ವಿಧಾನಸೌಧ ಆವರಣದಲ್ಲಿ ಸಿಕ್ಕಿದ್ದ ಕೋಟಿ ರೂಪಾಯಿ ಪ್ರಕರಣಕ್ಕೆ ಹೊಸ ಟ್ವಿಸ್ಟ್

Public TV
1 Min Read

ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಸಿಕ್ಕಿದ್ದ ಒಂದೂ ಮುಕ್ಕಾಲು ಕೋಟಿ ರೂಪಾಯಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಎದುರಾಳಿಗಳನ್ನು ಮಟ್ಟ ಹಾಕೋ ಸಲುವಾಗಿ ಸಿಎಂ ಸಿದ್ದರಾಮಯ್ಯ ಹೊಸ ಅಸ್ತ್ರವನ್ನ ರಡಿ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.

ಹೌದು. ಇನ್ನೇನು ಚಾರ್ಜ್‍ಶೀಟ್ ದಾಖಲಾಗಿದೆ, ಈ ಪ್ರಕರಣದ ಕಥೆ ಮುಗಿದೇ ಹೋಯ್ತು ಅನ್ನುವಾಗ ಉಳಿದಿರೋ ತನಿಖೆ ಪಕ್ಕಾ ನಡೆಸಿ ಅಂತ ಹೊಸ ಪೊಲೀಸ್ ಟೀಂ ಅಖಾಡಕ್ಕೆ ಇಳಿಸಿದ್ದಾರೆ. ಐದಾರು ತಿಂಗಳ ಬಳಿಕ ಎಸಿಪಿಯೊಬ್ಬರ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿದೆ.

ಅಖಾಡದಲ್ಲಿರೋ ಎಂಟತ್ತು ಮಂದಿ ಅಧಿಕಾರಿಗಳ ತಂಡ ಲಾಯರ್ ಬಳಿ ಇದ್ದ ಕೋಟ್ಯಂತರ ರುಪಾಯಿ ದುಡ್ಡು ಯಾರದ್ದು ಎಂಬ ಬಗ್ಗೆ ಪತ್ತೆ ಹಚ್ಚುತ್ತಿದೆ. ಕಾರಿನಲ್ಲಿ ಸಿಕ್ಕಿದ್ದ ಕರೆನ್ಸಿ ನಂಬರ್ ಹಿಡಿದುಕೊಂಡು ಪೊಲೀಸ್ ಅಧಿಕಾರಿಗಳು ಬ್ಯಾಂಕ್‍ಗಳಿಗೆ ಸುತ್ತುತ್ತಿದ್ದಾರೆ.

ಹೆಚ್ಚು ಕಮ್ಮಿ 100 ಬ್ಯಾಂಕ್‍ಗಳ ಪಟ್ಟಿ ಸಿದ್ಧಪಡಿಸಿರೋ ಪೊಲೀಸರ ತಂಡ ಈಗಾಗಲೇ 50ಕ್ಕೂ ಹೆಚ್ಚು ಬ್ಯಾಂಕ್‍ಗಳಿಂದ ಮಾಹಿತಿ ಸಂಗ್ರಹಿಸಿದೆ. ಆರೋಪಿ ವಕೀಲ ಸಿದ್ಧಾರ್ಥ್ ಹೈಕೋರ್ಟ್ ನಲ್ಲಿ ಪಡೆದುಕೊಂಡಿರೋ ಸ್ಟೇ ತೆರವಿಗೆ ವಿಶೇಷ ಪೊಲೀಸ್ ಟೀಂ ಮುಂದಾಗಿದೆ.

ಇನ್ನು ದುಡ್ಡು ಸಿಕ್ಕಿದ್ದಾಗ ಕಾಂಗ್ರೆಸ್ಸಿಗರು ಬಿಜೆಪಿ ಕಡೆ ಬೊಟ್ಟು ಮಾಡಿದ್ರು. ಆದರೆ ಆ ದುಡ್ಡಿನ ಬಗ್ಗೆ ಬಿಎಸ್‍ವೈ ಅವರನ್ನು ಕೇಳಿದ್ರೆ ಹೆಚ್ಚಿನ ಮಾಹಿತಿ ಸಿಗುತ್ತೆ ಅಂತ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ರು.

ಇದು ಎದುರಾಳಿಗಳನ್ನು ಹೆಣೆಯಲು ಸಿಎಂ ಅಂಡ್ ಟೀಂ ಹೂಡಿರೋ ಹೊಸ ಅಸ್ತ್ರ ಎನ್ನಲಾಗಿದ್ದು, ಮುಂದಿನ ಚುನಾವಣೆಯಲ್ಲಿ ಈ ಅಸ್ತ್ರ ಬಳಸಿಕೊಳ್ಳಲು ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ.

ಏನಿದು ಪ್ರಕರಣ?: 2016ರ ಅಕ್ಟೋಬರ್‍ನಲ್ಲಿ ವಿಧಾನಸೌಧದ ಗೇಟ್ ಬಳಿ ತಪಾಸಣೆ ಮಡುವ ವೇಳೆ ವಕೀಲ ಸಿದ್ಧಾರ್ಥ್ ಅವರ ವೋಕ್ಸ್ ವೇಗನ್ ಕಾರಿನಲ್ಲಿ ಸಾಗಿಸಲಾಗ್ತಿದ್ದ ದಾಖಲೆಯಿಲ್ಲದ ಸುಮಾರು 1.97 ಕೋಟಿ ರೂ. ಹಣ ಪತ್ತೆಯಾಗಿತ್ತು. ಈ ಹಣವನ್ನು ಪೊಲೀಸರು ಜಪ್ತಿ ಮಾಡಿ ಸಿದ್ಧಾರ್ಥ್‍ರನ್ನು ವಿಚಾರಣೆಗೆ ಒಳಪಡಿಸಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *