೀ ವಿಶ್ವದಲ್ಲಿ ಯಾವ ವಿರೋಧ ಪಕ್ಷವೂ ಸರ್ಕಾರದ ಕೋವಿಡ್ ನಿಯಂತ್ರಣ ಟೀಕಿಸಿಲ್ಲ. ಇಡೀ ವಿಶ್ವದಲ್ಲಿ ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕಲು ಹೋಗಿಲ್ಲ. ಎಲ್ಲ ಕಡೆಯೂ ವಿಪಕ್ಷಗಳು ಸರ್ಕಾರದ ಜೊತೆಗೆ ಕೈ ಜೋಡಿಸಿವೆ. ನಮ್ಮಲ್ಲಿ ವಿಪಕ್ಷ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಇಂಥ ಸಮಯದಲ್ಲಿ ರಾಜಕಾರಣ ಸರಿಯಲ್ಲ. ಜನ ಎಲ್ಲರನ್ನು ನೋಡುತ್ತಿದಾರೆ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸಿ ಹೋರಾಟ ಮಾಡ್ಬೇಡಿ – ಕಾಂಗ್ರೆಸ್‍ಗೆ ಕಾರಜೋಳ ಮನವಿ

ಕಂದಾಯ ಸಚಿವ ಆರ್. ಅಶೋಕ್‍ಗೆ ಪಾಸಿಟಿವ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಅಶೋಕ್ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿಲ್ಲ. ನಾನು ಅಶೋಕ್ ಅವರನ್ನು ಭೇಟಿ ಮಾಡಿ ಹತ್ತು ದಿನ ಆಗಿದೆ ಎಂದಿದ್ದಾರೆ.

ಆದರೆ ಮೊನ್ನೆ ಅಶೋಕ್ ಜೊತೆ ತಜ್ಞರ ಸಭೆಯಲ್ಲಿದ್ದರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ, ಆವತ್ತು ನಾನೂ ಮಾಸ್ಕ್ ಹಾಕಿದ್ದೆ, ಅವರೂ ಮಾಸ್ಕ್ ಹಾಕಿದ್ದರು. ಎರಡು ದಿನಗಳ ಹಿಂದೆ ನಾನೂ ಮತ್ತು ಸಿಎಂ ಟೆಸ್ಟ್ ಮಾಡಿಸಿದ್ದೇವೆ. ನಮಗೆ ಕೊರೊನಾ ನೆಗೆಟಿವ್ ವರದಿ ಬಂದಿದೆ. ನಾನು ಇಲ್ಲಿಯವರೆಗೂ 50-60 ಸಲ ಟೆಸ್ಟ್ ಮಾಡಿಸಿದ್ದೇನೆ. ನಿಮ್ಮೆಲ್ಲರ ಹಾರೈಕೆಯಿಂದ ಪಾಸಿಟಿವ್ ಬಂದಿಲ್ಲ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *