ದಲಿತರು ಹಿಂದೂ ಧರ್ಮದ ಭಾಗವಲ್ಲವೆ? ಚುಚ್ಚಿ ಮಾತನಾಡೋದು ಎಷ್ಟರ ಮಟ್ಟಿಗೆ ಸರಿ? – ಖರ್ಗೆ ಕಿಡಿ

Public TV
2 Min Read

ಕಲಬುರಗಿ: ದಲಿತರು ದಲಿತರು ಅಂತಾ ಬಿಜೆಪಿಯವರು ಪದೆ ಪದೆ ಯಾಕೆ ಹೇಳುತ್ತಾರೆ? ದಲಿತರು ಹಿಂದೂ ಧರ್ಮದ ಭಾಗವಲ್ಲವೆ? ಬಿಜೆಪಿಯವರು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಿದ್ದಾರಾ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಕೇಂದ್ರ ಸರ್ಕಾರ ರಾಮ ಮಂದಿರ ನಿರ್ಮಾಣ ಸಂಬಂಧ ಸುಪ್ರೀಂ ನಿರ್ದೇಶನದಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಹೆಸರಿನ ಟ್ರಸ್ಟ್ ಸ್ಥಾಪಿಸಿತ್ತು. 15 ಮಂದಿ ಟ್ರಸ್ಟ್ ನಲ್ಲಿ ದಲಿತ ಸಮುದಾಯ ವ್ಯಕ್ತಿಗೆ ಸ್ಥಾನ ನೀಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಖರ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದಲಿತರು ಹಿಂದುಗಳಲ್ಲವೇ? ದಲಿತರು ದಲಿತರು ಅಂತಾ ಚುಚ್ಚಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ದಲಿತರ ಮನೆಗೆ ಹೋಗಿ ಊಟ ಮಾಡುತ್ತೇವೆ. ದಲಿತರನ್ನು ತೆಗೆದುಕೊಂಡಿದ್ದೆವೆ ಅಂತಾ ಹೇಳುತ್ತಾರೆ. ಪದೇ ಪದೇ ದಲಿತರು ಎಂದು ಬಿಜೆಪಿಯರು ಯಾಕೆ ಹೇಳುತ್ತಾರೆ ಎಂದು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ದಲಿತ ಸಿಎಂಗೆ ಏನು ಮೀಸಲಾತಿ ಇದೆಯೇ – ಖರ್ಗೆ ಗರಂ

ನೂತನ ಸಚಿವರ ಪ್ರಮಾಣ ವಚನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಅಧಿಕಾರಕ್ಕೆ ಬರಲು ಏನೆಲ್ಲ ಕುತಂತ್ರ ಮಾಡುತ್ತಾರೆ ಎನ್ನುವುದು ಎಲ್ಲರಿಗೆ ಗೊತ್ತಿದೆ. ಇನ್ನು ನಮ್ಮ ಭವಿಷ್ಯ ಹೇಗಿದೆ ಅಂತಾ ತಿಳಿದುಕೊಂಡೇ ಅವರೆಲ್ಲರೂ ಬಿಜೆಪಿ ಪಕ್ಷಕ್ಕೆ ಹೋಗಿರಬೇಕು. ಆದರೆ ಅವರೆಲ್ಲ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಜನಾದೇಶ ಧಿಕ್ಕರಿಸಿ ಬಿಜೆಪಿಗೆ ಹೋಗಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಚುನಾವಣೆಯಂತೆ ದೆಹಲಿ ಚುನಾವಣೆಯಲ್ಲಿ ಸಹ ನಮ್ಮ ಒಕ್ಷದ ಹೆಚ್ಚು ಶಾಸಕರು ಗೆಲ್ಲುವ ಮೂಲಕ ಮಾಧ್ಯಮಗಳ ಸಮೀಕ್ಷೆ ಸುಳ್ಳಾಗಲಿದೆ. ಬಿಜೆಪಿಯವರಿಗೆ ಅಭಿವೃದ್ಧಿ ಬೇಕಾಗಿಲ್ಲ, ಅವರು ಅಭಿವೃದ್ಧಿಗೆ ಸಹಕಾರ ನೀಡುವುದಿಲ್ಲ. ಕಲ್ಯಾಣ ಕರ್ನಾಟಕ ಭಾಗವನ್ನು ಕೇಂದ್ರ ಹಾಗೂ ರಾಜ್ಯ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ದೂರಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಪ್ರಗತಿಯಲ್ಲಿದೆ. ಯಾರನ್ನ ನೇಮಕ ಮಾಡಬೇಕು ಎನ್ನುವುದು ಹೈಕಮಾಂಡ್ ನಿರ್ಧಾರ ಮಾಡುತ್ತೆ ನಮ್ಮ ಬಳಿ ಯಾವ ಬಣಗಳಿಲ್ಲ ಅಂತಾ ಸ್ಪಷ್ಟಪಡಿಸಿದರು.

ರಾಮಮಂದಿರ ಟ್ರಸ್ಟ್ ನಲ್ಲಿ ಯಾರಿದ್ದಾರೆ?
ದಲಿತ ಸಮುದಾಯ ಕಾಮೇಶ್ವರ ಚೌಪಾಲ್(ಎಸ್‍ಸಿ) ಸದಸ್ಯರಾಗಿ ನೇಮಕಗೊಂಡಿದ್ದಾರೆ. 1989ರಲ್ಲಿ ವಿಶ್ವ ಹಿಂದೂ ಪರಿಷತ್ ನಡೆಸಿದ್ದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕಾಮೇಶ್ವರ ಚೌಪಲ್ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ರಾಮ ಮಂದಿರ ನಿರ್ಮಾಣದ ನಿರ್ಮಾಣ ಸಂಬಂಧ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಪೇಜಾವರ ವಿಶ್ವೇಶತೀರ್ಥ ಶ್ರೀಗಳಿಗೆ ಟ್ರಸ್ಟ್ ನಲ್ಲಿ ಗೌರವ ನೀಡಲಾಗಿದೆ. ವಿಶ್ವೇಶತೀರ್ಥ ಶ್ರೀಗಳು ಕೃಷ್ಣೈಕ್ಯರಾದ ಹಿನ್ನೆಲೆಯಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ವಿಶ್ವಸ್ಥರನ್ನಾಗಿ ನೇಮಿಸಲಾಗಿದೆ.

ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದಲ್ಲಿ ಹಿಂದೂ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಸುಪ್ರೀಂಕೋರ್ಟ್ ವಕೀಲ, 92 ವರ್ಷದ ಕೆ. ಪರಸರನ್ ಈ ಟ್ರಸ್ಟ್ ನ ನೇತೃತ್ವವಹಿಸಲಿದ್ದಾರೆ. ಜ್ಯೋತಿಷ್ ಪೀಠದ ಶಂಕರಾಚಾರ್ಯ, ಸ್ವಾಮಿ ವಾಸುದೇವಾನಂದ ಸರಸ್ವತಿ ಪುಣೆಯ ವೇದ ವಿದ್ಯಾ ಪ್ರತಿಷ್ಠಾನದ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್, ಹರಿದ್ವಾರದ ಯುಗಪುರುಷ ಸ್ವಾಮಿ ಪರಮಾನಂದ ಮತ್ತು ನಿರ್ಮೋಹಿ ಅಖಾರದ ಮುಖ್ಯಸ್ಥ ಸ್ವಾಮಿ ದಿನೇಂದ್ರ ನಾಥ್ ಈ ಟ್ರಸ್ಟ್ ನಲ್ಲಿ ಇರುವ ಪ್ರಮುಖ ಗಣ್ಯ ವ್ಯಕ್ತಿಗಳಾಗಿದ್ದಾರೆ.

Share This Article
1 Comment

Leave a Reply

Your email address will not be published. Required fields are marked *