ಕಾಂಗ್ರೆಸ್ Vs ಬಿಜೆಪಿ: ಅನುದಾನ ಹಂಚಿಕೆ 1 ರೂ. ಹೆಚ್ಚಾದರೆ ನಾನು ರಾಜಕೀಯ ನಿವೃತ್ತಿ: ಶ್ರೀರಾಮುಲು

Public TV
2 Min Read

ಬಳ್ಳಾರಿ: ಕಾಂಗ್ರೆಸ್‍ನಲ್ಲಿ ಸಿಎಂ ಆದಾಗ ಕೊಟ್ಟ ಅನುದಾನವೆಷ್ಟು, ಯಡಿಯೂರಪ್ಪ ಅವರು ಸಿಎಂ ಆದಾಗ ಬಳ್ಳಾರಿಗೆ ಕೊಟ್ಟ ಅನುದಾನ ಎಷ್ಟು ಎಂಬುದಕ್ಕೆ ಶ್ವೇತಪತ್ರ ಹೊರಡಿಸಲಿ. ಒಂದು ವೇಳೆ ಈ ದಾಖಲೆಯಲ್ಲಿ ಅನುದಾನ ಹಂಚಿಕೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ 1 ರೂ. ಹೆಚ್ಚಿಗೆ ಬಂದಿದ್ದರೂ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಶಾಸಕ ಶ್ರೀರಾಮುಲು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಮುಲು ಜಿಲ್ಲೆಗೆ ಏನೂ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಮಾತನಾಡುತ್ತಿದ್ದಾರೆ ಅಲ್ಲವೇ? ಈ ಬಗ್ಗೆ ಇಂದು ನಾನು ಬಹಿರಂಗವಾಗಿ ಸವಾಲನ್ನು ಹಾಕುತ್ತಿದ್ದೇನೆ. ಪ್ರಧಾನಿ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಐದು ವರ್ಷವಾಗಿದೆ. ಬಳ್ಳಾರಿಯಿಂದ ಚಿತ್ರದುರ್ಗಕ್ಕೆ, ಚಿತ್ರದುರ್ಗದಿಂದ ಹೊಸಪೇಟೆಗೆ, ಹೊಸಪೇಟೆಯಿಂದ ಧಾರವಾಡಕ್ಕೆ, ಇದೇ ರೀತಿ ಬೀದರ್‍ನಿಂದ ಶ್ರೀರಂಗಪಟ್ಟಣಕ್ಕೆ ಸುಮಾರು 10 ಸಾವಿರಕೋಟಿ ಅನುದಾನವನ್ನು ಕೇವಲ ರಸ್ತೆಗೆ ಮಾತ್ರ ನೀಡಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆದಾಗ ಬಳ್ಳಾರಿಗೆ ಸುಮಾರು 8 ಕೋಟಿ ರೂ. ಅನುದಾನವನ್ನು ನೀಡಿದ್ದಾರೆ. ಏನೂ ಬೇಕಾದರೂ ಆಗಲಿ ನಾನು ಸವಾಲು ಸ್ವೀಕಾರ ಮಾಡುತ್ತಿದ್ದೇನೆ. ಅಭಿವೃದ್ಧಿ ಮಾಡಿದ್ದರೂ ಕಾಂಗ್ರೆಸ್ ನಾಯಕರು ಇಲ್ಲವೆಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ನನ್ನ ಮಾತುಗಳು ಬದಲಾವಣೆ ಇರಬಹುದು. ಆದರೆ ದಾಖಲಾತಿಗಳನ್ನು ಮುಚ್ಚಿಡಲು ಸಾಧ್ಯವಿಲ್ಲ. ಶ್ವೇತಪತ್ರದ ದಾಖಲಾತಿಗಳನ್ನು ತೆಗೆಯಲಿ. ಒಂದು ರೂಪಾಯಿ ಹೆಚ್ಚಾದಲ್ಲಿ ನಾನು ರಾಜಕೀಯದಿಂದ ನಿವೃತ್ತನಾಗುತ್ತೇನೆ. ಇದನ್ನು ನಾನು ಸವಾಲಾಗಿ ಸ್ವೀಕಾರ ಮಾಡುತ್ತೇನೆ. ಅಷ್ಟೇ ಅಲ್ಲದೇ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅವರಿಗೆ ಉತ್ತರವನ್ನು ಕೊಡುತ್ತೇನೆ ಎಂದು ತಿಳಿಸಿದರು.

ಪ್ರಾಯಶಃ ಕಾಂಗ್ರೆಸಿನ ನಾಯಕರಿಗೆ ಸೋಲುತ್ತಿವೆ ಎಂಬ ಭಯ ಪ್ರಾರಂಭವಾಗಿದೆ. ಅವರು ಮಾತನಾಡುವಂತಹ ಭಾಷೆ ಲಂಗು ಲಗಾಮು ಇಲ್ಲದೇ ಇರುವ ಭಾಷೆಯನ್ನು ಬಳಕೆ ಮಾಡುತ್ತಿದ್ದಾರೆ. ಭಾಷೆ ಎಲ್ಲರಿಗೂ ಬರುತ್ತೆ. ಭಾಷೆ ಮಾತನಾಡುವ ಸಂದರ್ಭದಲ್ಲಿ ಒಬ್ಬ ಮನುಷ್ಯ ಬೈಯಲೇಬೇಕು, ಮಾತನಾಡಬೇಕು ಎಂದರೆ ಏನೂ ಬೇಕಾದರೂ ಮಾತನಾಡುವ ಶಕ್ತಿ ಆತನಿಗಿದೆ. ಹೀಗಾಗಿ ಇವತ್ತು ನಾನು ದೊಡ್ಡ ದೊಡ್ಡ ಮಾತುಗಳನ್ನು ಮಾತನಾಡುವುದಿಲ್ಲ. ನನ್ನ ಜಿಲ್ಲೆಯ ಜನರು ನನ್ನ ಕೈ ಹಿಡಿದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *