ಇನ್ನೂ 4 ದಿನ ಧಾರಾಕಾರ ಮಳೆ: ಕೊಪ್ಪಳದಲ್ಲಿ ಕೊಚ್ಚಿಹೋದ ತಾಯಿ, ಮಗಳು

Public TV
1 Min Read

ಬೆಂಗಳೂರು: ಮಲ್ಲೇಶ್ವರಂ, ಮತ್ತಿಕೆರೆ, ಯಶವಂತಪುರ, ರಾಜಾಜಿನಗರ, ಮೆಜೆಸ್ಟಿಕ್, ಯಲಹಂಕ, ಹೆಬ್ಬಾಳ, ಜಾಲಹಳ್ಳಿ ಕ್ರಾಸ್ ಸೇರಿದಂತೆ ನಗರದ ನಾನಾ ಕಡೆಗಳಲ್ಲಿ ಬೆಳ್ಳಂಬೆಳಗ್ಗೆಯಿಂದಲೇ ಮಳೆ ಸುರಿಯುತ್ತಿದೆ.

ಭಾರಿ ಮಳೆಗೆ ಹಳ್ಳದಲ್ಲಿ ತಾಯಿ-ಮಗಳು ಕೊಚ್ಚಿ ಹೋದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ. ಕಳೆದ ರಾತ್ರಿ ಸುರಿದ ಮಳೆಗೆ ಹನಮವ್ವ ಹಾಗೂ ಪಾರವ್ವ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಶನಿವಾರ ಸಂಜೆ 8 ಗಂಟೆ ಸುಮಾರಿಗೆ ತಾಯಿ-ಮಗಳು ಹೊಲದಿಂದ ಬರುವಾಗ ಎತ್ತಿನ ಬಂಡಿ ಪಲ್ಟಿಯಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.

 

ಇಂದು ಮುಂಜಾನೆ ಗ್ರಾಮದ ಹೊರವಲಯದಲ್ಲಿ ಹನಮವ್ವ (50) ಮೃತದೇಹ ಪತ್ತೆಯಾಗಿದ್ದು, ಮಗಳು ಪಾರವ್ವನನಿಗಾಗಿ ಗ್ರಾಮಸ್ಥರು ಶೋಧ ನಡೆಸುತ್ತಿದ್ದಾರೆ. ಈ ಸಂಬಂಧವನ್ನು ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ವರುಣ ತನ್ನ ಆರ್ಭಟವನ್ನು ತೊರಿಸಿದ್ದಾನೆ. ತಾಲೂಕಿನ ಹೊಸಹುಡ್ಯ ಗ್ರಾಮದಲ್ಲಿರುವ ಕೆರೆ ವರುಣನ ಆರ್ಭಟಕ್ಕೆ ತುಂಬಿ ಹೋಗಿದೆ. ಕೋಡಿ ಹೋಗಲು ಕೇವಲ ಅರ್ಧ ಅಡಿಯಷ್ಟೇ ಬಾಕಿ ಇದೆ. ಆದರೆ ಕೆರೆ ಕಟ್ಟೆಯಲ್ಲಿ ಸಣ್ಣ ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಬಿರುಕಿನ ಮೂಲಕವೇ ನೀರು ಹರಿದು ಹೋಗುತ್ತಿದೆ.

ಹೊಸಹುಡ್ಯ, ಕೇಶವಾರ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಅಪ್ಪಿ ತಪ್ಪಿ ಕೆರೆಯ ಕಟ್ಟೆ ಹೊಡೆದರೆ ಭಾರೀ ಅನಾಹುತ ಆಗುವ ಸಂಭವವಿದೆ. ಸ್ಥಳಕ್ಕೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಆಗಮಿಸಿ ತುರ್ತು ಕ್ರಮ ತೆಗೆದಯಕೊಳ್ಳುವಂತೆ ಸ್ಥಳೀಯ ಗ್ರಾಮಸ್ಥರು ಹಾಗೂ ರೈತರು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಗದಗ, ದಾವಣಗೆರೆಯಲ್ಲಿಯೂ ಮಳೆಯಾಗಿರೋ ಬಗ್ಗೆ ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *