ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ – ದೂರು ದಾಖಲಾಗ್ತಿದ್ದಂತೆ ಶಿಕ್ಷಕ ಎಸ್ಕೇಪ್

Public TV
1 Min Read

ಚಿತ್ರದುರ್ಗ: ಶಿಕ್ಷಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದು, ತರಗತಿ ಕೊಠಡಿಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಗಂಭೀರ ಆರೋಪ ಚಿತ್ರದುರ್ಗ ಜಿಲ್ಲೆಯಲ್ಲಿ ಕೇಳಿ ಬಂದಿದೆ. ಇದೀಗ ವಿದ್ಯಾರ್ಥಿನಿಯರ ಪೋಷಕರು ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದಾರೆ.

ಸುಮಾರು 51 ವರ್ಷದ ತಿಪ್ಪೇಸ್ವಾಮಿ ಚಿತ್ರದುರ್ಗ ನಗರದ ಗೋಪಾಲಪುರ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು. ತಿಪ್ಪೇಸ್ವಾಮಿ ವಿದ್ಯಾರ್ಥಿನಿಯರ ಜೊತೆ ಅಸಹ್ಯವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. 6 ಹಾಗೂ 7ನೇ ತರಗತಿಯ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದು, ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಶಾಲೆಯಲ್ಲಿ ಮೊಬೈಲ್ ಮೂಲಕ ಅಶ್ಲೀಲ ವಿಡಿಯೋಗಳನ್ನು ಹಾಕಿ ವಿದ್ಯಾರ್ಥಿನಿಯರಿಗೆ ತೋರಿಸುತ್ತಿದ್ದನು ಎನ್ನಲಾಗಿದೆ. ಶಿಕ್ಷಕನ ಕಾಮ ಚೇಷ್ಠೆಗೆ ಬೇಸತ್ತಿದ್ದ ವಿದ್ಯಾರ್ಥಿನಿಯರು ಅನುಭವಿಸುತ್ತಿರುವ ಕಷ್ಟವನ್ನೆಲ್ಲ ಪೋಷಕರ ಬಳಿ ಹೇಳಿಕೊಂಡಿದ್ದಾರೆ.

ಬಾಲಕಿಯರು ಹಾಗೂ ಪೋಷಕರು ಮಹಿಳಾ ಠಾಣೆಗೆ ಆಗಮಿಸುತ್ತಿದ್ದಂತೆ, ನೇರವಾಗಿ ಠಾಣೆಗೆ ಆಗಮಿಸಿದ ಎಸ್‍ಪಿ ಜಿ. ರಾಧಿಕ ಅಪ್ರಾಪ್ತ ಬಾಲಕಿಯರ ಜೊತೆ ಮಾತುಕತೆ ನಡೆಸಿದರು. ಶಾಲೆಯಲ್ಲಿ ಮಕ್ಕಳಿಗೆ ಆದ ದೌರ್ಜನ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೆ ಆರೋಪಿ ಶಿಕ್ಷಕನ ವಿರುದ್ಧ ಪೊಕ್ಸೋ ಪ್ರಕರಣ ದಾಖಲಿಸಿದ್ದು, ಆರೋಪಿಯ ಹುಡುಕಾಟ ಆರಂಭಿಸಿದ್ದಾರೆ. ಇನ್ನೂ ಪ್ರಕರಣದ ವಿಷಯ ತಿಳಿಯುತ್ತಿದ್ದಂತೆ ಕಾಮಿ ಶಿಕ್ಷಕ ತಿಪ್ಪೇಸ್ವಾಮಿ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಈ ಬಗ್ಗೆ 7 ವಿದ್ಯಾರ್ಥಿನಿಯರ ಹೇಳಿಕೆ ಆಧರಿಸಿ ಪೋಷಕರು ಮಹಿಳಾ ಠಾಣೆಯಲ್ಲಿ ಕಾಮಿ ಶಿಕ್ಷಕ ತಿಪ್ಪೇಸ್ವಾಮಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಎಫ್‍ಐಆರ್ ಆದ ಬಳಿಕ ಪ್ರತಿಕ್ರಿಯಿಸಿದ ಪೋಷಕರು, ಈ ಪಾಪಿ ಶಿಕ್ಷಕನನ್ನು ಬಂಧಿಸಿ ಆ್ಯಸಿಡ್ ಹಾಕಿ ವಿಷ ಕೊಟ್ಟು ಸಾಯಿಸಬೇಕು. ನಮಗೆ ನ್ಯಾಯ ಬೇಕು. ನಮ್ಮ ಮಕ್ಕಳಿಗೆ ಆದ ಹಿಂಸೆ ಮತ್ತೆ ಯಾರಿಗೂ ಆಗಬಾರದು ಎಂದು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *