ಚಿಕ್ಕಬಳ್ಳಾಪುರ: ಕಾಲೇಜಿಗೆ ಹೋಗುತ್ತೇನೆ ಎಂದು ವಿದ್ಯಾರ್ಥಿಗಳು ಪಾರ್ಕಿನಲ್ಲಿ ಮೋಜು ಮಾಡುತ್ತಿರುವ ದೃಶ್ಯ ಚಿಕ್ಕಬಳ್ಳಾಪುರದಲ್ಲಿ ಕಂಡು ಬಂದಿದೆ.
ಚಿಕ್ಕಬಳ್ಳಾಪುರ ನಗರ ಹೊರವಲಯದ ಸೂಲಾಲಪ್ಪನದಿನ್ನೆಯಲ್ಲಿರುವ ಅರಣ್ಯವನ್ನು ಮಾರ್ಪಡಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಅರಣ್ಯ ಇಲಾಖೆ ಟ್ರೀ ಪಾರ್ಕ್ ಮಾಡಿದೆ. ಕೆಲವು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಿದೆ. ಆದರೆ ಇತ್ತೀಚೆಗೆ ಸಾರ್ವಜನಿಕರ ಬದಲು ಸುತ್ತಮುತ್ತಲಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾಲೇಜಿಗೆ ಚಕ್ಕರ್ ಹೊಡೆದು ನೇರವಾಗಿ ಟ್ರೀ ಪಾರ್ಕ್ ಗೆ ಬಂದು ಅಸಭ್ಯವಾಗಿ ವರ್ತಿಸುತ್ತಾರೆ. ಇದನ್ನು ನೋಡಿ ಪಾರ್ಕಿಗೆ ಬರುವ ಸಾರ್ವಜನಿಕರು ಅಸಹ್ಯಪಡುವ ಸ್ಥಿತಿ ಬಂದಿದೆ.
ಅರಣ್ಯ ಇಲಾಖೆಯ ಸೂಲಾಲಪ್ಪನದಿನ್ನೆಯ ಟ್ರೀ ಪಾರ್ಕ್ ಸುತ್ತಮುತ್ತ ಡಿಪ್ಲೋಮಾ, ಎಂಜಿನಿಯರಿಂಗ್, ಮ್ಯಾನೇಜ್ಮೆಂಟ್, ಐಟಿಐ, ಡಿಗ್ರಿ ಖಾಸಗಿ ಕಾಲೇಜುಗಳಿವೆ. ಕಾಲೇಜುಗಳಿಗೆ ಹೋಗುತ್ತೇವೆ ಎಂದು ಮನೆಯಲ್ಲಿ ಹೇಳಿ ಚಿಕ್ಕಬಳ್ಳಾಪುರ ನಗರಕ್ಕೆ ಬರುವ ಅದೆಷ್ಟೋ ಜನ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಕಾಲೇಜು ಬ್ಯಾಗ್ ಊಟದ ಬಾಕ್ಸ್ ಗಳ ಸಮೇತ ನೇರವಾಗಿ ಬೆಳ್ಳಂಬೆಳಗ್ಗೆ ತಮ್ಮ ಗರ್ಲ್ ಫ್ರೆಂಡ್ ಹಾಗೂ ಬಾಯ್ ಫ್ರೆಂಡ್ಗಳ ಜೊತೆ ಪಾರ್ಕಿಗೆ ಬರುತ್ತಾರೆ. ವಿದ್ಯಾರ್ಥಿಗಳು ಓದು ಬರಹ ಎಲ್ಲವನ್ನು ಮರೆತು ಮೋಜುಮಸ್ತಿಯಲ್ಲಿ ತೊಡಗುತ್ತಿದ್ದಾರೆ.
ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಅರಣ್ಯ ಇಲಾಖೆ ಜಾಣ ಕುರುಡಾಗಿದೆ. ಕಾಡಿನಂತಿದ್ದ ಸೂಲಾಲಪ್ಪನದಿನ್ನೆಯ ಅರಣ್ಯದಲ್ಲಿ, ಲಕ್ಷಾಂತರ ರೂ. ಖರ್ಚು ಮಾಡಿ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸಿ, ಮುಕ್ತ ಪ್ರವೇಶ ನೀಡಿದೆ. ಸುಂದರ ಗಿಡಮರ ಬಳ್ಳಿಗಳ ಸೌಂದರ್ಯ ಸವಿಯಬೇಕಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಈಗ ವೈಯಕ್ತಿಕ ದೇಹ ಸೌಂದರ್ಯ ಸವಿಯುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ.