ಬಿಜೆಪಿ ಜೊತೆ ರಜನಿಕಾಂತ್ ಪಕ್ಷ ಶೀಘ್ರವೇ ವಿಲೀನ?

Public TV
2 Min Read

ನವದೆಹಲಿ: ತಮಿಳುನಾಡು ರಾಜಕೀಯದಲ್ಲಿ ಭಾರೀ ಬೆಳವಣಿಗೆ ಕಾಣಿಸಿಕೊಂಡಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ನಡೆ ಭಾರೀ ಕುತೂಹಲವನ್ನು ಉಂಟುಮಾಡಿದೆ.

ರಜನಿಕಾಂತ್ ತಮ್ಮ ಮಕ್ಕಳ್ ಮಂದ್ರಂ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಇದರಂತೆ ಕಳೆದ 5 ದಿನಗಳಿಂದ ರಜನಿಕಾಂತ್ ಅವರು ಬಿಜೆಪಿ ನಾಯಕರೊಂದಿಗೆ 7 ಬಾರಿ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.

ಸದ್ಯ ದೆಹಲಿಯಲ್ಲೇ ವಾಸ್ತವ್ಯ ಹೂಡಿರುವ ರಜನಿಕಾಂತ್ ಬಿಜೆಪಿ ನಾಯಕರೊಂದಿಗೆ ಮೇಲಿಂದ ಮೇಲೆ ಸಭೆ ನಡೆಸಿದ ಹಿನ್ನೆಲೆಯಲ್ಲಿ ಚರ್ಚೆ ಆರಂಭವಾಗಿದೆ. ಅಲ್ಲದೇ ರಜನಿಕಾಂತ್ ತಮ್ಮ ಸ್ವತಃ ಪಕ್ಷ ಸ್ಥಾಪನೆಗೂ ಮುನ್ನವೇ ಪ್ರಧಾನಿ ಮೋದಿ ಅವರನ್ನು ಹಲವು ಬಾರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ ಬಳಿಕ ನಡೆದ ರಾಜಕೀಯ ಬೆಳವಣಿಕೆಗಳಲ್ಲಿ ರಜನಿಕಾಂತ್ ತಮ್ಮ ಸ್ವತಃ ಪಕ್ಷ ರಜಿನಿ ಮಕ್ಕಳ್ ಮಂದ್ರಂ ಪಕ್ಷ ಸ್ಥಾಪಿಸಿ ಯಾವುದೇ ರಾಷ್ಟ್ರೀಯ ಪಕ್ಷಗಳೊಂದಿಗೆ ಹೋಗುವುದಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ್ದರು.

ಇತ್ತ ಜಯಲಲಿತಾ ಹಾಗೂ ಕರುಣಾನಿಧಿ ನಿಧನದ ಬಳಿಕ ತಮಿಳುನಾಡು ರಾಜಕೀಯದಲ್ಲಿ ತನ್ನ ಪ್ರಭಾವ ಬೀರಲು ಬಿಜೆಪಿ ಚಿಂತನೆ ನಡೆಸಿದ್ದು, ಈ ಕಾರಣಕ್ಕಾಗಿ ರಜನಿಕಾಂತ್ ಮೂಲಕ ಬೇರೂರಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.

2017 ಡಿಸೆಂಬರ್ 31 ರಂದು ರಾಜಕೀಯ ಪ್ರವೇಶ ಕುರಿತು ಘೋಷಣೆ ಮಾಡಿದ್ದ ರಜನಿ 2021ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವುದಾಗಿ ತಿಳಿಸಿದ್ದರು. ಅಲ್ಲದೇ ತಮಿಳುನಾಡು ರಾಜಕೀಯ ನಡೆದಿರುವ ಕೆಲ ಘಟನೆಗಳು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. ಉಳಿದ ರಾಜ್ಯಗಳು ನಮ್ಮತ್ತ ನೋಡಿ ನಗುವಂತೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಒಂದೊಮ್ಮೆ ರಜಿನಿಕಾಂತ್ ಮೈತ್ರಿ ರಾಜಕಾರಣಕ್ಕೆ ಮುಂದಾದರೆ ದಕ್ಷಿಣ ಭಾರತದಲ್ಲಿ ಬಿಜೆಪಿ ಮತ್ತೊಂದು ಮಹತ್ವದ ಬಲ ಸಿಗುವಂತಾಗುತ್ತದೆ. ಇನ್ನು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕೇರಳ ನಟ ಮೋಹನ್ ಲಾಲ್ ಕೂಡ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಈ ವೇಳೆ ತಿರುವನಂತಪುರಂ ಕ್ಷೇತ್ರದಿಂದ ಕಾಂಗ್ರೆಸ್ ಸಂಸದ ಶಶಿತರೂರ್ ವಿರುದ್ಧ ಸ್ಪರ್ಧೆ ಮಾಡಲು ಮೋಹನ್ ಲಾಲ್ ಅವರಿಗೆ ಬಿಜೆಪಿ ಟಿಕೆಟ್ ನೀಡುತ್ತಿದೆ ಎನ್ನವ ವಿಚಾರ ಬೆಳಕಿಗೆ ಬಂದಿತ್ತು. ಇದನ್ನು ಓದಿ:  ತಿರುವನಂತಪುರಂ ಕ್ಷೇತ್ರದಿಂದ ಮೋಹನ್‍ಲಾಲ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ?

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=eqv0iMvP3xo

Share This Article
Leave a Comment

Leave a Reply

Your email address will not be published. Required fields are marked *