ಬೆಂಗಳೂರು: 90 ಲಕ್ಷ ಎಟಿಎಂ ಹಣದೊಂದಿಗೆ ಸಿಬ್ಬಂದಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಪಶ್ಚಿಮ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಬಳ್ಳಾರಿಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ನಾರಾಯಣಸ್ವಾಮಿ, ನರಸಿಂಹರಾಜು ಹಾಗೂ ಸಹಚರರಾದ ರಿಯಾಜ್ ಮತ್ತು ಜಗದೀಶ್ ಬಂಧಿತ ಆರೋಪಿಗಳು. ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಆರೋಪಿಗಳನ್ನು ಖಾಕಿ ಪಡೆ ಬಂಧಿಸಿದೆ. ಆರೋಪಿಗಳಿಂದ 80 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ.
ಜ. 29ರಂದು 90 ಲಕ್ಷ ರೂ. ಹಣ ಇದ್ದ ಟಾಟಾ ಸುಮೋ ಸಮೇತ ಆರೋಪಿಗಳು ಪರಾರಿಯಾಗಿದ್ದರು. ಸಿಎಂಎಸ್ ಏಜೆನ್ಸಿಗೆ ಸೇರಿದ ಎಟಿಎಂ ವಾಹನ ಇದಾಗಿತ್ತು.
ಸಿಎಂಎಸ್ ಕಂಪನಿಯಲ್ಲಿ ಮೂರು ವರ್ಷಗಳಿಂದ ಆರೋಪಿಗಳು ಕೆಲಸ ಮಾಡುತ್ತಿದ್ದರು. ಗನ್ ಮ್ಯಾನ್ ಗೆ ಬಾಳೆ ಹಣ್ಣು ತರಲು ಹೇಳಿ ಎಟಿಎಂ ವಾಹನದೊಂದಿಗೆ ಎಸ್ಕೇಪ್ ಆಗಿದ್ದರು. ಬಳಿಕ ಮಾದನಾಯಕನಹಳ್ಳಿ ಸಮೀಪದ ಕಿತ್ತನಹಳ್ಳಿ ಬಳಿ ಟಾಟಾ ಸುಮೋ ಬಿಟ್ಟು, ಹಣದ ಸಮೇತ ಬಳ್ಳಾರಿಗೆ ಪರಾರಿಯಾಗಿದ್ದರು. ಈ ಬಗ್ಗೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಟಿಎಂ ಹಣ ದೋಚಲು 15 ದಿನಗಳಿಂದ ಆರೋಪಿಗಳು ಪ್ಲಾನ್ ಮಾಡಿದ್ದರು. ನಾರಾಯಣಸ್ವಾಮಿ ಸ್ನೇಹಿತರ ಬಳಿ 15 ಲಕ್ಷ ಸಾಲ ಮಾಡಿದ್ದು, ಸಾಲ ತೀರಿಸಲು ಹಣ ದೋಚಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.