ನಾನು ಆತ್ಮಚರಿತ್ರೆ ಬರೆದರೆ ಸಾಕಷ್ಟು ಜನ ಮರ್ಯಾದೆ ಕಳೆದುಕೊಳ್ತಾರೆ: ಸುಬ್ರಮಣಿಯನ್ ಸ್ವಾಮಿ

Public TV
1 Min Read

ನವದೆಹಲಿ: ರಾಜ್ಯಸಭೆಯ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ನಾನು ಆತ್ಮಚರಿತ್ರೆ ಬರೆದರೆ ಸಾಕಷ್ಟು ಜನ ತಮ್ಮ ಮರ್ಯಾದೆ ಕಳೆದುಕೊಳ್ತಾರೆ ಅಂತ ಮುನ್ನೆಚ್ಚರಿಕೆ ನೀಡಿದ್ದಾರೆ.

ಭಾನುವಾರದಂದು ಸುಬ್ರಮಣಿಯನ್ ಸ್ವಾಮಿ ಅವರ ಪತ್ನಿ ರಾಕ್ಸ್ನಾ ಸ್ವಾಮಿ ‘ಎವಾಲ್ವಿಂಗ್ ವಿತ್ ಸುಬ್ರಮಣಿಯನ್ ಸ್ವಾಮಿ- ಎ ರೋಲರ್ ಕೋಸ್ಟರ್ ರೈಡ್’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮಿ, ತಾನು ಯಾವತ್ತೂ ಪ್ರಧಾನಿ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಕೇಳಿರಲಿಲ್ಲ. ಪ್ರಧಾನಿಯೂ ಸಚಿವ ಸ್ಥಾನದ ಆಫರ್ ನೀಡರಲಿಲ್ಲ ಅಂದ್ರು. ನಾನು ಸಮಯ ಬಂದಾಗ ಸಚಿವನಾಗ್ತೀನಿ. ಸಮಯ ಬಂದಾಗ ನನಗೆ ಏನು ಬೇಕೋ ಅದನ್ನು ಪಡೆಯುತ್ತೇನೆ ಅಂತ ಹೇಳಿದ್ರು.

ವಿವಾದಾತ್ಮಕ ಹೇಳಿಕೆಗಳಿಂದ ಹೆಸರುವಾಸಿಯಾಗಿರುವ ಸ್ವಾಮಿ, ನನ್ನ ವಿರುದ್ಧ ಟೀಕೆ ಮಾಡಿದವರನ್ನ ಎಂದಿಗೂ ಸುಮ್ಮನೆ ಬಿಟ್ಟಿಲ್ಲ. ಯಾರಾದ್ರೂ ಟೀಕೆ ಮಾಡಿದ್ರೆ ನಾನು ಅವರ ಬೆನ್ನು ಬೀಳುತ್ತೇನೆ. ಕೊನೆಯವರೆಗೂ ಅವರ ಬೆನ್ನು ಬೀಳುತ್ತೇನೆ ಅಂದ್ರು.

ನಾನು ಏನು ಮಾಡ್ಬೇಕೋ ಅದನ್ನು ಮಾಡುವುದು ಮತ್ತು ಅದನ್ನು ಸಾಧ್ಯವಾದಷ್ಟೂ ಒಳ್ಳೆಯ ರೀತಿಯಲ್ಲಿ ಮಾಡುವುದೇ ನನ್ನ ಜೀವನದ ಮುಖ್ಯ ಧ್ಯೇಯ ಅಂತ ಸ್ವಾಮಿ ಹೇಳಿದ್ರು.

ಸ್ವಾಮಿ ಅವರನ್ನ ದೆಹಲಿಯಿಂದ ಅಭ್ಯರ್ಥಿಯಾಗಿ ಪರಿಗಣಿಸಲಾಗಿದೆ ಎಂಬ ವದಂತಿಯ ಬಗ್ಗೆ ಮಾತನಾಡಿದ ಅವರು, ನನಗೆ ದೆಹಲಿಯಿಂದ ಸೀಟ್ ಬೇಕಿಲ್ಲ. ಆದರೂ ಅರವಿಂದ ಕೇಜ್ರಿವಾಲ್‍ಗೆ ಎದುರಾಳಿಯಾಗಿ ನನ್ನನ್ನು ಅಭ್ಯರ್ಥಿ ಮಾಡಬೇಕೆಂದು ಶೇ.80 ರಷ್ಟು ಕಾರ್ಯಕರ್ತರು ಇಚ್ಛಿಸಿದ್ದರು ಎಂದು ಅಂದಿನ ದೆಹಲಿ ಘಟಕದ ಅಧ್ಯಕ್ಷರು ನನಗೆ ಹೇಳಿದ್ದರು. ಆದರೆ ನನಗೆ ದೆಹಲಿಯಿಂದ ಸೀಟು ನಿರಾಕರಿಸಲಾಯ್ತು. ಆ ಬಗ್ಗೆ ನಾನು ದೂರಲಿಲ್ಲ ಅಂದ್ರು

ಸೀಟ್ ನಿರಾಕರಿಸಿದ್ದು ಯಾರು ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ಪುಸ್ತಕ ಬಿಡುಗಡೆಯಾಗುತ್ತಿರುವುದು ನನ್ನದಲ್ಲ. ನಾನು ಪುಸ್ತಕ ಬರೆದಿದ್ದರೆ ಯಾವುದೇ ಸಂಕೋಚವಿಲ್ಲದೆ ಅವರ ಹೆಸರನ್ನು ಬರೆಯುತ್ತಿದ್ದೆ ಅಂದ್ರು.

Share This Article
Leave a Comment

Leave a Reply

Your email address will not be published. Required fields are marked *