ಇವಿಎಂ ದೂರೋದನ್ನು ನಿಲ್ಲಿಸಿ, ಫಲಿತಾಂಶವನ್ನು ಸ್ವೀಕರಿಸಿ – ಕಾಂಗ್ರೆಸ್‌ಗೆ ಉಮರ್ ಅಬ್ದುಲ್ಲಾ ಕಿವಿಮಾತು

Public TV
1 Min Read

ಶ್ರೀನಗರ: ಗೆದ್ದಾಗ ವಿದ್ಯುನ್ಮಾನ ಮತಯಂತ್ರಗಳನ್ನು (EVM) ದೂರದೇ, ಚುನಾವಣೆಯಲ್ಲಿ ಸೋತಾಗ ದೂರುವುದನ್ನು ನಿಲ್ಲಿಸಿ ಫಲಿತಾಂಶವನ್ನು ಸ್ವೀಕರಿಸಿ ಎಂದು ಜಮ್ಮು ಕಾಶ್ಮೀರದ (Jammu and Kashmir) ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ (Omar Abdullah) ಕಾಂಗ್ರೆಸ್‌ಗೆ ಕಿವಿಮಾತು ಹೇಳಿದ್ದಾರೆ.

ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ ಅವರು, ಅದೇ ಇವಿಎಂಗಳನ್ನು ಬಳಸಿಕೊಂಡು ನೀವು ನೂರಕ್ಕೂ ಹೆಚ್ಚು ಸಂಸತ್ ಸದಸ್ಯರನ್ನು ಪಡೆದು ಪಕ್ಷಕ್ಕೆ ಸಿಕ್ಕಿದ ವಿಜಯ ಎಂದು ಹೇಳಿ ಕೆಲ ತಿಂಗಳ ನಂತರ ಇವಿಎಂ ದೂಷಣೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಇವಿಎಂ ಮ್ಯಾನಿಪ್ಯುಲೆಟ್ ಆಗಿದೆ ಅನ್ನೋದಕ್ಕೆ ಸಾಕ್ಷಿಗಳಿಲ್ಲ – ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ

ನಿಮಗೆ ಈಗ ಯಾಕೆ ಇವಿಎಂ ಇಷ್ಟವಿಲ್ಲ ಎಂದರೆ ನೀವು ಬಯಸಿದ ರೀತಿ ಫಲಿತಾಂಶ ಪ್ರಕಟವಾಗುತ್ತಿಲ್ಲ. ಮತದಾನದ ವಿಧಾನದಲ್ಲಿ ನಂಬಿಕೆ ಇಲ್ಲದೇ ಇದ್ದರೆ ಪಕ್ಷಗಳು ಚುನಾವಣೆಯಲ್ಲೇ ಸ್ಪರ್ಧಿಸಬಾರದು ಎಂದು ಖಾರವಾದ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸಿದರು. ಇದನ್ನೂ ಓದಿ: ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬೇಕು – ಮಹಾಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಬೇಡಿಕೆ

ಲೋಕಸಭೆ ಚುನಾವಣೆಯಲ್ಲಿ ಸೋತು ತಿಂಗಳ ನಂತರ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಗೆಲುವು ಸಾಧಿಸಿದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಒಂದು ದಿನ ಮತದಾರರು ನಿಮ್ಮನ್ನು ಆಯ್ಕೆ ಮಾಡಿದರೆ ಮರುದಿನ ಅವರು ಇಷ್ಟಪಡುವುದಿಲ್ಲ. ನಾನು ಎಂದಿಗೂ ಯಂತ್ರಗಳನ್ನು ದೂಷಿಸಲಿಲ್ಲ ಎಂದು ಹೇಳಿದರು.

ನಿಮ್ಮ ಮಾತುಗಳು ಬಿಜೆಪಿಯ ಏಜೆಂಟ್‌ರಂತೆ ಕೇಳಿಸುತ್ತಿದೆಯಲ್ಲ ಎಂಬ ಪ್ರಶ್ನೆಗೆ, ದೇವರು ನನ್ನನ್ನು ಕ್ಷಮಿಸಲಿ ಎಂದು ಉತ್ತರಿಸಿದ ಅವರು ಇಲ್ಲ, ಇದು ಹಾಗೆಯೇ ಇರುವುದು. ಯಾವುದು ಸರಿಯೋ ಅದೇ ಸರಿ ಎಂದರು. ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಜಮ್ಮು ಕಾಶ್ಮೀರದಲ್ಲಿ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದೆ.

Share This Article