ಗ್ರಾಮೀಣ ಮಕ್ಕಳ ಅಚ್ಚು ಮೆಚ್ಚಿನ ಎತ್ತಿನಬಂಡಿ ಗ್ರಂಥಾಲಯ

Public TV
1 Min Read

ಪುಣೆ: ಮಹಾರಾಷ್ಟ್ರದ ಸೋಲಾಪುರದ ದರ್ಗನಹಳ್ಳಿ ಗ್ರಾಮದ ವಿಶೇಷ ಗ್ರಂಥಾಲಯ ಈಗ ಸಖತ್ ಸುದ್ದಿಯಲ್ಲಿದೆ. ಎತ್ತಿನಬಂಡಿಯಲ್ಲಿಯೇ ಪುಸ್ತಕಗಳನ್ನು ಇರಿಸಲಾಗಿದ್ದು, ಇದು ಹಳ್ಳಿ ಮಕ್ಕಳ ಅಚ್ಚುಮೆಚ್ಚಿನ ಎತ್ತಿನಬಂಡಿ ಗ್ರಂಥಾಲಯ ಎಂದೇ ಮೆಚ್ಚುಗೆ ಪಡೆದಿದೆ.

ಸೋಲಾಪುರದ ದರ್ಗನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಕಳೆದ 6 ತಿಂಗಳಿಂದ ಎತ್ತಿನಬಂಡಿ ಗ್ರಂಥಾಲಯವನ್ನು ಗ್ರಾಮಕ್ಕೆ ತರುತ್ತಿರುವ ಕಾಶಿನಾಥ್ ಕೋಲಿ ಅವರ ಶ್ರಮ. ಹೌದು. ಸೋಲಾಪುರದ ನಗರ ಗ್ರಂಥಾಲಯದಲ್ಲಿ ಆಫೀಸ್ ಹುಡುಗನಾಗಿ ಕೆಲಸ ಮಾಡುವ ಕಾಶಿನಾಥ್ ಕೋಲಿ ಅವರು ಈ ಅಪರೂಪದ ಎತ್ತಿನಬಂಡಿ ಗ್ರಂಥಾಲಯವನ್ನು ನಡೆಸುತ್ತಿದ್ದಾರೆ. ಈ ಗ್ರಂಥಾಲಯವನ್ನು ಕಾಶಿನಾಥ್ ಅವರು ವಿಶೇಷವಾಗಿ ಹಳ್ಳಿಯ ಮಕ್ಕಳಿಗಾಗಿಯೇ ಮಾಡಿದ್ದಾರೆ.

ಕಳೆದ ಆರು ತಿಂಗಳಿನಿಂದ ಈ ಗ್ರಂಥಾಲಯ ಕಾರ್ಯನಿರ್ವಸುತ್ತಿದೆ. ಹೀಗಾಗಿ ಹಳ್ಳಿಯ ಮಕ್ಕಳು ಈಗ ಮನೆಯಲ್ಲಿಯೇ ಕುಳಿತು ಪುಸ್ತಕಗಳನ್ನು ಉಚಿತವಾಗಿ ಓದುತ್ತಿದ್ದಾರೆ. ಮಕ್ಕಳ ಅನುಕೂಲಕ್ಕಾಗಿ ಕಾಶಿನಾಥ್ ಅವರು ಸುಮಾರು ಒಂದೂವರೆ ಸಾವಿರ ಪುಸ್ತಕಗಳನ್ನು ತಮ್ಮ ಎತ್ತಿನಬಂಡಿ ಗ್ರಂಥಾಲಯದಲ್ಲಿ ಸಂಗ್ರಹಿಸಿಟ್ಟಿದ್ದಾರೆ.

ತಮ್ಮ ರಜಾ ದಿನಗಳಲ್ಲಿ ಅವರು ಎತ್ತಿನಗಾಡಿಯಲ್ಲಿ ಪುಸ್ತಕಗಳನ್ನು ಹೊತ್ತು ದರ್ಗನಹಳ್ಳಿ ಗ್ರಾಮಕ್ಕೆ ಹೋಗುತ್ತಾರೆ. ಅವರ ಎತ್ತಿನ ಬಂಡಿಯಲ್ಲಿ ಚಲಿಸುತ್ತಿರುವ ಮೊಬೈಲ್ ಲೈಬ್ರರಿ ಈಗ ದರ್ಗನಹಳ್ಳಿ ಗ್ರಾಮದ ಗುರುತಾಗಿದೆ. ಮೊಬೈಲ್, ಟಿವಿಯಲ್ಲಿ ಮಕ್ಕಳು ಹೆಚ್ಚು ಗಮನ ಹರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಅವರು ಪುಸ್ತಕಗಳನ್ನು ಓದುವ ಮಕ್ಕಳ ಆಸಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಈ ಬಗ್ಗೆ ಮಾತನಾಡಿದ ಕಾಶಿನಾಥ್, ಮೊಬೈಲ್ ವ್ಯಾನ್ ಲೈಬ್ರರಿಯ ಬದಲು ನಾನು ಬುಲಕ್ ಕಾರ್ಟ್ ಲೈಬ್ರರಿಯನ್ನು ಆರಿಸಿದ್ದೇನೆ. ಗ್ರಾಮೀಣ ಪ್ರದೇಶವಾದ ಕಾರಣಕ್ಕೆ ಎತ್ತಿನಬಂಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಎತ್ತಿನಬಂಡಿ ಗ್ರಂಥಾಲಯದಿಂದ ಚಿಕ್ಕ ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಾಗಿದೆ ಎಂದು ಖುಷಿಯನ್ನು ಹಂಚಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *