ಈ ಶಾಲೆಯ ಮಕ್ಕಳು 2 ವರ್ಷದಿಂದ ಬಿಸಿಯೂಟದ ರುಚಿಯನ್ನೇ ಕಂಡಿಲ್ಲ!

Public TV
1 Min Read

ಯಾದಗಿರಿ: ಶಾಲೆ ಪ್ರಾರಂಭವಾಗಿ ಎರಡು ವರ್ಷ ಕಳೆದ್ರೂ ಯಾದಗಿರಿ ತಾಲೂಕಿನ ಅಲ್ಲಿಪೂರ ವಾರಿ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳೂ ಇದೂವರೆಗೂ ಬಿಸಿಯೂಟದ ರುಚಿಯನ್ನು ಮಾತ್ರ ಕಂಡಿಲ್ಲ.

ಹೌದು. ಈ ಹಿಂದೆ ಶಿಕ್ಷಕರು ಇಲ್ಲವೆಂಬ ಕಾರಣ ನೀಡಿ ಅಲ್ಲಿಪೂರದ ಶಾಲೆಯನ್ನು ಮುಚ್ಚಲಾಗಿತ್ತು. 2015ರಲ್ಲಿ ಶಿಕ್ಷಕರ ನೇಮಕ ಮಾಡಿದ ಬಳಿಕ ಸದ್ಯ 25 ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಆದ್ರೆ ಶಾಲೆಗೆ ಬರುವ ಬಡ ಕುಟುಂಬದ ಮಕ್ಕಳಿಗೆ ಮಾತ್ರ ಬಿಸಿಯೂಟ ಇಲ್ಲದಂತಾಗಿದೆ. ಶಾಲೆ ಮುಚ್ಚುವ ಮುನ್ನ ಸರ್ಕಾರದ ಬಿಸಿಯೂಟ ಯೋಜನೆಯಲ್ಲಿ ಸಾಮಗ್ರಿಗಳು, ಅಡುಗೆ ಸಾಹಯಕರನ್ನು ಸಹ ನೇಮಿಸಿಲಾಗಿತ್ತು.

ಶಾಲೆ ಪುನರಾರಂಭವಾಗಿ ಎರಡು ವರ್ಷ ಕಳೆದ್ರೂ ಇದೂವರೆಗೂ ಮಕ್ಕಳಿಗಾಗಿ ಬಿಸಿಯೂಟದ ವ್ಯವಸ್ಥೆಯನ್ನು ಮಾಡಿಲ್ಲ. ಹೀಗಾಗಿ ಶಾಲೆಯಲ್ಲಿರುವ ಬಿಸಿಯೂಟದ ಕೋಣೆಗೆ ಬೀಗ ಹಾಕಲಾಗಿದೆ. ಅಡುಗೆ ಕೋಣೆಯಲ್ಲಿ ಗ್ಯಾಸ್, ಪಾತ್ರೆಗಳು ಸೇರಿದಂತೆ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿವೆ. ಈ ಕುರಿತು ಶಾಲೆಯ ಮುಖ್ಯ ಗುರುಗಳು ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದರೂ ಪ್ರಯೋಜನವಾಗಿಲ್ಲ.

ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರೋದ್ರಿಂದ ಪಕ್ಕದ 1 ಕಿ.ಮೀ. ದೂರದಲ್ಲಿರುವ ಸಮನಾಪೂರ ಸರ್ಕಾರಿ ಶಾಲೆಯಿಂದ ಬಿಸಿಯೂಟ ತರಿಸಬೇಕಾಗಿದೆ. ಹೀಗಾಗಿ ಸರ್ಕಾರ ವಾಹನದ ವ್ಯವಸ್ಥೆಯನ್ನು ಮಾಡಬೇಕಿದೆ ಎಂದು ಶಾಲೆಯ ಮುಖ್ಯಗುರುಗಳಾದ ಅಶೋಕ್ ಹೇಳುತ್ತಾರೆ.

ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಉತ್ತಮಪಡಿಸಲು ಸರ್ಕಾರವು ಬಿಸಿ ಊಟ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ವಿದ್ಯಾರ್ಥಿಗಳು ಯಾವಾಗ ನಮಗೆ ನಮ್ಮ ಶಾಲೆಯಲ್ಲೇ ಬಿಸಿ ಊಟ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಕಲಿಯುತ್ತಿದ್ದಾರೆ.

 

 

Share This Article
Leave a Comment

Leave a Reply

Your email address will not be published. Required fields are marked *