ಸುದೀಪ್ ವಿಚಾರದಲ್ಲಿ ನನಗೆ ಬೇಸರವಿಲ್ಲ: ಶ್ರೀರಾಮುಲು

Public TV
2 Min Read

ಬಳ್ಳಾರಿ: ನಟ ಸುದೀಪ್ (Sudeep) ವಿಚಾರದಲ್ಲಿ ನನಗೆ ಯಾವುದೇ ರೀತಿಯ ನೋವು, ಬೇಸರ ಇಲ್ಲ ಎಂದು ಸಚಿವ ಶ್ರೀರಾಮುಲು (Sriramulu) ತಿಳಿಸಿದರು.

ಬಳ್ಳಾರಿಯಲ್ಲಿ ರಾಮುಲು ಪರ ಸುದೀಪ್‌ ಪ್ರಚಾರಕ್ಕೆ ಬಾರದ ವಿಚಾರಕ್ಕೆ ಸಂಬಂಧಿಸಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರು ಬೇಕಾದರೂ ಬರಬಹುದು. ಸುದೀಪ್ ಒಬ್ಬ ಮೇರು ನಟನಾಗಿದ್ದು, ಎಲ್ಲರಿಗೂ ಗೌರವ ಇದೆ. ನಾನು ಸಹ ಅವರ ಅಭಿಮಾನಿ. ಅವರ ವಿಚಾರದಲ್ಲಿ ಯಾವುದೇ ಬೇಸರ ಇಲ್ಲ ಎಂದು ಹೇಳಿದರು.

ನಾನು ಕೆಳಮಟ್ಟದಿಂದ ಕೆಲಸ ಮಾಡಿಕೊಂಡು ಬಂದವನು, ರಾಮುಲು ಅಂದರೆ ಏಕಾಏಕಿ ಬಂದವನಲ್ಲ. 30 ವರ್ಷದಿಂದ ಕಷ್ಟಪಟ್ಟು ಬೆವರು ಸುರಿಸಿ ಬಂದವನು. ನನಗೆ ಯಾವುದೇ ರೀತಿ ನೋವಿಲ್ಲ, ಸುದೀಪ್ ಅವರು ಸಹ ಪಾರ್ಟಿ ಸಲುವಾಗೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಚುನಾವಣೆ ಅಂದರೆ ಬಿಸಿ ಇರುತ್ತದೆ. 5 ಬಾರಿ ಶಾಸಕ ಹಾಗೂ ಒಂದು ಬಾರಿ ಸಂಸದನಾಗಿದ್ದೇನೆ. ಜನ ಯಾವತ್ತು ನನ್ನನ್ನು ಬಿಟ್ಟು ಕೊಟ್ಟಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಜನರ ಋಣ ತೀರಿಸುವ ಕೆಲಸ ಮಾಡಿದ್ದೇನೆ. ರಾಜಕಾರಣವನ್ನು ಅಷ್ಟು ಸುಲಭವಾಗಿ ತಗೆದುಕೊಳ್ಳುವುದಕ್ಕೆ ಆಗಲ್ಲ. ಪ್ರತಿಯೊಬ್ಬರು ಗೆಲುವಿಗಾಗಿಯೇ ಹೋರಾಡುತ್ತಾರೆ. ನನಗೆ ರಾಜಕೀಯವಾಗಿ ಜನ್ಮ ನೀಡಿದ ಪುನರ್ಜನ್ಮ ನೀಡಿದ ಜನರಿಗಾಗಿ ಬಂದಿದ್ದೇನೆ. ಜನ ನನ್ನನ್ನ ಕೈ ಬಿಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇವತ್ತು ಕೂಡ ನಾನು ಸ್ಟಾರ್ ಕ್ಯಾಂಪೆನರ್. ಅವತ್ತಿನ ಪರಿಸ್ಥಿತಿಯಲ್ಲಿ ನಾನು ಬಾದಮಿಗೆ ಹೋದೆ. ಅಲ್ಲಿ 7 ರಲ್ಲಿ 5 ಕ್ಷೇತ್ರ ಗೆದ್ದೆವು. ಮೊಳಕಾಲ್ಮೂರಿಗೆ ಕಳುಹಿಸಿದರು, ಅಲ್ಲಿಯೂ 6 ರಲ್ಲಿ 5 ಗೆದ್ದೆವು. ಬಿಜೆಪಿ ಹೈಕಮಾಂಡ್ 2018ರಲ್ಲಿ ನನ್ನನ್ನ ಹಾಗೂ ಯಡಿಯೂರಪ್ಪ ಅವರನ್ನ ದೆಹಲಿಯಿಂದ ವಾಪಸ್ ರಾಜ್ಯಕ್ಕೆ ಕಳುಹಿಸಿದೆ. ಹೆಚ್ಚು ಸ್ಥಾನ ಗೆದ್ದು ಪಕ್ಷ ಅಧಿಕಾರಕ್ಕೆ ಬರಬೇಕು ಅಂತ ಪಾರ್ಟಿಯಲ್ಲಿ ಯಾವುದೇ ನೋವು ಅನ್ನೋ ಮಾತು ಬರಲ್ಲ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಹಮದಾಬಾದ್‌ ತಂತ್ರ – ಒಂದೇ ದಿನ ಬೆಂಗಳೂರಿನಲ್ಲಿ ಮೆಗಾ ರೋಡ್‌ ಶೋ

ನಾನು ಕೆಳ ಸಮುದಾಯದ ವಾಲ್ಮೀಕಿ ಸಮಯದಾಯದಿಂದ ಬಂದವನು. ನನಗೆ ಎರಡೆರಡು ಕಡೆ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿತ್ತು. ಪಾರ್ಟಿ ಎಲ್ಲವನ್ನೂ ಕೊಟ್ಟಿದೆ. ಪಾರ್ಟಿ ವಿಚಾರದಲ್ಲಿ ನನಗೆ ಯಾವುದೇ ನೋವು ಬೇಸರ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೇಂದ್ರದ ಮಾಜಿ ನೌಕರನ ಮನೆ ಮೇಲೆ ಸಿಬಿಐ ದಾಳಿ – 20 ಕೋಟಿ ವಶ

Share This Article