ಜೂಜುಕೋರರಿಂದ ಪೊಲೀಸರ ಮೇಲೆ ಹಲ್ಲೆ – ಇಬ್ಬರು ಪೇದೆಗಳು ಆಸ್ಪತ್ರೆಗೆ ದಾಖಲು

Public TV
1 Min Read

ಚಿಕ್ಕಬಳ್ಳಾಪುರ: ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರ ಮೇಲೆಯೇ ಜೂಜುಕೋರರು ಕಲ್ಲು ತೂರಾಟ ನಡೆಸಿ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಂಗರೇಖನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‍ಐ ಚೇತನ್ ಸಿಬ್ಬಂದಿಯೊಂದಿಗೆ ಮಫ್ತಿ ವೇಷದಲ್ಲಿ ಟಾಟಾ ಏಸ್ ವಾಹನದ ಮೂಲಕ ತೆರಳಿ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಜೂಜುಕೋರರ ಬಂಧನದ ವೇಳೆ ಏಕಾಏಕಿ ಜೂಜುಕೋರರು ಕಲ್ಲು ತೂರಾಟ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ.

ಘಟನೆಯಲ್ಲಿ ಪೇದೆಗಳಾದ ಸೋಮಶೇಖರ ಹಾಗೂ ಮುತ್ತಪ್ಪ ನಗರಿ ಅವರಯ ಕೈಗೆ ಗಾಯಗಳಾಗಿದ್ದು. ಗಾಯಾಳುಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ 7 ಮಂದಿ ಜೂಜುಕೋರರನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಬಂಧಿತರಿಂದ 1,510 ರೂ. ನಗದು ಜಫ್ತಿ ಮಾಡಲಾಗಿದೆ.

ಅಂಗರೇಖನಹಳ್ಳಿ ಗ್ರಾಮದ ಮಾಧವ, ವೇಣುಗೋಪಾಲ, ಅಂಬರೀಶ, ಶ್ರೀನಿವಾಸ, ಮಹೇಂದ್ರ, ಮುನೇಗೌಡ ಹಾಗೂ ಸೋಮಶೇಖರ್ ಬಂಧಿತರು. ಕಲ್ಲು ತೂರಾಟ ನಡೆಸಿದ ಆರೋಪಿಗಳಲ್ಲಿ ನಾಲ್ಕು ಮಂದಿ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಘಟನೆ ಸಂಬಂಧ ಕೊಲೆ ಯತ್ನ ಆರೋಪದಡಿ ಪ್ರಕರಣ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *