SSLC ಯಲ್ಲಿ ಮತ್ತೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲು ಹಾಸನದಲ್ಲಿ ಮಾಸ್ಟರ್ ಪ್ಲಾನ್

Public TV
1 Min Read

ಹಾಸನ: ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮತ್ತೆ ಪ್ರಥಮ ಸ್ಥಾನ ಪಡೆಯಲು ಜಿಲ್ಲೆಯ ಶಿಕ್ಷಕರು ಪಣತೊಟ್ಟಿದ್ದು, ಅದಕ್ಕಾಗಿ ರಾತ್ರಿ ಒಂಬತ್ತು ಗಂಟೆವರೆಗೂ ವಿದ್ಯಾರ್ಥಿಗಳಿಗೆ ಪಾಠಬೋಧನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಸಾಮೂಹಿಕ ನಕಲಿನಿಂದಾಗಿ SSLC ಫಲಿತಾಂಶದಲ್ಲಿ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ – ಪತ್ರ ವೈರಲ್

ಕಳೆದ ಬಾರಿ ಸಾಮೂಹಿಕ ನಕಲು ಮಾಡಿಸಿ ಹಾಸನ ಜಿಲ್ಲೆ ಎಸ್‍ಎಸ್‍ಎಲ್‍ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರಿಂದ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಶಿಕ್ಷಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಬಾರಿ ಕಳೆದ ವರ್ಷಕ್ಕಿಂತ ಕಳಪೆ ಫಲಿತಾಂಶ ಬಂದರೆ, ಕಳೆದ ವರ್ಷದ ಫಲಿತಾಂಶದ ಬಗ್ಗೆ ಅನುಮಾನ ಮೂಡಲಿದೆ. ಹೀಗಾಗಿ ಈ ವರ್ಷವೂ ಕಳೆದ ವರ್ಷದಂತೆ ಉತ್ತಮ ಫಲಿತಾಂಶ ನೀಡಬೇಕು ಎಂದು ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಹಾಸನ ಉಪನಿರ್ದೇಶಕ ಪ್ರಕಾಶ್ ಮತ್ತೆ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಶಿಕ್ಷಕರಿಗೆ ಸೂಚಿಸಿದ್ದಾರೆ. ಇದರಿಂದ ಶಿಕ್ಷಕರು ರಾತ್ರಿ 7.00 ಗಂಟೆಯಿಂದ 9.00 ಗಂಟೆಯವರೆಗೂ ಮಕ್ಕಳಿಗೆ ಹೆಚ್ಚುವರಿ ಅವಧಿಯಲ್ಲಿ ಪಾಠ ಹೇಳಿಕೊಡುತ್ತಿದ್ದಾರೆ. ಶಿಕ್ಷಕರ ಶ್ರಮಕ್ಕೆ ಸಾಥ್ ನೀಡುತ್ತಿರುವ ಪೋಷಕರು, ತಮ್ಮ ಮಕ್ಕಳನ್ನು ಬೈಕ್‍ನಲ್ಲಿ ಶಾಲೆಗೆ ಕರೆದುಕೊಂಡು ಬಂದು, ನಂತರ ರಾತ್ರಿ ವಾಪಸ್ ಕರೆದುಕೊಂಡು ಹೋಗುತ್ತಿದ್ದಾರೆ.

ಸದ್ಯ ಜಿಲ್ಲೆಯ ಅರಕಲಗೂಡು ತಾಲೂಕಿನ, ಬಿವಿಎಂ ಶಾಲೆಯಿಂದ ಹೆಚ್ಚುವರಿ ಬೋಧನೆ ಆರಂಭವಾಗಿದೆ. ಹೇಗಾದರೂ ಮಾಡಿ ಈ ಬಾರಿಯೂ ಮೊದಲ ಸ್ಥಾನ ಉಳಿಸಿಕೊಳ್ಳಲು ಹಾಸನ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *