ಬಾವಿಯಲ್ಲಿ ಬಿದ್ದು ವಿದ್ಯಾರ್ಥಿನಿ ಸಾವು – ತಾಯಿ ವಿರುದ್ಧವೇ ತಂದೆಯಿಂದ ಕೊಲೆ ಆರೋಪ

Public TV
1 Min Read

ಚಿಕ್ಕಬಳ್ಳಾಪುರ: ಬಾವಿಯಲ್ಲಿ ಬಿದ್ದು 4ನೇ ತರಗತಿಯ 10 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಶಾಮರಾವ್ ಹೊಸಪೇಟೆ ಗ್ರಾಮದಲ್ಲಿ ನಡೆದಿದೆ.

ರುಷ್ಮಿತಾ ಮೃತ ಮಗು. ನಿನ್ನೆ ಸಂಜೆ ಶಾಲೆಯಿಂದ ಬಂದ ರುಷ್ಮಿತಾ ಮನೆಯ ಪಕ್ಕದಲ್ಲೇ ಕೂಗಳತೆ ದೂರದ ಜಮೀನು ಬಳಿ ತೆರಳಿದ್ದು, ಜಮೀನಿನಲ್ಲಿರುವ ಬಾವಿಯಲ್ಲಿ ಬಿದ್ದಿದ್ದಾಳೆ. ರುಷ್ಮಿತಾ ಕಾಣಿಸುತ್ತಿಲ್ಲ ಎಂದು ಹುಡುಕಾಡಿದಾಗ ಬಾವಿಯ ಬಳಿ ಬಾಲಕಿಯ ಚಪ್ಪಲಿಯೊಂದು ಪತ್ತೆಯಾಗಿದ್ದು, ಬಾವಿಯಲ್ಲಿ ಶೋಧ ನಡೆಸಿದಾಗ ರುಷ್ಮಿತಾಳ ಮೃತದೇಹ ಪತ್ತೆಯಾಗಿದೆ.

ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ನೆರವಿನಿಂದ ರುಷ್ಮಿತಾಳ ಮೃತದೇಹವನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ರುಷ್ಮಿತಾಳ ತಾಯಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನುಮಾನಸ್ಪದ ಅಸಹಜ ಸಾವು ಎಂಬ ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಹಿಜಬ್‍ಗಾಗಿ ಪಟ್ಟು ಹಿಡಿದ ವಿದ್ಯಾರ್ಥಿನಿಯರ ಮನವೊಲಿಸಿದ ಅಧಿಕಾರಿಗಳು

ಈ ಮಧ್ಯೆ ರುಷ್ಮಿತಾಳ ತಂದೆ ಮಂಜುನಾಥ್ ಇದು ಆಕಸ್ಮಿಕ ಸಾವಲ್ಲ, ಉದ್ದೇಶಪೂರ್ವಕವಾಗಿಯೇ ತಾಯಿಯೇ ಕೊಲೆ ಮಾಡಿದ್ದಾಳೆ ಅಂತ ಆರೋಪಿಸಿ ಚಿಂತಾಮಣಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

ರುಷ್ಮಿತಾ ಹಾಗೂ ಮತ್ತೋರ್ವ ಮಗನ ಜೊತೆ ರುಷ್ಮಿತಾಳ ತಾಯಿ ತನ್ನ ತವರು ಮನೆ ಶಾಮರಾವ್ ಹೊಸಪೇಟೆಯಲ್ಲಿ ವಾಸವಾಗಿದ್ದರು. ರುಷ್ಮಿತಾಳ ತಂದೆ ಹುಲಗುಮ್ಮನಹಳ್ಳಿ ನಿವಾಸಿಯಾಗಿದ್ದು, ಕೌಟುಂಬಿಕ ಕಲಹದಿಂದ ಗಂಡ ಹೆಂಡತಿ 2018ರಿಂದ ಬೇರೆ ಬೇರೆಯಾಗಿ ವಾಸವಾಗಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕ್ಯಾಬ್ ಚಾಲಕನಿಗೆ ಚಾಕುವಿನಿಂದ ಇರಿದ ವಿದೇಶಿ ಮಹಿಳೆ

Share This Article
Leave a Comment

Leave a Reply

Your email address will not be published. Required fields are marked *