ಕೊಡಗಿನಲ್ಲಿ ತಗ್ಗದ ಮಳೆ- ಕ್ಷಣ ಕ್ಷಣಕ್ಕೂ ಹೆಚ್ಚಾಗ್ತಿದೆ ಮಡಿಕೇರಿ ಸಮೀಪ ಕಾಣಿಸಿಕೊಂಡ ಹೆದ್ದಾರಿಯ ಬಿರುಕು!

Public TV
1 Min Read

ಮಡಿಕೇರಿ/ಶಿವಮೊಗ್ಗ: ಕಳೆದ 20 ದಿನಗಳಿಂದ ಸುರಿಯುತ್ತಿರೋ ಕುಂಭದ್ರೋಣ ಮಳೆಗೆ ಕೊಡಗು ಜಿಲ್ಲೆ ಅಕ್ಷರಶಃ ತತ್ತರಿಸಿದೆ. ಶಾಸಕರ ನಿವಾಸದ ಬಳಿ ಅಳವಡಿಸಿದ್ದ ಟ್ರಾನ್ಸ್‍ಫಾರ್ಮರ್ ಮೇಲೆ ಮರ ಬಿದ್ದು, ಟ್ರಾನ್ಸ್‍ಫಾರ್ಮರ್ ಸಂಪೂರ್ಣ ಜಖಂಗೊಂಡಿದೆ.

ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹಾಗೂ ಸುಂಟಿಕೊಪ್ಪದಲ್ಲಿ ಮರ ಬಿದ್ದು ಮನೆಗಳು ಜಖಂಗೊಂಡಿವೆ. ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆ ಸಂಪರ್ಕ ಕಡಿತಗೊಂಡು ಹಲವು ಗ್ರಾಮಗಳ ಜನರು ಪರದಾಡುವಂತಾಗಿದೆ. ಅಲ್ಲದೆ ವಿದ್ಯುತ್ ಕಂಬಗಳು ಧಾರಶಾಹಿಯಾದ್ದರಿಂದ 25ಕ್ಕೂ ಅಧಿಕ ಗ್ರಾಮಗಳು ಕಾರ್ಗತ್ತಲಲ್ಲಿ ಮುಳುಗಿವೆ. ಇನ್ನು ಇಂದು ಕೊಡಗು ಜಿಲ್ಲೆಯ ಕೆಲ ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಡಿಕೇರಿ ಮತ್ತು ವಿರಾಜಪೇಟೆ ತಾಲ್ಲೂಕುಗಳ ಅಂಗನವಾಡಿ, ಶಾಲೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪಿ ಐ ಶ್ರೀ ವಿದ್ಯಾ ಆದೇಶ ಹೊರಡಿಸಿದ್ದಾರೆ.

ಮೈಸೂರು ಮಡಿಕೇರಿ-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿ ಸಮೀಪ ಹೆದ್ದಾರಿಯಲ್ಲಿ ಕಾಣಿಸಿಕೊಂಡಿದ್ದ ಬಿರುಕು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು, ವಾಹನ ಸವಾರರು ಆತಂಕದಲ್ಲೇ ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಿವಮೊಗ್ಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾಗರ ತಾಲೂಕಿನ ಸುಮಾರು ಐದು ಸಾವಿರ ಹೆಕ್ಟೇರ್ ಗದ್ದೆ ನೀರಿನಲ್ಲಿ ಮುಳುಗಿದೆ. ನೀರು ನಿಂತಿರುವ ಪ್ರದೇಶ ಮೇಲ್ನೋಟಕ್ಕೆ ಯಾವುದೋ ಕೆರೆ ಅಥವಾ ಜಲಾಶಯದಂತೆ ಕಾಣುತ್ತಿದೆ. ನಾಟಿ ಮಾಡಿದ ಭತ್ತ ನೀರಿನಲ್ಲಿ ಮುಳುಗಿರುವುದರಿಂದ ಈ ಭಾಗದ ರೈತರಲ್ಲಿ ಆತಂಕ ಮೂಡಿಸಿದೆ. ಸಾವಿರಾರು ಹೆಕ್ಟೇರ್ ಗದ್ದೆ ಮುಳುಗಿದ್ದಲ್ಲದೆ ಇಲ್ಲಿನ ಬೀಸನಗದ್ದೆ ಎಂಬ ಹಳ್ಳಿ ಸಂಪೂರ್ಣ ಸಂಪರ್ಕ ಕಡಿದುಕೊಡಿದೆ. ತೀರ್ಥಹಳ್ಳಿ, ಹೊಸನಗರ ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *