Exclusive – 1 ನಿಮಿಷದ ಮೊದಲು ಗೊತ್ತಾಯಿತು: ಸುಧಾಮೂರ್ತಿ

Public TV
2 Min Read

ಬೆಂಗಳೂರು: ನಾನು ರಾಜ್ಯಸಭೆಗೆ (Rajya Sabha) ನಾಮನಿರ್ದೇಶನವಾಗಿರುವ ವಿಚಾರ 1 ನಿಮಿಷದ ಮೊದಲು ತಿಳಿಯಿತು ಎಂದು ಇನ್ಫೋಸಿಸ್‌ ಫೌಂಡೇಶನ್‌ (Infosys Foundation) ಅಧ್ಯಕ್ಷೆ ಸುಧಾಮೂರ್ತಿ (Sudha Murty) ಹೇಳಿದ್ದಾರೆ.

ಸಮಾಜ ಸೇವೆ ಮತ್ತು ಶಿಕ್ಷಣಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗೆ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ನಾಮನಿರ್ದೇಶನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮಧ್ಯಾಹ್ನ 12:57ಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುಧಾಮೂರ್ತಿ ಅವರನ್ನು ನಾಮನಿರ್ದೇಶನ ಮಾಡಿದ ವಿಷಯವನ್ನು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆ ರದ್ದು

 

ನಾಮನಿರ್ದೇಶನಗೊಂಡ ಹಿನ್ನೆಲೆಯಲ್ಲಿ ಪಬ್ಲಿಕ್‌ ಟಿವಿ ಮಧ್ಯಾಹ್ನ 1 ಗಂಟೆಯ ತನ್ನ ನ್ಯೂಸ್‌ ಬುಲೆಟಿನ್‌ನಲ್ಲಿ ಸುಧಾಮೂರ್ತಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿತು. ಈ ವೇಳೆ ಮಾತನಾಡಿದ ಅವರು, ಸದ್ಯ ನಾನು ವಿದೇಶದಲ್ಲಿ ಇದ್ದೇನೆ. 1 ನಿಮಿಷದ ಹಿಂದೆ ನಾಮನಿರ್ದೇಶನಗೊಂಡ ವಿಷಯ ತಿಳಿಯಿತು ಎಂದು ಹೇಳಿದರು. ಇದನ್ನೂ ಓದಿ: PublicTV Explainer: ಬೆಂಗಳೂರಿಗೆ ಬಂತು ಮೊದಲ ಚಾಲಕ ರಹಿತ ಮೆಟ್ರೋ ರೈಲು – ವಿಶೇಷತೆಗಳು ನಿಮಗೆಷ್ಟು ಗೊತ್ತು?

ರಾಜಕಾರಣದಲ್ಲಿ ಸೇವೆ ಮಾಡುವಂತಹ ಅವಕಾಶ ಸಿಗುತ್ತೆ ಎಂದು ನಿರೀಕ್ಷೆ ಮಾಡಿದ್ರಾ ಎಂಬ ಪ್ರಶ್ನೆಗೆ, ರಾಜಾಕರಣದಲ್ಲಿ ಸೇವೆ ಮಾಡುವಂತ ಅವಕಾಶ ಸಿಗುತ್ತೆ ಅಂತ ನಾನು ಯೋಚನೆ ಮಾಡಿರಲಿಲ್ಲ. ಇವತ್ತು ಪ್ರಧಾನಿ ಮೋದಿಯವರು ಟ್ವೀಟ್‌ ಮಾಡಿದ ನಂತರ ವಿಚಾರ ತಿಳಿಯಿತು. ನಮ್ಮ ಕುಟುಂಬದವರಿಗೂ ಯಾರಿಗೂ ವಿಷಯ ಗೊತ್ತಿಲ್ಲ. ನನ್ನ ಕೈಯಲ್ಲಿ ಆಗುವಷ್ಟು ಕೆಲಸ ಮಾಡುತ್ತೇನೆ. ನನ್ನಿಂದ ಏನಾದರೂ ಸಹಾಯವಾಗಲಿ ಅಷ್ಟೇ ನಾನು ಬಯಸುತ್ತೇನೆ ಎಂದು ಉತ್ತರಿಸಿದರು.

ಎಕ್ಸ್‌ನಲ್ಲಿ ಮೋದಿ, ಭಾರತದ ರಾಷ್ಟ್ರಪತಿಗಳು ರಾಜ್ಯಸಭೆಗೆ ಸುಧಾಮೂರ್ತಿ ಅವರನ್ನು ನಾಮನಿರ್ದೇಶನ ಮಾಡಿರುವುದು ನನಗೆ ಖುಷಿ ತಂದಿದೆ. ಸಮಾಜಸೇವೆ, ಲೋಕೋಪಕಾರ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸುಧಾ ಮೂರ್ತಿಯವರ ಕೊಡುಗೆ ಅಪಾರ ಮತ್ತು ಸ್ಪೂರ್ತಿದಾಯಕವಾಗಿದೆ. ರಾಜ್ಯಸಭೆಯಲ್ಲಿ ಅವರ ಉಪಸ್ಥಿತಿಯು ನಮ್ಮ ‘ನಾರಿ ಶಕ್ತಿ’ಗೆ ಪ್ರಬಲವಾದ ಸಾಕ್ಷಿಯಾಗಿದೆ. ಇದು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಉದಾಹರಣೆ. ಅವರ ಸಂಸದೀಯ ಅವಧಿ ಫಲಪ್ರದವಾಗಲಿ ಎಂದು ಹಾರೈಸಿದ್ದಾರೆ.

Share This Article