ಬಿಜೆಪಿಯಿಂದ ಎಸ್‌ಟಿ ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಉಚ್ಚಾಟನೆ

Public TV
1 Min Read

ಬೆಂಗಳೂರು: ಬಿಜೆಪಿಯ (BJP)  ಬೆಂಗಳೂರಿನ ಯಶವಂತಪುರದ ಶಾಸಕ ಎಸ್‌ಟಿ ಸೋಮಶೇಖರ್‌ (ST Somashekar)  ಮತ್ತು ಯಲ್ಲಾಪುರದ ಶಾಸಕ ಶಿವರಾಂ ಹೆಬ್ಬಾರ್‌ (Shivaram Hebbar) ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಪದೇ ಪದೇ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಮಾರ್ಚ್‌ ಕೊನೆಯಲ್ಲಿ ಇಬ್ಬರಿಗೂ ಶೋಕಾಸ್‌ ನೋಟಿಸ್‌ ನೀಡಲಾಗಿತ್ತು. ಶೋಕಾಸ್‌ ನೋಟಿಸ್‌ಗೆ ಸರಿಯಾದ ಉತ್ತರ ನೀಡದ ಕಾರಣ ಇಬ್ಬರನ್ನೂ ಬಿಜೆಪಿ ಉಚ್ಚಾಟನೆ ಮಾಡಿದೆ.

ಇಬ್ಬರು ನಾಯಕರು ಬಹಿರಂಗವಾಗಿ ಕಾಂಗ್ರೆಸ್‌ ಸಭೆಯಲ್ಲಿ ಭಾಗಿಯಾಗುತ್ತಿದ್ದರು. ಅಷ್ಟೇ ಅಲ್ಲದೇ ಪಕ್ಷದ ನಾಯಕರ ವಿರುದ್ಧವೇ ಹೇಳಿಕೆ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಇಬ್ಬರ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಂಡಿದೆ.  ಇದನ್ನೂ ಓದಿ: ಚಂಚಲಗೂಡ ಜೈಲಿನಿಂದ ಪರಪ್ಪನ ಅಗ್ರಹಾರಕ್ಕೆ ರೆಡ್ಡಿ ಶಿಫ್ಟ್‌

 


ಉಚ್ಚಾಟನೆಗೆ ಕಾರಣ ಏನು?
ಪದೇ ಪದೇ ಡಿಕೆಶಿ ನಿವಾಸದ ಕದ ತಟ್ಟುತ್ತಿದ್ದ ಇಬ್ಬರು ಶಾಸಕರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸಾರ್ವಜನಿಕ ಸಭೆಗಳಲ್ಲಿ ಹೊಗಳುತ್ತಿದ್ದರು. ಗ್ಯಾರಂಟಿ, ಸರ್ಕಾರದ ಯೋಜನೆಗಳಿಗೆ ಶಹಬ್ಬಾಸ್‌ಗಿರಿ ನೀಡುತ್ತಿದ್ದರು.

ಕಾಂಗ್ರೆಸ್ ಸರ್ಕಾರದ ವಿರುದ್ಧದ ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸದೇ ಡೋಂಟ್ ಕೇರ್ ಎನ್ನುತ್ತಿದ್ದರು. ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ, ಸಂಘಟನಾ ಸಭೆಗಳಿಂದ ದೂರ ಉಳಿದಿದ್ದರು. ಬಿಜೆಪಿಯೊಳಗಿನ ಭಿನ್ನಮತದ ಬಗ್ಗೆ ಬಹಿರಂಗ ವ್ಯಂಗ್ಯ, ಒಂದು ಗುಂಪಿನ ಬಗ್ಗೆ ನಿರಂತರ ವಾಗ್ದಾಳಿ ನಡೆಸುತ್ತಿದ್ದರು.

Share This Article