ಬೆಂಗಳೂರು: ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದು ಹೆಚ್. ವಿಶ್ವನಾಥ್ ತಿಳಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿಶ್ವನಾಥ್, ಸ್ಪೀಕರ್ ರಮೇಶ್ ಕುಮಾರ್ ನಮಗೆ ಯಾವಾಗ ಕರೆಯುತ್ತಾರೆ, ನಾವು ಆವಾಗ ಬರುತ್ತೇವೆ ಎಂದು ಮೊದಲೇ ಹೇಳಿದ್ದೇವೆ. ಸ್ಪೀಕರ್ ಕರೆದಾಗ ನಾವು ಅವರ ಎದುರಿಗೆ ಬಂದು ರಾಜೀನಾಮೆಯನ್ನು ಅಂಗೀಕಾರ ಮಾಡುವಂತೆ ಮನವಿ ಮಾಡುತ್ತೇವೆ ಎಂದರು.
ಸ್ಪೀಕರ್ ಕಚೇರಿಯಿಂದ ನಮಗೆ ಕರೆ ಬರಬಹುದು. ಅವರು ಕರೆಯದೇ ನಾವು ಹೋಗುವುದಕ್ಕೆ ಆಗುವುದಿಲ್ಲ. ಸ್ಪೀಕರ್ ಏನೂ ಹೇಳುತ್ತಾರೋ ನಾವು ಅದನ್ನು ಗೌರವದಿಂದ ನಡೆದುಕೊಳ್ಳಬೇಕು. ನಮ್ಮ ರಾಜೀನಾಮೆಯನ್ನು ಅಂಗೀಕಾರ ಮಾಡಬೇಕು. ಸ್ಪೀಕರ್ ರಮೇಶ್ ಕುಮಾರ್ ಅವರು ಸಂವಿಧಾನದ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಹಾಗಾಗಿ ಅವರು ನಮ್ಮ ರಾಜೀನಾಮೆ ಅಂಗೀಕಾರ ಮಾಡುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದು ಹೇಳಿದರು.
ರಮೇಶ್ ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿ, ಶನಿವಾರ ಮಧ್ಯಾಹ್ನದವರೆಗೂ ನಾನು ಕಚೇರಿಯಲ್ಲಿ ಇದ್ದೆ. ನಾನಿಲ್ಲದ ಸಂದರ್ಭದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ತುರ್ತಾಗಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಎರಡು ದಿನಗಳ ನಂತರ ನಾನು ಕಚೇರಿಗೆ ಬಂದಿದ್ದೇನೆ. ಈಗ ಹೋಗಿ ನೋಡಿ ರಾಜೀನಾಮೆ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.
ಜನರ ಭಾವನೆಗಳಿಗೆ ನಾನು ಸ್ಪಂದಿಸಬೇಕಿದೆ. ರೂಲ್ ಬುಕ್ ನೋಡಿ ಮುಂದಿನ ತೀರ್ಮಾನ ಮಾಡುತ್ತೇನೆ. ಹೀಗಾಗಿ ತಕ್ಷಣವೇ ಅತೃಪ್ತ ಶಾಸಕರ ರಾಜೀನಾಮೆಯನ್ನು ತುರ್ತಾಗಿ ಅಂಗೀಕಾರ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿ ಕರೆಸಿ ಮಾತುಕತೆ ನಡೆಸುತ್ತೇನೆ ಎಂದು ಸ್ಪೀಕರ್ ಸ್ಪಷ್ಟನೆ ನೀಡಿದರು.