ಕ್ಯಾಪ್ಟೆನ್ಸಿಗಾಗಿ ಮೋಸದಾಟ ಆಡಿದ ಭವ್ಯಾಗೆ ಸುದೀಪ್‌ ವಾರ್ನಿಂಗ್‌

Public TV
2 Min Read

ಬಿಗ್‌ ಬಾಸ್‌ ಮನೆಯ ಆಟ (Bigg Boss Kannada 11) ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ. 90 ದಿನಗಳನ್ನು ಪೂರೈಸಿ ಮುನ್ನಗ್ಗುತ್ತಿರುವ ಆಟ ಮತ್ತಷ್ಟು ರೋಚಕವಾಗಿದೆ. 3ನೇ ಬಾರಿ ಭವ್ಯಾ (Bhavya Gowda) ಕ್ಯಾಪ್ಟನ್ ಆಗಿದ್ದಾರೆ. ಆದರೆ ಈ ಬಾರಿ ಅವರು ಮೋಸದಿಂದ ಕ್ಯಾಪ್ಟನ್ ಆಗಿದ್ದಾರೆ.ಈ ಮೋಸದಾಟವನ್ನು ಸುದೀಪ್ ಹೊರಗೆಳೆದರು. ಆದರೆ ಭವ್ಯಾ ಸಿಕ್ಕಿಬಿದ್ದರೂ ಸುಳ್ಳು ಹೇಳುವುದು ಬಿಟ್ಟಿರಲಿಲ್ಲ. ಆಗ ಸುದೀಪ್ ತಮ್ಮದೇ ಶೈಲಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಟಾಸ್ಕ್‌ವೊಂದರಲ್ಲಿ 9ನೇ ಸಂಖ್ಯೆಯ ಬುಟ್ಟಿಯಲ್ಲಿರುವ ಚೆಂಡುಗಳನ್ನು ಬುಟ್ಟಿಗೆ ಹಾಕುವ ಟಾಸ್ಕ್ ಅನ್ನು ಕ್ಯಾಪ್ಟೆನ್ಸಿ ಟಾಸ್ಕ್ ಆಗಿ ನೀಡಲಾಗಿತ್ತು. ರಜತ್, ಮೋಕ್ಷಿತಾ, ಭವ್ಯಾ, ತ್ರಿವಿಕ್ರಮ್, ಧನರಾಜ್ ಅವರುಗಳು ಆಟದ ರೇಸ್‌ನಲ್ಲಿದ್ದರು. ಉಗ್ರಂ ಮಂಜು, ಚೈತ್ರಾ ಅವರುಗಳು ಉಸ್ತುವಾರಿ ಆಗಿದ್ದರು. ಈ ವೇಳೆ ಭವ್ಯಾ, ಬೇರೆ ಸಂಖ್ಯೆಯ ಡಬ್ಬಿಯಿಂದ ಬಿದ್ದ ಚೆಂಡನ್ನು ಎತ್ತಿಕೊಂಡು ಬುಟ್ಟಿಗೆ ಹಾಕಿ ಟಾಸ್ಕ್ ಗೆದ್ದರು ಮಾತ್ರವಲ್ಲದೆ ಮನೆಯ ಕ್ಯಾಪ್ಟನ್ ಸಹ ಆದರು. ಭವ್ಯಾ ರೂಲ್ಸ್‌ ಬ್ರೇಕ್‌ ಮಾಡಿದನ್ನು ರಜತ್ ನೋಡಿದರೂ ಸಹ ಹೇಳಿರಲಿಲ್ಲ. ಈಗ ಎಲ್ಲರೆದುರು ಸುದೀಪ್ (Sudeep) ವಿಡಿಯೋ ತೋರಿಸಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಸಾಕ್ಷಿ ಸಮೇತ ತೋರಿಸಿದರೂ ಸಹ ಸುದೀಪ್‌ ಮುಂದೆ ಭವ್ಯಾ ಅದೇ ಸುಳ್ಳುಗಳನ್ನು ಮುಂದುವರೆಸಿದರು. ಆ ಚೆಂಡು ಎಲ್ಲಿಂದ ಬಿದ್ದಿದ್ದು ಎಂಬುದನ್ನು ನಾನು ನೋಡಿರಲಿಲ್ಲ ಎಂದರು. ಆ ನಂತರ ಇನ್ನೊಂದು ವಿಡಿಯೋ ಅನ್ನು ಸುದೀಪ್ ಹಾಕಿದರು. ಅದರಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಉಸ್ತುವಾರಿಗಳಾದ ಚೈತ್ರಾ ಹಾಗೂ ಮಂಜು ಕೇಳಿದ ಪ್ರಶ್ನೆಗಳಿಗೆ ಭವ್ಯಾ ಬೇಕೆಂದೇ ಸುಳ್ಳು ಹೇಳಿದರು. ಮೋಸ ಮಾಡಿ ಕ್ಯಾಪ್ಟನ್ ಆಗಿದ್ದಲ್ಲದೆ, ಸುದೀಪ್ ಎದುರು ಆ ಸುಳ್ಳನ್ನೇ ಸತ್ಯ ಮಾಡುವ ಪ್ರಯತ್ನ ಮಾಡಿದರು.

ಸುಮ್ಮನೆ ಇರು ಎಂದು ನೀವು ಹೇಳಿದ್ದು, ಬೇರೆ ಕಾರಣಕ್ಕೆ ಅಲ್ಲ ಬದಲಿಗೆ ನಾನು ಮೋಸ ಮಾಡುತ್ತಿದ್ದೀನಿ, ನೀನು ನೋಡಿದರೂ ನೋಡದಂತೆ ಇರು ಎಂದು ಸುಮ್ಮನೆ ಇರು, ಸುಮ್ಮನೆ ಇರು ಎಂದು ಮೆಲುದನಿಯಲ್ಲಿ ರಜತ್‌ಗೆ ಹೇಳಿದ್ದು ಎಂದು ಸ್ಪಷ್ಟವಾಗಿ ಸುದೀಪ್‌ ಹೇಳಿದರು. ಇಷ್ಟ ಆದರೂ ತಪ್ಪನ್ನು ಒಪ್ಪಿಕೊಳ್ಳದ ಭವ್ಯಾಗೆ ಸರಿಯಾಗಿ ಸುದೀಪ್‌ ಕ್ಲಾಸ್‌ ತೆಗೆದುಕೊಂಡರು. ಜೊತೆಗೆ ಭವ್ಯಾ ಪರ ನಿಂತಿದ್ದಕ್ಕೆ ರಜತ್‌ಗೂ ಸುದೀಪ್‌ ತರಾಟೆಗೆ ತೆಗೆದುಕೊಂಡರು.

Share This Article