ಸ್ನೇಹಿತನನ್ನು ಊರಿಗೆ ಕಳುಹಿಸಿ ಬರುತ್ತಿದ್ದಾಗ ಅಪಘಾತ-ಸ್ಥಳದಲ್ಲಿಯೇ ಇಬ್ಬರು ವಿದ್ಯಾರ್ಥಿನಿಯರ ದುರ್ಮರಣ

Public TV
1 Min Read

ಹೈದರಾಬಾದ್: ಸ್ನೇಹಿತನನ್ನು ಊರಿಗೆ ಕಳುಹಿಸಿ ಬರುತ್ತಿದ್ದಾಗ ವೇಗವಾಗಿ ಬಂದ ಗೂಡ್ಸ್ ಲಾರಿ ಸ್ಕೂಟಿ ಮತ್ತು ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿದ್ದು, ಓರ್ವ ವಿದ್ಯಾರ್ಥಿ ಗಾಯಗೊಂಡಿರುವ ಘಟನೆ ಶುಕ್ರವಾರ ಅಲಿಯಾಬಾದ್‍ನ ಸಮೀರ್ ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜಸ್ಥಾನ ಮೂಲದ 22 ವರ್ಷದ ಪಲ್ಲವಿ ಗುಪ್ತಾ ಹಾಗೂ ಚೆನ್ನೈ ಮೂಲದ ವೀಣಾ ಇಂದಿರಾ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ವಿದ್ಯಾರ್ಥಿಗಳು. ಕುಶಾಲ್ ಎಂಬ ವಿದ್ಯಾರ್ಥಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲಿಯಾಬಾದ್ ಬಳಿ ರಸ್ತೆ ದಾಟಲು ಬೈಕಿನಲ್ಲಿ ಕಾಯುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

ಸಮೀರ್ ಪೇಟ್ ನಲ್ಲಿರುವ ನ್ಯಾಷನಲ್ ಇನ್ಸ್ ಟ್ಯೂಟ್ ಆಫ್ ಕನ್ಸ್ ಸ್ಟ್ರಕ್ಷನ್ ಮ್ಯಾನೇಜ್‍ಮೆಂಟ್ ರಿಸರ್ಚ್ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳು ಓದುತ್ತಿದ್ದರು. ಇವರ ಸ್ನೇಹಿತ ಚಿರಂಜೀವಿ ಮೆಹಾತ್ ಕ್ರಿಸ್‍ಮಸ್ ಹಬ್ಬಕ್ಕೆಂದು ಊರಿಗೆ ಹೋಗುತ್ತಿದ್ದ. ಆದ್ದರಿಂದ ಸ್ನೇಹಿತರು ಒಟ್ಟಾಗಿ ಕೊಂಪಲ್ಲಿ ಬಸ್ ನಿಲ್ದಾಣಕ್ಕೆ ಬಿಟ್ಟು ವಾಪಸ್ ಹಾಸ್ಟೆಲ್‍ಗೆ ಹಿಂದಿರುಗುವ ವೇಳೆ ಅಪಘಾತ ಸಂಭವಿಸಿದೆ.

ಪಲ್ಲವಿ ಹಾಗೂ ವೀಣಾ ಸ್ಕೂಟಿಯಲ್ಲಿ ಹಾಗೂ ಕುಶಾಲ್ ಬೈಕ್‍ನಲ್ಲಿ ವಾಪಸ್ ಬರುತ್ತಿದ್ದರು. ಈ ಸಂದರ್ಭದಲ್ಲಿ ಅಲಿಯಾಬಾದ್ ಬಳಿ ಗೂಡ್ಸ ಲಾರಿಯೊಂದು ಹಿಂಬದಿಯಿಂದ ವೇಗವಾಗಿ ಬಂದು ಸ್ಕೂಟಿ ಹಾಗೂ ಬೈಕ್ ಎರಡಕ್ಕೂ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿಯಲ್ಲಿದ್ದ ಪಲ್ಲವಿ, ವೀಣಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಶಾಲ್ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಇನ್ಸ್ ಪೆಕ್ಟರ್ ಡಿ. ಭಾಸ್ಕರ್ ರೆಡ್ಡಿ ತಿಳಿಸಿದ್ದಾರೆ.

ಇಂದಿರಾ ತಂದೆ ಮಧುಸೂದನ್ ಚೆನ್ನೈನಿಂದ ಬಂದು ಗಾಂಧಿ ಆಸ್ಪತ್ರೆಯಿಂದ ಮೃತದೇಹವನ್ನು ಪಡೆದುಕೊಂಡಿದ್ದಾರೆ. ಇನ್ನು ಪಲ್ಲವಿ ಸಂಬಂಧಿಕರು ಆಕೆ ದೇಹವನ್ನು ನಗರದಿಂದ ರಾಜಸ್ಥಾನಕ್ಕೆ ಶನಿವಾರ ವಿಮಾನದ ಮೂಲಕ ಕಳುಹಿಸಿದ್ದಾರೆ. ಈ ಭೀಕರ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ಲಾರಿಯನ್ನು ಪತ್ತೆ ಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *