ವ್ಯಾಲೆಂಟೈನ್ಸ್ ಡೇ ದಿನವೇ ಕಾಲೇಜ್ ಕಟ್ಟಡದಿಂದ ಹಾರಿದ ವಿದ್ಯಾರ್ಥಿ

Public TV
2 Min Read

ಬೆಳಗಾವಿ: ಪ್ರೀತಿ ನಿರಾಕರಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬ ಕಾಲೇಜಿನ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಶಿವಪ್ರಸಾದ್ ಪವಾರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಗಜಪರವಾಡಿ ಗ್ರಾಮದ ನಿವಾಸಿಯಾಗಿದ್ದು, ಬೆಳಗಾವಿಯ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಾಲ್ಕನೇ ಸೆಮಿಸ್ಟರ್ ನಲ್ಲಿ ಸಿವಿಲ್ ವಿಭಾಗದಲ್ಲಿ ಓದುತ್ತಿದ್ದನು. ಪ್ರೀತಿಸಿದ ಹುಡುಗಿ ಪ್ರೇಮ ನಿವೇದನೆಯನ್ನ ತಿರಸ್ಕರಿಸಿದ್ದಕ್ಕೆ ಕಾಲೇಜಿನ ನಾಲ್ಕನೇ ಮಹಡಿಯ ಮೇಲಿಂದ ಬಿದ್ದು ಶಿವಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತರಗತಿಯಲ್ಲಿದ್ದಾಗ ಕೆಳಗೆ ಏನೋ ವಸ್ತು ಬಿದ್ದ ಶಬ್ದ ಕೇಳಿಬಂದಿತ್ತು. ಹೊರಗೆ ಬಂದು ನೋಡಿದಾಗ ಶಿವಪ್ರಸಾದ್ ಬಿದ್ದಿದ್ದನು ತಕ್ಷಣ ಆತನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿಯೇ ಶಿವಪ್ರಸಾದ್ ಮೃತಪಟ್ಟಿದ್ದನು ಎಂದು ವಿದ್ಯಾರ್ಥಿ ಪ್ರಕಾಶ್ ಹೇಳಿದ್ದಾನೆ.

ಶಿವಪ್ರಸಾದ್ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯೊಬ್ಬಳನ್ನ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದನು. ಈ ಬಗ್ಗೆ ಯುವತಿ ತಮ್ಮ ಮನೆಯಲ್ಲಿ ಪ್ರೀತಿಯನ್ನು ಒಪ್ಪುವುದಿಲ್ಲ ಎಂದು ಹೇಳಿ ಈತನ ಪ್ರೀತಿಯನ್ನು ನಿರಾಕರಿಸಿದ್ದಳು. ಇದೇ ವಿಚಾರಕ್ಕೆ ಕಳೆದ ಒಂದು ವರ್ಷದಿಂದ ಶಿವಪ್ರಸಾದ್ ತಲೆಕೆಡಿಸಿಕೊಂಡಿದ್ದನು. ಆಗಾಗ ಅವಳು ನನಗೆ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೂಡ ಹೇಳುತ್ತಿದ್ದನು. ಆದರೆ ಕಳೆದ ಒಂದು ತಿಂಗಳಿನಿಂದ ಬಹಳ ಆರಾಮಾಗಿದ್ದು, ಚೆನ್ನಾಗಿ ವ್ಯಾಸಂಗ ಮಾಡುತ್ತಿದ್ದನು. ತನ್ನ ಪ್ರೀತಿಯ ಬಗ್ಗೆ ಏನು ಹೇಳುತ್ತಿರಲಿಲ್ಲ. ಆದರೆ ಇಂದು ಪ್ರೇಮಿಗಳ ದಿನ ಹಿನ್ನೆಲೆಯಲ್ಲಿ ಮತ್ತೊಮ್ಮೆ ಆಕೆಗೆ ಪ್ರಪೋಸ್ ಮಾಡಿದ್ದು, ಮತ್ತೆ ಆಕೆಯಿಂದ ಅದೇ ಉತ್ತರ ಬಂದಿರಬಹುದು. ಇದರಿಂದ ತನಗೆ ಸಿಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದು ಶಿವಪ್ರಸಾದ್ ಕಾಲೇಜಿನ ನಾಲ್ಕನೇ ಮಹಿಡಿಯಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಶಿವಪ್ರಸಾದ್ ರೂಮ್ ಮೇಟ್ ಕುಮಾರ್ ತಿಳಿಸಿದ್ದಾನೆ.

ಸದ್ಯಕ್ಕೆ ಶಿವಪ್ರಸಾದ್ ಪ್ರೀತಿ ಮಾಡುವ ವಿಚಾರವನ್ನ ಆತನ ಗೆಳೆಯರು ಬಾಯಿ ಬಿಟ್ಟಿದ್ದಾರೆ. ಆದರೆ ನಿಜವಾಗಿಯೂ ಇಂದು ಆತ ಪ್ರೀತಿ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡನಾ ಅಥವಾ ಆತ ಮೇಲಿಂದ ಹಾರುವ ಸಂದರ್ಭದಲ್ಲಿ ಆತನೊಂದಿಗೆ ಯುವತಿಯೂ ಇದ್ದಳೇ ಎನ್ನುವ ಅನುಮಾನಗಳು ಮೂಡುತ್ತಿವೆ. ಈ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರಬರಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *