ಬೆಳಗ್ಗಿನ ಜಾವ 4 ಗಂಟೆ ವರೆಗೆ ಕೆಲಸ ಮಾಡಿದ್ದ ಪೊಲೀಸರಿಗೆ ಮತ್ತೆ ಬಂದೋಬಸ್ತ್‌ ನೀಡಲು ಆಗ್ತಿತ್ತಾ? – ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

Public TV
3 Min Read

– ಏನೇನು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ರಿ? ಎಸ್‌ಓಪಿ ಮಾಡಿಕೊಂಡಿದ್ರಾ?
– ಮಂಗಳವಾರಕ್ಕೆ ವಿಚಾರಣೆ ಮುಂದೂಡಿಕೆ – ವರದಿ ಕೇಳಿ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ (Chinnaswamy Stampede) 11 ಮಂದಿ ಬಲಿಯಾದ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸಿದೆ. ಸ್ವಯಂ ಪ್ರೇರಿತವಾಗಿ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ) ದಾಖಲಿಸಿ ವಿಚಾರಣೆ ನಡೆಸಿದ ಹೈಕೋರ್ಟ್ (Karnataka High Court) ಹಂಗಾಮಿ ಸಿ.ಜೆ ಕಾಮೇಶ್ವರ ರಾವ್ ಮತ್ತು ಸಿ.ಎಂ ಜೋಷಿ ವಿಭಾಗೀಯ ಪೀಠ ಸರ್ಕಾರಕ್ಕೆ ನೋಟೀಸ್ ನೀಡಿ ಮಂಗಳವಾರಕ್ಕೆ ವಿಚಾರಣೆ ಮುಂದೂಡಿದೆ.

ವಿಚಾರಣೆ ವೇಳೆ ಸರ್ಕಾರಕ್ಕೆ ಪೀಠ ಸಾಲು ಸಾಲು ಪ್ರಶ್ನೆಗಳನ್ನ ಕೇಳಿದೆ. ಯಾವ ರೀತಿಯ ಮೆಡಿಕಲ್ ಫೆಸಿಲಿಟಿ ಮಾಡಲಾಗಿತ್ತು? ಇಂತಹ ಘಟನೆ ಆದಾಗ ಏನೆಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ರಿ? ಏನಾದ್ರೂ ಎಸ್‌ಓಪಿ ಮಾಡಿಕೊಂಡಿದ್ರಾ? ಹಿಂದಿನ ದಿನ ಸೆಲೆಬ್ರೆಷನ್‌ ವೇಳೆ ಬೆಳಗ್ಗಿನ ಜಾವ 4 ಗಂಟೆ ವರೆಗೆ ಕೆಲಸ ಮಾಡಿದ್ದ ಪೊಲೀಸರು ಮತ್ತೆ ಬೆಳಗ್ಗೆ 11 ಗಂಟೆಯಿಂದ ಬಂದೋಬಸ್ತ್‌ ನೀಡಲು ಆಗ್ತಿತ್ತಾ? ಇಂತಹ ಕಾರ್ಯಕ್ರಗಳನ್ನು ಮಾಡುವಾಗ ನಿಯಮಗಳು ಇರಬೇಕು ಅಲ್ವಾ? ಎಂದು ಪ್ರಶ್ನೆ ಮಾಡಿದೆ.

ಅಲ್ಲದೇ ಮೆಡಿಕಲ್ (Medical), ಅಂಬುಲೆನ್ಸ್‌, ಫೈರ್ ಬ್ರಿಗೇಡ್ ಎಲ್ಲಾ ರೀತಿಯ ವ್ಯವಸ್ಥೆ ಇರಬೇಕು ಅಲ್ವಾ? ಹೀಗೆ ಸಾಲು ಸಾಲು ಪ್ರಶ್ನೆ ಕೇಳಿದೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಮ್ಯಾಜಿಸ್ಟ್ರೇಟ್‌ ತನಿಖೆ ನಡೀತಿರೋದಾಗಿ ಎಜಿ ಶಶಿಕಿರಣ್ ಶೆಟ್ಟಿ ಕೋರ್ಟ್‌ಗೆ ತಿಳಿಸಿದ್ರು. ಈ ವೇಳೆ ಈ ಘಟನೆಗೆ ಯಾರು ಹೊಣೆ..? ಕ್ರಿಕೆಟ್ ಅಸೋಸಿಯೇಷನ್ನಾ? ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಾ? ಅಂತ ಪೀಠ ಪ್ರಶ್ನಿಸಿದೆ.

ವಾದ ಪ್ರತಿವಾದ ಹೇಗಿತ್ತು?
ಮೊದಲಿಗೆ ಅಡ್ವೊಕೇಟ್‌ ಜನರಲ್‌ ಶಶಿಕಿರಣ್ ಘಟನಾವಳಿ ಕುರಿತು ಕೋರ್ಟ್‌ಗೆ ಮಾಹಿತಿ ನೀಡಿದರು. ಜೂನ್ 4 ರಂದು 1 ಸಾವಿರ ಪೊಲೀಸರ ಜೊತೆ ಬಂದೋಬಸ್ತು ಮಾಡಲಾಗಿತ್ತು. ನಗರ ಪೊಲೀಸ್ ಆಯುಕ್ತ, ಡಿಸಿಪಿ ಸೇರಿ ಎಲ್ಲಾ ಬಂದೋಬಸ್ತು ಮಾಡಲಾಗಿತ್ತು. 1,643 ಪೊಲೀಸರ ನಿಯೋಜನೆ ಆಗಿತ್ತು, ಮೂರು ಅಂಬುಲೆನ್ಸ್‌ ಇತ್ತು.

ಆದ್ರೆ 2.5 ಲಕ್ಷಕ್ಕೂ ಹೆಚ್ಚು ಜನ ಸ್ಟೇಡಿಯಂ ಬಳಿ ಸೇರಿಕೊಂಡಿದ್ರು. ಘಟನೆಯಲ್ಲಿ 11 ಜನ ಸಾವನ್ನಪ್ಪಿದ್ದಾರೆ. 56 ಜನ ಗಾಯಾಳುಗಳಾಗಿದ್ದಾರೆ. 6 ಜನರ ಚಿಕಿತ್ಸೆ ನಡೆಯುತ್ತಾ ಇದ್ದು, ಸ್ವಲ್ಪ ಜನರು ನಾಳೆ ಸಂಜೆ ಒಳಗೆ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗ್ತಾರೆ. ಮೃತಪಟ್ಟವರಲ್ಲಿ 6 ಜನ ಪುರುಷರು, 5 ಮಹಿಳೆಯರಾಗಿದ್ದಾರೆ. ವಿಜಯೋತ್ಸವಕ್ಕೆ ಕೋಲಾರ, ಯಾದಗಿರಿ, ತುಮಕೂರು ಎಲ್ಲಾ ಕಡೆಯಿಂದ ಬಂದಿದ್ದರು, ಹೊರರಾಜ್ಯದಿಂದಲೂ ಜನ ಬಂದಿದ್ದರೆಂದು ಶಶಿಕಿರಣ್‌ ಅವರು ಕೋರ್ಟ್‌ ಗಮನಕ್ಕೆ ತಂದರು.

ಈ ವೇಳೆ ಮಧ್ಯ ಪ್ರವೇಶಿಸಿದ ಜಡ್ಜ್‌, ಹೆಚ್ಚಿನ ಜನ ಸೇರಿದ್ದಾಗ ಎಚ್ಚರಿಕೆ ಹೇಗೆ ವಹಿಸುತ್ತೀರಿ? ಎಸ್ಓಪಿ ಇರಬೇಕು ಅಲ್ವಾ?‌ ಅಂತರ ಪ್ರಶ್ನಿಸಿದರು. ಇದಕ್ಕೆ ಸರ್ಕಾರ ಪ್ರಕರಣ ಗಂಭೀರವಾಗಿ ಪರಿಗಣಿಸಿದೆ ಎಂದು ಎಜಿ ಸ್ಪಷ್ಟಪಡಸಿದರು.

34,600 ಟಿಕೆಟ್ ಗಳು ಮಾತ್ರ ಇತ್ತು, 33 ಸಾವಿರ ಟಿಕೆಟ್ ಕೊಡಲಾಗುತ್ತಿತ್ತು, ಆದ್ರೆ ಸ್ಟೇಡಿಯಂ ಕೆಪಾಸಿಟಿಗಿಂತಲೂ ಹೆಚ್ಚು ಜನ ಬಂದಿದ್ದರು. ಜನ ಟಿಕೆಟ್ ತೆಗೆದುಕೊಳ್ಳಲು ಆಗಲಿಲ್ಲ , ಆದ್ದರಿಂದ ಫ್ರೀ ಬಿಟ್ಟಿದ್ದಾರೆಂದು ಹೇಳಿದರು. ಇದಕ್ಕೆ ಕಾರ್ಯಕ್ರಮ ಆಯೋಜನೆ ಮಾಡಿದ್ದವರು ಯಾರು? ಅಂತ ಜಡ್ಜ್‌ ಕೇಳಿದರು. ಆಗ ಆರ್‌ಸಿಬಿ ಮ್ಯಾನೇಜ್ಮೆಂಟ್ ಆಯೋಜನೆ ಮಾಡಿದ್ದು ಅಂತ ಎಜಿ ಹೈಕೋರ್ಟ್ ಗಮನಕ್ಕೆ ತಂದರು. ಅಲ್ಲದೇ 21 ಗೇಟ್ ಗಳು ಇದ್ದಾವೆ, ಕೇವಲ 3 ಗೇಟ್‌ ತೆಗೆದಿದ್ದರಿಂದಲೇ ಈ ಘಟನೆ ಆಗಿದೆ ಎಂದು ಹೇಳಿದರು.

ಸರ್ಕಾರಕ್ಕೆ ನಾಲ್ಕು ಪ್ರಶ್ನೆ
ಇನ್ನೂ ವಕೀಲ ಹೇಮಂತ್, ರಂಗನಾಥ್ ರೆಡ್ಡಿ ವಾದ ಮಂಡಿಸಿ ಸರ್ಕಾರದಿಂದ ನಾಲ್ಕು ಸ್ಪಷ್ಟನೆ ಬೇಕು ಅಂತ ಕೇಳಿದ್ರು. ಯಾರು ಕಾರ್ಯಕ್ರಮ ಮಾಡಿದ್ದು? ಅವರು ಯಾವ ದೇಶಕ್ಕೆ ಆಡಿದ್ರು? ಏಕಕಾಲಕ್ಕೆ ಎರಡೂ ಕಡೆ ಕಾರ್ಯಕ್ರಮ ಮಾಡಲು ಸೂಚನೆ ಕೊಟ್ಟವರು ಯಾರು? ಏನು ಮುಂಜಾಗ್ರತೆ ಇತ್ತು ಮತ್ತು ಸರ್ಕಾರದ ಪ್ಲಾನ್ ಆಫ್‌ ಆಕ್ಷನ್ ಏನಿತ್ತು? ಇದೆಲ್ಲದರ ಬಗ್ಗೆ ಸ್ಪಷ್ಟನೆ ಕೊಡಲು ಸೂಚಿಸುವಂತೆ ಮನವಿ ಮಾಡಿಕೊಂಡರು.

ಮುಂದುವರಿದು ವಕೀಲ ರಂಗನಾಥ ರೆಡ್ಡಿ, ಸೋಷಿಯಲ್ ಮೀಡಿಯಾದಲ್ಲಿ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಅಂತ ಹೇಳಿದ್ದಾರೆ ಅದರ ಬಗ್ಗೆ ಸ್ಪಷ್ಟನೆ ಇಲ್ಲ. ಬಿಸಿಸಿಐ ಹಾಗೂ ಐಪಿಎಲ್‌ಗೂ ನೋಟಿಸ್ ಜಾರಿ ಮಾಡಬೇಕು ಎಂದು ಪ್ರಬಲ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಮಂಗಳವಾರಕ್ಕೆ ಅರ್ಜಿ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿತು.

Share This Article