ರಸ್ತೆಯಲ್ಲಿ ಪೈರು ನೆಟ್ಟು ಗಾಂಧಿ ವೇಷಧಾರಿಯಿಂದ ವಿನೂತನ ಪ್ರತಿಭಟನೆ

Public TV
2 Min Read

ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಸೋಲೂರು ಹೋಬಳಿ ವ್ಯಾಪ್ತಿಯಲ್ಲೊಂದು ವಿನೂತನ ಪ್ರತಿಭಟನೆ ನಡೆದಿದೆ.

ಮೋಟಗಾನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಟನಪಾಳ್ಯ ಗ್ರಾಮದಲ್ಲಿ ಇಂತಹ ವಿನೂತನ ಪ್ರತಿಭಟನೆ ನಡೆದಿದ್ದು, ಸುಮಾರು ವರ್ಷಗಳಿಂದ ಕಾಟನಪಾಳ್ಯ ರಸ್ತೆ ಅಭಿವೃದ್ಧಿ ಕಾಣದೆ ಮೂಲಭೂತ ಸೌಕರ್ಯದಿಂದ ವಂಚಿತವಾಗಿತ್ತು. ಸುಮಾರು ವರ್ಷಗಳಿಂದ ಇಲ್ಲಿನ ಗ್ರಾಮಸ್ಥರು ಮೋಟಗಾನಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ, ನೆಲಮಂಗಲ ಶಾಸಕ ಶ್ರೀನಿವಾಸ ಮೂರ್ತಿ ಮತ್ತು ಮಾಗಡಿ ಶಾಸಕ ಮಂಜುನಾಥ್ ಅವರಿಗೆ ಹಲವಾರು ಬಾರಿ ಮನವಿ ಮಾಡಲಾಗಿತ್ತು. ಆದರೆ ಏನೂ ಪ್ರಯೋಜನವಾಗಿರಲಿಲ್ಲ.

ಗುಂಡಿ ಬಿದ್ದ ರಸ್ತೆಗಳಲ್ಲಿ ವಾಹನ ಸವಾರರು ಹರಸಾಹಸ ಪಡುವಂತಹ ಸ್ಥಿತಿ ಒಂದು ಕಡೆಯಾದ್ರೆ, ಇನ್ನೊಂದೆಡೆ ಕೆಸರು ಗದ್ದೆಯಂತಿರುವ ರಸ್ತೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹರಸಾಹಸ ಪಡುವ ಸ್ಥಿತಿ. ಇವೆಲ್ಲವುಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗ ಗಮನಕ್ಕೆ ತಂದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೆ ಜಾಣ ಕುರುಡುತನ ಪ್ರದರ್ಶನಕ್ಕೆ ಮುಂದಾಗಿದ್ದರು. ಇದನ್ನೂ ಓದಿ: ಪಿಯುಸಿ ವಿದ್ಯಾರ್ಥಿನಿ ಶಂಕಿತ ರೇಬಿಸ್ ಸೋಂಕಿಗೆ ಬಲಿ

ಇಂದು ಗಾಂಧಿಜಿಯವರ ಗ್ರಾಮಗಳ ಅಭಿವೃದ್ಧಿ ಕನಸು ಅಧಿಕಾರಿಗಳು ನನಸು ಮಾಡುತ್ತಿಲ್ಲ. ಈ ರಸ್ತೆಯಲ್ಲಿ ವೃದ್ಧರು ಮಕ್ಕಳು ಬಿದ್ದು ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ರಸ್ತೆಯ ಕಡೆ ಗಮನ ಹರಿಸದೆ ನಮಗೆ ಮೂಲಭೂತ ಸೌಕರ್ಯ ನೀಡದೆ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಕಾಟನಪಾಳ್ಯ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತ ಇವುಗಳನ್ನೆಲ್ಲ ಗಮನಿಸಿದ ಚೇತನ್ ಎಂಬಾತ ಗಾಂಧಿ ಜಯಂತಿಯಾದ ಇಂದು ಮಹಾತ್ಮಾ ಗಾಂಧೀಜಿಯವರ ವೇಷ ಧರಿಸಿ ರಸ್ತೆಯಲ್ಲಿ ಪೈರು ನಾಟಿ ಮಾಡಿದ್ದಾರೆ. ಈ ಮೂಲಕ ಗಾಂಧೀಜಿ ಕನಸು ಇನ್ನಾದ್ರೂ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ನನಸು ಮಾಡಿ. ನಮ್ಮ ಗ್ರಾಮಕ್ಕೆ ರಸ್ತೆ ಸರಿಪಡಿಸಿ ಕೊಡಿ ಎಂದು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಫೋಟೋ ಮುಂದೆ ಉಪ್ಪಿನ ಪ್ಯಾಕೆಟ್ ಇಟ್ಟು ಗಾಂಧಿ ಜಯಂತಿ ಆಚರಣೆ

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಾಂಧೀಜಿಯವರ ತತ್ವ ಆದರ್ಶಗಳನ್ನು ಪಾಲಿಸಬೇಕು ಆಗಲೇ ಗಾಂಧೀಜಿಯವರ ಕನಸು ನನಸಾಗಲು ಸಾಧ್ಯ ಎಂದು ತಿಳಿಸಿದರು. ಚೇತನ್ ಜೊತೆ ಗ್ರಾಮದ ಇತರೆ ಯುವಕರು ಕೂಡ ರಸ್ತೆಯಲ್ಲಿ ಪೈರು ನಾಟಿ ಮಾಡುವ ಮೂಲಕ ಸಾಥ್ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *