4 ವರ್ಷದ ಮಗನನ್ನ ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದ

Public TV
1 Min Read

ಮುಂಬೈ: ಮಲತಂದೆಯೇ ತನ್ನ 4 ವರ್ಷದ ಮಗನನ್ನು ಬಕೆಟ್‍ನಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಆರೋಪಿ ತಂದೆಯನ್ನು ಶುಕ್ರವಾರದಂದು ಪೊಲೀಸರು ಬಂಧಿಸಿದ್ದಾರೆ. ಆರೋಪಿ ತನ್ನ ಪತ್ನಿಯ ಜೊತೆ ಇಲ್ಲಿನ ಪೂರ್ವ ನಲ್ಲಸೋಪಾರಾದಲ್ಲಿ ವಾಸವಿದ್ದ. ಮಹಿಳೆಗೆ ತನ್ನ ಮೊದಲ ಮದುವೆಯ ಫಲವಾಗಿ ಮೂವರು ಮಕ್ಕಳಿದ್ದು, ಮೃತ ಬಾಲಕನೂ ಅದರಲ್ಲಿ ಒಬ್ಬನಾಗಿದ್ದ ಎಂದು ವರದಿಯಾಗಿದೆ.

ಘಟನೆ ನಡೆದ ದಿನ ಮಹಿಳೆ ತನ್ನ ಮೂವರು ಮಕ್ಕಳನ್ನ ಗಂಡನ ಬಳಿ ಬಿಟ್ಟು ಕೆಲಸಕ್ಕೆ ಹೋಗಿದ್ದರು. 4 ವರ್ಷದ ಬಾಲಕ ಪಕ್ಕದ ಮನೆಗೆ ಆಟವಾಡಲು ಹೋಗಿದ್ದ. ಆತ ಮನೆಗೆ ವಾಪಸ್ ಬಂದ ನಂತರ ಆರೋಪಿ ಬಾಲಕನನ್ನು ಪೊರಕೆಯಿಂದ ಹೊಡೆದಿದ್ದು, ನೀರಿನಲ್ಲಿ ಮುಳುಗಿಸಿದ್ದಾನೆ. ಮತ್ತಿಬ್ಬರು ಮಕ್ಕಳನ್ನೂ ಥಳಿಸಿ, ವಿಷಯವನ್ನ ತಾಯಿಗೆ ತಿಳಿಸಿದ್ರೆ ನಿಮಗೂ ಇದೇ ಗತಿ ಎಂದು ಹೆದರಿಸಿದ್ದ ಎಂದು ತುಲಿಂಜ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಕೇರುಭಾವ್ ಕೊಲ್ಹೆ ಹೇಳಿದ್ದಾರೆ.

ಪತ್ನಿ ಮನೆಗೆ ಹಿಂದಿರುಗಿದ ನಂತರ ತನ್ನ ಮಗ ನೀರಿನಲ್ಲಿ ಮುಳುಗಿರೋದನ್ನ ಕಂಡು ಆಘಾತಗೊಂಡು ನಮಗೆ ವಿಷಯ ತಿಳಿಸಿದ್ರು. ನಮಗೆ ಜೈಸ್ವಾಲ್ ಮೇಲೆ ಅನುಮಾನವಿತ್ತು. ಇಬ್ಬರು ಮಕ್ಕಳನ್ನ ಮಹಿಳಾ ಅಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರು ಸತ್ಯವನ್ನ ತಿಳಿಸಿದ್ದಾರೆ. ನಂತರ ಜೈಸ್ವಾಲ್ ಕೂಡ ತಪ್ಪೊಪ್ಪಿಕೊಂಡಿದ್ದಾನೆ ಎಂದು ಕೇರುಭಾವ್ ಹೇಳಿದ್ದಾರೆ.

ಕೊಲೆಗೆ ಕಾರಣವೇನು?: ಆರೋಪಿ ಹಿಂದಿನ ದಿನವಷ್ಟೇ ಪಕ್ಕದ ಮನೆಯವರೊಂದಿಗೆ ಜಗಳವಾಡಿದ್ದ. ಆದ್ದರಿಂದ ಅವರ ಮನೆಗೆ ಹೋಗಬಾರದೆಂದು ತನ್ನ ಮಲ ಮಕ್ಕಳಿಗೆ ಎಚ್ಚರಿಕೆ ನೀಡಿದ್ದ. ಆದ್ರೆ ಬಾಲಕ ಅವರ ಮನೆಗೆ ಹೋಗಿದ್ದಕ್ಕೆ ಕೋಪಗೊಂಡು ಈ ರೀತಿ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಯ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 302ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಸೈ ಕೋರ್ಟ್ ಮುಂದೆ ಆರೋಪಿಯನ್ನ ಹಾಜರುಪಡಿಸಲಾಗಿದ್ದು, 5 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *