ಬೋನಿ ಕಪೂರ್ ತಾಯಿ ಶ್ರೀದೇವಿಯ ಹೊಟ್ಟೆಗೆ ಗುದ್ದಿದ್ದರು- ರಾಮ್ ಗೋಪಾಲ್ ವರ್ಮಾ

Public TV
2 Min Read

ನವದೆಹಲಿ: ಬಹುಭಾಷಾ ನಟಿ ಶ್ರೀದೇವಿ ಸಾವಿನ ಸುತ್ತ ಹಲವಾರು ಅನುಮಾನಗಳು ಮೂಡಿವೆ. ಈ ಮಧ್ಯೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಶ್ರೀದೇವಿ ಅಭಿಮಾನಿಗಳಿಗೆ ಪತ್ರವೊಂದನ್ನ ಬರೆದಿದ್ದು, ಒಮ್ಮೆ ಬೋನಿ ಕಪೂರ್ ಅವರ ತಾಯಿ ಸಾರ್ವಜನಿಕವಾಗಿ ಶ್ರೀದೇವಿಯ ಹೊಟ್ಟೆಗೆ ಗುದ್ದಿದ್ದರು ಎಂದು ಈ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

ಶ್ರೀದೇವಿ ಸಾವಿನ ಸುದ್ದಿ ಹೊರಬಿದ್ದ ಬಳಿಕ ದುಃಖದಿಂದ ಟ್ವೀಟ್ ಮಾಡಿದ್ದ ರಾಮ್‍ಗೋಪಾಲ್ ವರ್ಮಾ, ಶ್ರೀದೇವಿಯನ್ನ ಕೊಂದಿದ್ದಕ್ಕೆ ದೇವರನ್ನ ನಾನು ದ್ವೇಷಿಸುತ್ತೇನೆ. ಸಾವನ್ನಪ್ಪಿದ್ದಕ್ಕೆ ಶ್ರೀದೇವಿಯನ್ನ ದ್ವೇಷಿಸುತ್ತೇನೆ. ಇದಕ್ಕೆ ಕಾರಣ ಇಲ್ಲಿದೆ ಎಂದು ಪತ್ರದ ಲಿಂಕ್ ಹಾಕಿದ್ದರು.

ಫೇಸ್‍ಬುಕ್ ನಲ್ಲಿ ಆರ್‍ಜಿವಿ ಶ್ರೀದೇವಿ ಅಭಿಮಾನಿಗಳಿಗಾಗಿ ಈ ಪತ್ರ ಬರೆದಿದ್ದಾರೆ. ಪತ್ರದ ಆರಂಭದಲ್ಲಿ, ಶ್ರೀದೇವಿ ಬೇರೆಯವರಿಗಿಂತ ಹೆಚ್ಚಾಗಿ ತನ್ನ ಅಭಿಮಾನಿಗಳಿಗೆ ಸೇರಿದ್ದವರು ಎಂದು ಹೇಳಿದ್ದಾರೆ. ಎಲ್ಲರ ಮುಂದೆ ಸಂತೋಷವಾಗಿರುತ್ತಿದ್ದ ಹಾಗೂ ಅವರ ಜೀವನ ಪರಿಪೂರ್ಣವಾಗಿದೆ ಎನಿಸುತ್ತಿದ್ದ ಶ್ರೀದೇವಿ ನಿಜಕ್ಕೂ ಖುಷಿಯಾಗಿರಲಿಲ್ಲ ಎಂದು ಆರ್‍ಜಿವಿ ಹೇಳಿದ್ದಾರೆ.

ಶ್ರೀದೇವಿ ತಾಯಿಗೆ ಅಮೆರಿಕದಲ್ಲಿ ನಡೆದ ಬ್ರೇನ್ ಸರ್ಜರಿ ಸರಿಹೋಗದ ಕಾರಣ ಅವರ ಮಾನಸಿಕ ಆರೋಗ್ಯ ಸರಿಯಿರಲಿಲ್ಲ. ಸಾಯುವ ಮುನ್ನ ಅವರು ತನ್ನೆಲ್ಲಾ ಆಸ್ತಿಯನ್ನು ಶ್ರೀದೇವಿ ಹೆಸರಿಗೆ ಬರೆದಿದ್ದರು. ಆದ್ರೆ ಶ್ರೀದೇವಿ ಸಹೋದರಿ ಶ್ರೀಲತಾ, ತನ್ನ ತಾಯಿಯ ಮಾನಸಿಕ ಆರೋಗ್ಯ ಸರಿಯಿಲ್ಲದ ಕಾರಣ ಈ ವಿಲ್ ಬರೆಯುವಾಗ ಅವರಿಗೆ ಅರಿವಿರಲಿಲ್ಲ ಎಂದು ಕೇಸ್ ಹಾಕಿದ್ದರು. ಹೀಗಾಗಿ ಜಗತ್ತಿನ ಲಕ್ಷಾಂತರ ಅಭಿಮಾನಿಗಳು ಬಯಸುತ್ತಿದ್ದ ಶ್ರೀದೇವಿ ಬಿಡಿಗಾಸು ಇಲ್ಲದೆ ಏಕಾಂಗಿಯಾಗಿ ನಿಂತಿದ್ದರು. ಬೋನಿಯನ್ನ ಹೊರತುಪಡಿಸಿ ಅವರ ಜೊತೆ ಯಾರೂ ಇರಲಿಲ್ಲ. ಆದ್ರೆ ಆಕೆಯ ವಿವಾಹ ಜೀವನದಲ್ಲೂ ಸಂತೋಷ ಇರಲಿಲ್ಲ ಎಂದೆನಿಸುತ್ತದೆ ಎಂದು ಆರ್‍ಜಿವಿ ಹೇಳಿದ್ದಾರೆ.

ಬೋನಿ ಕಪೂರ್ ಮೊದಲಿಗೆ ಮೋನಾ ಶೌರಿ ಕಪೂರ್ ಅವರನ್ನ ಮದುವೆಯಾಗಿದ್ದರು. 1996ರಲ್ಲಿ ಅವರಿಬ್ಬರೂ ಬೇರೆಯಾದರು. ಇದ್ಕಕೆ ಶ್ರೀದೇವಿಯೇ ಕಾರಣ ಎಂದು ಬಿಂಬಿಸಲಾಗಿತ್ತು. ನಂತರ ಶ್ರೀದೇವಿ ಮತ್ತು ಬೋನಿ ಮದುವೆಯಾದರು.

ಬೋನಿ ಕಪುರ್ ತಾಯಿ ಶ್ರೀದೇವಿಯನ್ನು ಮನೆಮುರುಕಿ ಎಂದು ಚಿತ್ರಿಸಿದ್ದರು. ಬೋನಿಯ ಮೊದಲ ಪತ್ನಿ ಮೋನಾಗೆ ಆದ ಸ್ಥಿತಿಯ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಫೈವ್ ಸ್ಟಾರ್ ಹೋಟೆಲ್‍ನಲ್ಲಿ ಶ್ರೀದೇವಿಯ ಹೊಟ್ಟೆಗೆ ಗುದ್ದಿದ್ದರು ಎಂದು ಆರ್‍ಜಿವಿ ಪತ್ರದಲ್ಲಿ ಹೇಳಿದ್ದಾರೆ.

ಶ್ರೀದೇವಿ ಅತ್ಯಂತ ದುಃಖಿ ಮಹಿಳೆಯಾಗಿದ್ದರು. ಅವರ ಜೀವನದಲ್ಲಿ ಏನಾಗ್ತಿದೆ ಎಂದು ಯಾರಿಗೂ ತಿಳಿಯಬಾರದೆಂದು ಮಾನಸಿಕವಾಗಿ ತನ್ನ ಸುತ್ತ ಗೋಡೆ ಕಟ್ಟಿಕೊಂಡಿದ್ದರು. ಹೀಗಾಗಿ ಆಕೆ ತುಂಬಾ ಕೋಪಿಷ್ಟೆ ಎಂಬಂತೆ ಬೇರೆಯವರಿಗೆ ಅನ್ನಿಸುತ್ತಿತ್ತು. ತನ್ನ ಗಂಡ ಹಾಗೂ ಮಕ್ಕಳ ನಿರೀಕ್ಷೆಗೆ ತಕ್ಕಂತೆ ಬದುಕಲು ಪ್ರಯತ್ನಿಸುತ್ತಿದ್ದರು ಎಂದು ಆರ್‍ಜಿವಿ ಉಲ್ಲೇಖಿಸಿದ್ದಾರೆ.

1970 ರಿಂದಲೂ ಶ್ರೀದೇವಿಯ ಅಭಿಮಾನಿಯಾಗಿರುವ ರಾಮ್ ಗೋಪಾಲ್ ವರ್ಮಾ, ತನ್ನ ಗನ್ಸ್ ಅಂಡ್ ಥೈಸ್ ಎಂಬ ಪುಸ್ತದಲ್ಲಿ ಒಂದು ಇಡೀ ಅಧ್ಯಾಯವನ್ನ ಶ್ರೀದೇವಿ ಅವರಿಗೆ ಅರ್ಪಿಸಿದ್ದಾರೆ. ದೇಶದ ಪುರುಷ ಜನಸಂಖ್ಯೆಯ ಆಸೆಯ ವಸ್ತುವಾಗಿದ್ದ ಶ್ರೀದೇವಿ ಹೇಗೆ ಕೇವಲ ಗೃಹಿಣಿಯಾಗಿಬಿಟ್ಟರು ಎಂಬುದರ ಬಗ್ಗೆ ಹೇಳಿದ್ದಾರೆ.

ರಾಮ್ ಗೋಪಾಲ್ ವರ್ಮಾ ಶ್ರೀದೇವಿ ಅವರ ಜೊತೆ ಗೋವಿಂದಾ ಗೋವಿಂದಾ ಹಾಗೂ ಕ್ಷಣ ಕ್ಷಣಂ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *