ಸತ್ತು ಹೋಗಿದ್ದೇನೆ ರಜೆ ಕೊಡಿ ಎಂದು ಪತ್ರ – ಮಂಜೂರು ಮಾಡಿದ ಪ್ರಾಂಶುಪಾಲ

Public TV
1 Min Read

ಲಕ್ನೋ: ಸತ್ತು ಹೋಗಿದ್ದೇನೆ ರಜೆ ಕೊಡಿ ಎಂದು ಪತ್ರ ಬರೆದ ವಿದ್ಯಾರ್ಥಿಗೆ ಪ್ರಾಂಶುಪಾಲ ರಜೆ ಮಂಜೂರು ಮಾಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

8ನೇ ತರಗತಿ ವಿದ್ಯಾರ್ಥಿಯೊಬ್ಬ ರಜೆ ಕೇಳಲು ಪತ್ರದಲ್ಲಿ ತಪ್ಪಾಗಿ ತಾನು ಸತ್ತು ಹೋಗಿದ್ದೇನೆ ಎಂದು ಬರೆದಿದ್ದಾನೆ. ಆಶ್ಚರ್ಯದ ವಿಷಯ ಏನೆಂದರೆ ಪ್ರಾಂಶುಪಾಲ ವಿದ್ಯಾರ್ಥಿಗೆ ರಜೆಯನ್ನು ಮಂಜೂರು ಮಾಡಿದ್ದಾರೆ. ಸದ್ಯ ವಿದ್ಯಾರ್ಥಿ ಬರೆದ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿದ್ಯಾರ್ಥಿ ಪತ್ರದಲ್ಲಿ ತನ್ನ ಅಜ್ಜಿ ಮೃತಪಟ್ಟಿದ್ದಾರೆ ಎಂದು ಬರೆಯುವ ಬದಲು ತಾನು ಸತ್ತು ಹೋಗಿದ್ದೇನೆ ಎಂದು ತಪ್ಪಾಗಿ ಬರೆದಿದ್ದಾನೆ. ರಜೆ ಮಂಜೂರು ಆದ ಬಳಿಕ ವಿದ್ಯಾರ್ಥಿ ತನ್ನ ಅಜ್ಜಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾನೆ. ಈ ಪತ್ರ ವೈರಲ್ ಆಗುತ್ತಿದ್ದಂತೆ ಭಾರೀ ಚರ್ಚೆಗೆ ಕಾರಣವಾಗಿದೆ.

ಪತ್ರದಲ್ಲಿ ವಿದ್ಯಾರ್ಥಿ, “ಮಾನ್ಯ ಪ್ರಾಂಶುಪಾಲರೇ, ಇಂದು(ಅಗಸ್ಟ್ 20) ಬೆಳಗ್ಗೆ ಸುಮಾರು 10 ಗಂಟೆಗೆ ನಾನು ಸತ್ತು ಹೋಗಿದ್ದೇನೆ. ದಯವಿಟ್ಟು ನನಗೆ ಅರ್ಧ ದಿನ ರಜೆ ಕೊಡಿ” ಎಂದು ಬರೆದಿದ್ದಾನೆ. ಪತ್ರವನ್ನು ಓದದೇ ಪ್ರಾಂಶುಪಾಲ ರೆಡ್ ಪೆನ್‍ನಲ್ಲಿ ಸಹಿ ಮಾಡಿ ರಜೆ ಮಂಜೂರು ಮಾಡಿದ್ದಾರೆ.

ಶಾಲೆಯ ವ್ಯಕ್ತಿಯೊಬ್ಬ ಈ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಂತೆ ಈ ಪತ್ರ ಭಾರೀ ವೈರಲ್ ಆಗಿದ್ದು, ಜನರು ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *