ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ನಿರ್ಮಾಣ ಬೆಂಬಲಿಸಿ, ವಾಪಸ್ ಪಡೆದ ಶ್ರೀರಾಮುಲು

Public TV
1 Min Read

ಬೆಂಗಳೂರು: ಜೆಡಿಎಸ್ ಸೋತಿರುವ ಕ್ಷೇತ್ರಗಳ ಮೇಲೆ ಸೇಡನ್ನು ಬಜೆಟ್ ಮೂಲಕ ಸಿಎಂ ಎಚ್.ಡಿಕುಮಾರಸ್ವಾಮಿ ಅವರು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಹೀಗಾಗಿ ನಾನು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಹೋರಾಟವನ್ನು ಬೆಂಬಲಿಸುತ್ತೇನೆ ಎಂದು ಬಿಜೆಪಿಯ ಶಾಸಕ ಬಿ.ಶ್ರೀರಾಮುಲು ಅವರು ಹೇಳಿಕೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಶಾಸಕರು, ಕುಮಾರಸ್ವಾಮಿ ಅವರು ಬಿಜೆಪಿ ಗೆಲುವು ಸಾಧಿಸಿರುವ ವಿಧಾನಸಭೆ ಕ್ಷೇತ್ರಗಳಿಗೆ ಸಮರ್ಪಕ ಯೋಜನೆ ಮತ್ತು ಅನುದಾನ ನೀಡದೆ ನಿರ್ಲಕ್ಷಿಸಿದ್ದಾರೆ. ಹೀಗಾಗಿಯೇ ನಾನು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಯನ್ನು ಬೆಂಬಲಿಸುತ್ತಿರುವೆ ಎಂದರು.

ಬಜೆಟ್ ಕೇವಲ ಅಣ್ಣ-ತಮ್ಮಂದಿರು ಪ್ರತಿನಿಧಿಸುವ ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಅನುಕೂಲ ಆಗುವಾಗುವಂತಿದೆ ಎಂದು ಶ್ರೀರಾಮುಲು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಅವರು ರಾಮುಲು ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ತಾರತಮ್ಯವಿದ್ದರೆ ಅದನ್ನು ಸರಿಪಡಿಸಬೇಕು. ಆದರೆ ರಾಜ್ಯ ಒಡೆಯುವ ಮಾತುಗಳನ್ನು ಆಡಬೇಡಿ. ಸಮಗ್ರ ಕರ್ನಾಟಕದ ಬಗ್ಗೆ ಮಾತ್ರ ಮಾತನಾಡಿ ಎಂದು ಗುಡುಗಿದರು.

ರಾಜ್ಯ ವಿಭಜನೆಯ ಸಂದೇಶ ಇಲ್ಲಿಂದ ಹೊರ ಹೋಗುವುದು ಬೇಡ. ನಾವೆಲ್ಲ ಒಂದು ಎನ್ನುವ ಸಂದೇಶವಿರಲಿ ಎಂದು ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು. ನಂತರ ಮಧ್ಯಪ್ರವೇಶ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನಮಗೂ ಸಮಗ್ರ ಕರ್ನಾಟಕ ಬೇಕು. ಆದರೆ ಉತ್ತರ ಕರ್ನಾಟಕದ ಕುರಿತಾಗಿ ಈ ಭಾಗದ ಜನ ನಾಯಕರ ಧೋರಣೆ ಬದಲಾಗಬೇಕು. ನಮ್ಮ ಭಾಗದ ಜನರು ಮಹಾರಾಷ್ಟ್ರಕ್ಕೆ ಗುಳೆ ಹೋಗಲಿ ಎಂಬ ಭಾವನೆ ಹೋಗಬೇಕು ಎಂದು ಹೇಳಿದರು.

ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು, ನಾವೆಲ್ಲ ಒಂದೇ. ಆದರೆ ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಶ್ರೀರಾಮುಲು ಅವರು ಹಾಗೇ ಮಾತನಾಡಿದ್ದಾರೆ ಎಂದರು. ನಂತರ ರಾಜ್ಯ ವಿಭಜನೆಯ ಮಾತನ್ನು ಕಡತದಿಂದ ತೆಗೆಯುವಂತೆ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರಿಗೆ ಮನವಿ ಮಾಡಿಕೊಂಡರು. ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಪರಿಸ್ಥಿತಿಯನ್ನು ಸುಧಾರಿಸುತ್ತಿದ್ದಂತೆ, ಶ್ರೀರಾಮುಲು ತಮಗೂ ರಾಜ್ಯ ವಿಭಜನೆ ಬೇಕಿಲ್ಲ ಎಂದು ಒಪ್ಪಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *