ಬೆಂಗ್ಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಐರಾವತ ಬಸ್‌ ಮೇಲೆ ತೆಲಂಗಾಣದಲ್ಲಿ ಪುಂಡರಿಂದ ಕಲ್ಲು ತೂರಾಟ

Public TV
1 Min Read

ಹೈದರಾಬಾದ್‌: ರಾಜ್ಯದ ಕೆಎಸ್‍ಆರ್‌ಟಿಸಿ (KSRTC) ಬಸ್‌ಗಳ ಮೇಲೆ ತೆಲಂಗಾಣದಲ್ಲಿ (Telangana) ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಕೆಎಸ್‌ಆರ್‌ಟಿಸಿಯ ಐರಾವತ ಕ್ಲಬ್ ಕ್ಲಾಸ್ ಹಾಗೂ ಅಂಬಾರಿ ಉತ್ಸವ ಬಸ್ ಮೇಲೆ ಹೈದರಾಬಾದ್‌ನಲ್ಲಿ (Hyderabad) ಗುರುವಾರ (ನ.7) ಕಲ್ಲು ತೂರಾಟ ನಡೆಸಲಾಗಿದೆ. ಕೆಎಸ್‌ಆರ್‌ಟಿಸಿಯ ಎರಡು ಬಸ್, ತೆಲಂಗಾಣ ಸಾರಿಗೆ ಸಂಸ್ಥೆಯ ಒಂದು ಬಸ್ ಹಾಗೂ ಖಾಸಗಿ ಬಸ್ ಸೇರಿದಂತೆ ಒಟ್ಟು 4 ಬಸ್‌ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಹೈದರಾಬಾದ್‌ನಿಂದ ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಸಾರಿಗೆ ಬಸ್‌ ಮೇಲೆ ದಾಳಿ ನಡೆದಿದೆ.

ರಾತ್ರಿ 10:45ರ ಸುಮಾರಿನಲ್ಲಿ ಹೈದರಾಬಾದ್‌ನಿಂದ ಸಾರಿಗೆ ಬಸ್ ಬೆಂಗಳೂರಿನತ್ತ ಹೊರಟಿತ್ತು. ಈ ವೇಳೆ ಹೈದರಬಾದ್‌ನ ಶಂಶಾಬಾದ್ ಬಳಿ ಕಲ್ಲು ತೂರಾಟ ನಡೆಸಲಾಗಿದೆ. ಇದರಿಂದ ಬಸ್ಸಿನ ಕಿಟಕಿ ಗಾಜಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ.

ಈ ಸಂಬಂಧ ಶಂಶಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share This Article