ದಿನೇಶ್ ಗುಂಡೂರಾವ್ ಅಯೋಗ್ಯ, ಸಿದ್ದರಾಮಯ್ಯನ ಚೇಲಾ: ಸೋಮಶೇಖರ್ ಕಿಡಿ

Public TV
2 Min Read

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಯೋಗ್ಯ, ಅವನು ಸರಿಯಿದ್ದಿದ್ದರೆ ನಾವೇಕೆ ಪಕ್ಷ ಬಿಡುತ್ತಿದ್ದೇವು? ಅವನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಚೇಲಾ ಎಂದು ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಕೊಠಡಿಯಲ್ಲಿ ಸೋಮಶೇಖರ್ ದಿನೇಶ್ ಗುಂಡೂರಾವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಚೇಲಾ, ಬಕೆಟ್. ಅವನು ನಮ್ಮ ಬಗ್ಗೆ ಏನ್ ಮಾತಾಡೋದು? ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ರಿಜ್ವಾನ್ ಅರ್ಷಾದ್‍ದು. ಇದು ಸಿದ್ದರಾಮಯ್ಯನ ಕಾಂಗ್ರೆಸ್ಸಾ? ಓರಿಜನಲ್ ಕಾಂಗ್ರೆಸ್ಸಾ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು.

ದಿನೇಶ್ ಗುಂಡೂರಾವ್ ಅಯೋಗ್ಯ ಅಧ್ಯಕ್ಷ, ಅವನು ಸರಿಯಿದ್ದಿದ್ದರೆ ನಾವೇಕೆ ರಾಜೀನಾಮೆ ಕೊಡುತ್ತಿದ್ದೇವು? ಅವನು ನನ್ನ ಜೊತೆಯಲ್ಲಿ ಸದಸ್ಯ ಆಗಿದ್ದವನು. ರಮೇಶ್ ಕುಮಾರ್ ಮುನಿಯಪ್ಪನ ಸೋಲಿಸಿದರು. ಕೆ.ಎಚ್.ಮುನಿಯಪ್ಪಗೆ ಅವಮಾನ ಮಾಡಿದ್ದಾರೆ. ಅವರ ಮೇಲೆ ಏನು ಕ್ರಮ ಕೈಗೊಂಡರು? ಹರಿಪ್ರಸಾದ್, ಮುನಿಯಪ್ಪ ಹೇಳಿದ್ದು ಸರಿ ಇದೆ. ದಿನೇಶ್ ಗುಂಡೂರಾವ್ ನನ್ನ ಜೊತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಗಿದ್ದವನು, ಅವರ ಅಪ್ಪ ಮುಖ್ಯಮಂತ್ರಿ ಆಗಿದ್ದರು ಎಂದು ಅವನು ಇಷ್ಟು ಮೇಲೆ ಬಂದ ಎಂದು ಹರಿಹಾಯ್ದರು.

ಅವನೇನು ನಮ್ಮ ಬಗ್ಗೆ ಮಾತಾಡೋದು? ಪದೇ ಪದೇ ನಮ್ಮ ಬಗ್ಗೆ ಮಾತಾಡ್ತಾನೆ. ನಮ್ಮ ತಂಟೆಗೆ ಬರೋದು ಬೇಡ. ನಿನಗೆ ಕೆಲಸ ಮಾಡಲು ಬಿಡುವಿಲ್ಲ, ಆ ಯೋಗ್ಯತೆಯಿಲ್ಲ. ನೀನೇನು ಅನರ್ಹರ ಬಗ್ಗೆ ಮಾತನಾಡುತ್ತೀಯಾ ಎಂದು ಏಕವಚನದಲ್ಲಿ ಬೈದು ಆಕ್ರೋಶ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿ ಜೊತೆ ಕರೆಯಲ್ಲಿ ಮಾತನಾಡಿದ ಸೋಮಶೇಖರ್ ಅವರು, ಅವನಿಗೆ ಕೆಪಿಸಿಸಿ ಅಧ್ಯಕ್ಷನಾಗಿ ಯಾವ ಪದವನ್ನು ಬಳಕೆ ಮಾಡಬೇಕು ಎಂಬ ಕಾಮನ್ ಸೆನ್ಸ್ ಇಲ್ಲ. ಒಬ್ಬ ಫುಟ್‍ಪಾತ್‍ನಲ್ಲಿ ಮಾತನಾಡುವ ಹಾಗೆ ಮಾತನಾಡುತ್ತಾನೆ. ನಮ್ಮ ಅನರ್ಹತೆಯ ವಿಚಾರ ಸುಪ್ರೀಂನಲ್ಲಿ ವಿಚಾರಣೆ ನಡೆಯುತ್ತಿದೆ. ಅದನ್ನ ನಾವು ನೋಡಿಕೊಳ್ಳುತ್ತೇವೆ. ಆದೆರೆ ಇವನಿಗೆ ಕೆಪಿಸಿಸಿ ಅಧ್ಯಕ್ಷನಾಗಿ ಮಾಡಲು ಸಾಕಷ್ಟು ಕೆಲಸಗಳಿವೆ. ಅದನ್ನ ಬಿಟ್ಟು ಪದೇ ಪದೇ ರಾಜಕೀಯ ವ್ಯಭಿಚಾರಿ, ದೇಶದ್ರೋಹಿಗಳು ಎಂದು ನಮ್ಮ ಬಗ್ಗೆ ಮಾತನಾಡೋದು ಸರಿಯಲ್ಲ. ಅವನ ಯೋಗ್ಯತೆಗೆ ಕಚೇರಿಯಲ್ಲಿ ಒಬ್ಬ ಅಟೆಂಡರ್ ಕೂಡ ಇವನ ಮಾತು ಕೇಳೋದಿಲ್ಲ. ಇಂಥವನು ನಮ್ಮ ಬಗ್ಗೆ ಮಾತನಾಡುತ್ತಾನೆ. ನಾವು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಿರಲಿಲ್ಲ. ಕೇವಲ ನಮ್ಮ ಶಾಸಕ ಸ್ಥಾನಕ್ಕೆ ನಾವು ರಾಜೀನಾಮೆ ನೀಡಿದ್ದೇವು. ಆದ್ರೆ ಇವರು ಅದನ್ನೇ ತಪ್ಪಾಗಿ ಅರ್ಥೈಸಿಕೊಂಡು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *