ಇನ್ಫೋಸಿಸ್ ಫೌಂಡೇಶನ್‍ನಿಂದ 100 ಕೋಟಿ ದೇಣಿಗೆ

Public TV
2 Min Read

ಬೆಂಗಳೂರು: ಕೊರೊನಾ ಸೋಂಕಿತರಿಗೆಂದೇ ಪ್ರತ್ಯೇಕ ಆಸ್ಪತ್ರೆ ಸ್ಥಾಪಿಸಲು ನೆರವು ನೀಡುವುದಾಗಿ ಘೋಷಿಸಿದ ಬಳಿಕ ಇದೀಗ ಇನ್ಫೋಸಿಸ್ ಮತ್ತೆ ಸಹಾಯ ಹಸ್ತ ಚಾಚಿದ್ದು, 100 ಕೋಟಿ ರೂ. ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಇನ್ಫೋಸಿಸ್ ಫೌಂಡೇಶನ್, ಕೊರೊನಾ ವಿರುದ್ಧ ಹೋರಾಡಲು ಒಟ್ಟು 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 50 ಕೋಟಿ ರೂ. ಪಿಎಂ ಕೇರ್ಸ್ ನಿಧಿಗೆ ವರ್ಗಾಯಿಸಲಾಗುವುದು. ಉಳಿದ ಹಣವನ್ನು ರೋಗಿಗಳ ಚಿಕಿತ್ಸೆಗೆ ಆಸ್ಪತ್ರೆಗಳ ಸಾಮರ್ಥ್ಯ ವಿಸ್ತರಣೆಗೆ ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ ವೆಂಟಿಲೇಟರ್, ಪರೀಕ್ಷಾ ಕಿಟ್ ಹಾಗೂ ಪರ್ಸನಲ್ ಪ್ರೋಆ್ಯಕ್ಟಿವ್ ಇಕ್ವಿಪ್‍ಮೆಂಟ್(ಪಿಪಿಇ)ಗಳಾದ ಮಾಸ್ಕ್ ಸೇರಿದಂತೆ ಇನ್ನಿತರೆ ಪರಿಕರಗಳನ್ನು ಆರೋಗ್ಯ ರಕ್ಷಣೆ ಸಿಬ್ಬಂದಿಗೆ ನೀಡಲು ಮುಂದಾಗಿದೆ.

ಅಲ್ಲದೆ ದುರ್ಬಲ ವರ್ಗದವರಿಗೆ ಆಹಾರ ಮತ್ತು ಪೌಷ್ಠಿಕಾಂಶ ಲಭ್ಯವಾಗುವಂತೆ ಮಾಡಲು ಇದನ್ನು ಬಳಸಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ ಕೊರೊನಾ ವೈರಸ್‍ಗೆಂದೇ ಪ್ರತ್ಯೇಕ ಆಸ್ಪತ್ರೆ ಸ್ಥಾಪನೆಗೆ ನೆರವು ನೀಡುವುದಾಗಿ ಘೋಷಿಸಿತ್ತು. ಅಲ್ಲದೆ ದೇಶದ ಮಿಲಿಟರಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯಕೀಯ ಮತ್ತು ಪಿಪಿಇ ಸಲಕರಣೆ ನೀಡುವುದಾಗಿ ಘೋಷಿಸಿದೆ.

ಈ ಕುರಿತು ಮಾತನಾಡಿರುವ ಸುಧಾಮೂರ್ತಿ ಅಗತ್ಯವಿರುವ ಎಲ್ಲರಿಗೂ ಪರಿಹಾರ ಸಾಮಗ್ರಿಗಳು ತಲುಪುವಂತೆ ಮಾಡುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಚಿಕಿತ್ಸೆಗೆ ಹಣ ಭರಿಸಲು ಸಾಧ್ಯವಾಗದ ರೋಗಿಗೆ ನಮ್ಮ ಆರೋಗ್ಯ ರಕ್ಷಣೆ ಸಿಬ್ಬಂದಿ ನೆರವಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪವರ್ ಸ್ಟಾರ್, ಸುಮಲತಾರಿಂದಲೂ ಸಹಾಯ ಹಸ್ತ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಇಂದು ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಪುನೀತ್, ಮುಖ್ಯಮಂತ್ರಿಗಳಿಗೆ 50 ಲಕ್ಷ ರೂ. ಚೆಕ್ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಎಸ್‍ವೈ, ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರು ಕೋವಿಡ್_19 ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಬಲಪಡಿಸುವ ಕೋರಿಕೆಗೆ ಸ್ಪಂದಿಸಿ, 50 ಲಕ್ಷ ರೂಪಾಯಿಗಳ ದೇಣಿಗೆಯ ಚೆಕ್ ಹಸ್ತಾಂತರಿಸಿದರು ಎಂದು ಫೋಟೋ ಸಮೇತ ಬರೆದುಕೊಂಡಿದ್ದಾರೆ.

ಈ ಹಿಂದೆ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ 50 ಲಕ್ಷ ರೂ. ದೇಣಿಗೆ ನೀಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಸಂಸದೆ, ಕೋವಿಡ್ -19 ಮಹಾಮಾರಿ ದೇಶದಲ್ಲಿ ಹರಡುತ್ತಿದ್ದು, ಅದರ ವಿರುದ್ಧದ ಹೋರಾಟದ ಸಂದರ್ಭದಲ್ಲಿ ನನ್ನ ಕಳಕಳಿಯ ಕೊಡುಗೆಯಾಗಿದೆ. ಮೊದಲಿಗೆ ಮಂಡ್ಯದ ಮಿಮ್ಸ್ ಗೆ ಕೊರೊನ ವಿರುದ್ಧ ಹೊರಾಡುವ ಸಲುವಾಗಿ ವೆಂಟಿಲೇಟರ್ ಮತ್ತು ಅಗತ್ಯ ಸಲಕರಣೆಗಳನ್ನು ಖರೀದಿಸಲು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 50 ಲಕ್ಷ ರೂ. ಗಳನ್ನು ನೀಡಿದ್ದೇನೆ ಎಂದು ಲೆಟರ್ ಪೋಸ್ಟ್ ಮಾಡಿದ್ದರು. ಅಲ್ಲದೆ ಇದೀಗ ಸಂಸದರ ನಿಧಿಯಿಂದ ಮತ್ತೆ 1 ಕೋಟಿ ರೂ.ಬಿಡುಗಡೆ ಮಾಡಿದ್ದಾರೆ.

ಇನ್ನೊಂದು ಟ್ವೀಟ್ ಮಾಡಿ, ಪ್ರಧಾನ ಮಂತ್ರಿಗಳ ತುರ್ತು ಪರಿಹಾರ ನಿಧಿಗೆ ನನ್ನ ಎರಡು ತಿಂಗಳ ವೇತನ 2 ಲಕ್ಷ ರೂ. ಗಳನ್ನು ದೇಣಿಗೆಯಾಗಿ ನೀಡಿದ್ದೇನೆ. ಅಲ್ಲದೆ ಎರಡು ತಿಂಗಳ ವೇತನ 2 ಲಕ್ಷ ರೂ. ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್-19ಕ್ಕೆ ನೀಡಿದ್ದೇನೆ ಎಂದು ಬರೆದುಕೊಂಡು ನರೇಂದ್ರ ಮೋದಿ, ಬಿಎಸ್ ಯಡಿಯೂರಪ್ಪ, ಶ್ರೀರಾಮುಲುಗೆ ಟ್ಯಾಗ್ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *