ಆತ್ಮಹತ್ಯೆಗೆ ಟಿಪ್ಪು ಡ್ರಾಪ್, ಅನಾಥ ಶವಗಳಿಗೆ ನಂದಿಬೆಟ್ಟವೇ ಆಸರೆ!

Public TV
1 Min Read

ಚಿಕ್ಕಬಳ್ಳಾಪುರ: ಬೆಂಗಳೂರಿಗರ ಹಾಟ್ ಪೇವರಿಟ್ ಸ್ಪಾಟ್, ವಿಶ್ವವಿಖ್ಯಾತ ನಂದಿಗಿರಿಧಾಮ ಇದೀಗ ಸಾಯುವವರಿಗೂ ಮತ್ತು ಸಾಯಿಸೋವವರಿಗೂ ಸುರಕ್ಷಿತ ಸ್ಥಳವಾಗಿದೆ. ನಂದಿಗಿರಿಧಾಮದಲ್ಲಿ ದಿನೇ ದಿನೇ ಕ್ರೈಂ ಜಾಸ್ತಿಯಾಗುತ್ತಿದ್ದು, ಅಪರಾಧ ಕೃತ್ಯಗಳಿಗೆ ನಂದಿಬೆಟ್ಟವೇ ಹಾಟ್ ಫೇವರಿಟ್ ಎಂಬಂತಾಗಿದೆ.

ಮೂರು ದಿನಗಳ ಹಿಂದೆ ಎಲ್ಲೋ ಕೊಲೆ ಮಾಡಿರುವ ಅನಾಥ ಶವ ತಂದು ಬೆಟ್ಟದ ಬುಡದಲ್ಲಿ ಸುಟ್ಟು ಹಾಕಿ ಹೋಗಿದ್ದಾರೆ. ಕಳೆದ ವರ್ಷವೂ ಸಹ ಗೃಹಿಣಿಯೊಬ್ಬಳು ತನ್ನ ಹಾಲುಗಲ್ಲದ ಮಗು ಜೊತೆ ನಂದಿಗಿರಿಧಾಮದ ಟಿಪ್ಪು ಡ್ರಾಪ್ ನಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಳು. ಕಳೆದ ಮೂರು ತಿಂಗಳ ಅವಧಿಯಲ್ಲಿ ಟಿಪ್ಪು ಡ್ರಾಪ್‍ನಿಂದ ಬಿದ್ದು ಇಬ್ಬರು ಆತ್ಮಹತ್ಯೆಗೆ ಶರಣಾದರೆ, ಕೆಲವರು ಬೆಟ್ಟದ ತಪ್ಪಲಲ್ಲಿ ನೇಣಿಗೂ ಶರಣಾಗಿದ್ದಾರೆ. ಅಷ್ಟೇ ಅಲ್ಲದೇ ದಂಪತಿಗಳಿಬ್ಬರು ನಂದಿಬೆಟ್ಟಕ್ಕೆ ಬಂದಾಗ ಆಕಸ್ಮಿಕ ಕಾಲುಜಾರಿ ಬಿದ್ದು, ಪತಿ ಬದುಕುಳಿದು ಪತ್ನಿ ಸಾವನ್ನಪ್ಪಿದ ಘಟನೆಯೂ ನಡೆದಿತ್ತು ಎಂದು ಎಸ್ ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.

ಪ್ರಕೃತಿ ಸೌಂದರ್ಯದ ಮಡಿಲಿನಲ್ಲಿ ಕಂಗೊಳಿಸುತ್ತಿರುವ ವಿಶ್ವ ಪ್ರಸಿದ್ಧ ನಂದಿಬೆಟ್ಟ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗುವವರ ತಾಣವಾಗಿಯೂ ಪರಿಣಮಿಸಿದೆ. ಮತ್ತೊಂದೆಡೆ ಸಾಯಿಸೋವವರಿಗೂ ಸುರಕ್ಷಿತ ಸ್ಥಳ ಎಂಬಂತಾಗಿದೆ. ಹೌದು ಒಂದು ಕಡೆ ನಂದಿಗಿರಿಧಾಮದಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ನಂದಿಬೆಟ್ಟದ ಸುತ್ತ ಮುತ್ತ ಅನಾಥ ಶವಗಳು ಪತ್ತೆಯಾಗುತ್ತಿರುವುದು ನಂದಿಗಿರಿಧಾಮಕ್ಕೆ ಕಪ್ಪುಚುಕ್ಕೆಯಾಗಿ ಕಾಡುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಂದಿ ಗಿರಿಧಾಮದಲ್ಲಿ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಅದೇ ರೀತಿ ಅಪರಾಧ ಪ್ರಕರಣಗಳು ಸಹ ಅಧಿಕವಾಗುತ್ತಿದೆ. ಆತ್ಮಹತ್ಯೆ ಹಾಗೂ ಕೊಲೆಯಾಗಿ ಸಿಗುವ ಶವಗಳನ್ನ ಹೊರ ತರಲು ಪೊಲೀಸರು ಸರ್ಕಸ್ ಕೂಡ ಮಾಡುವಂತಾಗಿದೆ. ನಂದಿಬೆಟ್ಟ ಪ್ರವಾಸಿಗರ ಸ್ವರ್ಗವಾಗಿಯೇ ಉಳಿಯಲಿ. ಅತ್ಮಹತ್ಯೆ, ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಬೀಳುವಂತಾಗಲಿ ಎಂಬುದೇ ಸಾರ್ವಜನಿಕರ ಆಶಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *