ಗೃಹ ಸಚಿವ ಎಂಬಿ ಪಾಟೀಲ್‍ಗೆ ಚಾಟಿ ಬೀಸಿದ ಸ್ಪೀಕರ್ ರಮೇಶ್ ಕುಮಾರ್

Public TV
2 Min Read

ಬೆಂಗಳೂರು: ದೋಸ್ತಿ ಸರ್ಕಾರದ ವಿಶ್ವಾತ ಮತಯಾಚನೆ ಮೇಲಿನ ಚರ್ಚೆ ಸದನದಲ್ಲಿ ಮುಂದುವರಿದಿದ್ದು, ಈ ಸಂದರ್ಭದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಗೃಹ ಸಚಿವ ಎಂಬಿ ಪಾಟೀಲ್ ಅವರಿಗೆ ಖಾರವಾಗಿ ಚಾಟಿ ಬೀಸಿದ ಪ್ರಸಂಗ ನಡೆಯಿತು.

ಸದನದಲ್ಲಿ ಮಾತನಾಡಿದ ಶಾಸಕ ಎಟಿ ರಾಮಸ್ವಾಮಿ ಅವರು ರಾಜೀನಾಮೆ ನೀಡಿ ತೆರಳಿದ ಅತೃಪ್ತರ ವಿರುದ್ಧ ಗುಡುಗಿದರು. ಶಾಸಕರು ಸ್ವಾಭಿಮಾನಿಗಳಾಗಿದ್ದರೆ, ಕರ್ನಾಟಕ ಬಿಟ್ಟು ಹೋಗುತ್ತಿರಲಿಲ್ಲ. ಇಂದು ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಮರ್ಯಾದೆ ತೆಗೆದಿದ್ದಾರೆ. ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಗೊತ್ತಿದೆ. ಅಧಿಕಾರ ಹಸ್ತಾಂತರದ ಬಗ್ಗೆಯೂ ಸಿಎಂ ಅವರಿಗೆ ಹೇಳಿದ್ದೆ ಎಂದರು.

ರಾಜ್ಯದಲ್ಲಿ ಆಡಳಿತ ಪಕ್ಷಕ್ಕಿಂತ ಹೆಚ್ಚಿನ ಜವಾಬ್ದಾರಿ ವಿರೋಧ ಪಕ್ಷಕ್ಕಿದೆ. ಆದರೆ ಸೇವೆ ಮಾಡುವ ಉದ್ದೇಶ ಒಂದೇ ಆಗಿದ್ದರೆ ಅಲ್ಲೇ ಕೂರಬಹುದಲ್ವೇ. ಆ ಮೂಲಕ ಆಡಳಿತ ಪಕ್ಷವನ್ನು ಸರಿ ದಾರಿಗೆ ತರುವ ಕೆಲಸ ಮಾಡಬಹುದು. ಆದರೆ ನಿಮಗೆ ಬೇರೆ ಉದ್ದೇಶ ಇರಬಹುದು ಎಂದರು.

ಇದೇ ಸಂದರ್ಭದಲ್ಲಿ ಅತೃಪ್ತ ಶಾಸಕರ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಅವರು, ಅತೃಪ್ತರಿಗೆ ರಾಕ್ಷಸಿಯ ಪ್ರವೃತ್ತಿ ಹೆಚ್ಚಾಗಿದೆ. ಆಡಳಿತ ಜೀವಂತವಾಗಿದೆಯೋ ಇಲ್ಲವೋ, ಅತೃಪ್ತರಿಗೆ ಝೀರೋ ಟ್ರಾಫಿಕ್ ನಲ್ಲಿ ಹೋಗೋಕೆ ಹೇಗೆ ಅನುಮತಿ ನೀಡಿದ್ರಿ ಎಂದು ಗೃಹ ಸಚಿವ ಎಂಬಿ ಪಾಟೀಲರ ವಿರುದ್ಧ ವಾಗ್ದಾಳಿ ನಡೆಸಿದರು.

ಈ ನಡುವೆ ಅತೃಪ್ತರಿಗೆ ಝೀರೋ ಟ್ರಾಫಿಕ್ ಕೊಟ್ಟ ವಿಚಾರ ಗೃಹ ಸಚಿವರಿಂದ ಸ್ಪಷ್ಟನೆ ನೀಡಲು ಯತ್ನಿಸಿದರು. ರಾಜ್ಯಪಾಲರಿಂದ ಅತೃಪ್ತರಿಗೆ ರಕ್ಷಣೆ ಕೊಡಬೇಕು ಎಂದು ಪೊಲೀಸರಿಗೆ ಸೂಚನೆ ಇತ್ತು. ನೇರವಾಗಿ ಪೊಲೀಸರಿಗೆ ನಿರ್ದೇಶನ ನೀಡಲಾಗಿತ್ತು. ಶಾಸಕರಿಗೆ ಹೆಸರು ಬರೆದು ರಕ್ಷಣೆ ಕೊಡಬೇಕು ಎಂಬ ಆದೇಶ ನೀಡಲಾಗಿತ್ತು. ಅವರ ಚಲನವಲನಗಳಿಗೆ ಪೊಲೀಸ್ ಸೂಕ್ತ ಭದ್ರತೆಯನ್ನು ನೀಡಬೇಕಾಗಿ ಹೆಚ್‍ಎಎಲ್ ಪೊಲೀಸರಿಗೂ, ಕಮೀಷನರ್‍ಗೆ ಪತ್ರ ಬರೆಯಲಾಗಿತ್ತು ಎಂದರು.

ಸಚಿವರ ಉತ್ತರಕ್ಕೆ ಸಮಾಧಾನಗೊಂಡ ಸ್ಪೀಕರ್ ಅವರು, ಝೀರೋ ಟ್ರಾಫಿಕ್ ಯಾರು ಯಾರಿಗೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಕೂಡಲೇ ತಮ್ಮ ಹೇಳಿಕೆ ಸ್ಪಷ್ಟನೆ ಕೊಟ್ಟ ಎಂಬಿ ಪಾಟೀಲ್ ಅವರು, ಅತೃಪ್ತರಿಗೆ ಝೀರೋ ಟ್ರಾಫಿಕ್ ಕೊಟ್ಟಿಲ್ಲ, ಸೂಚನೆಯೂ ಬಂದಿಲ್ಲ ಎಂದರು. ಈ ಮಾತಿಗೆ ಮತ್ತಷ್ಟು ಅಸಮಾಧಾನಗೊಂಡ ಅವರು, ನಿಮಗೇ ಈ ಹೇಳಿಕೆ ನೀಡಲು ಒಪ್ಪಿಗೆ ಇದೆಯಾ, ನಾಳೆ ಅಪರಾಧಿಗಳಿಗೆ ರಕ್ಷಣೆ ಕೊಡಿ. ಒಬ್ಬ ಗೃಹ ಸಚಿವರಾಗಿ ಈ ಹೇಳಿಕೆ ಕೊಡುತ್ತೀರಿ. ಇಡೀ ದೇಶ ನೋಡಿದೆ ಅವರಿಗೆ ಝೀರೋ ಟ್ರಾಫಿಕ್ ಕೊಟ್ಟಿರುವುದು ಎಂದರು.

ತಮ್ಮ ವಾದವನ್ನು ಮುಂದುವರಿಸಿದ ಸಚಿವರು, ಅವರಿಗೆ ಝೀರೋ ಟ್ರಾಫಿಕ್ ಕೊಟ್ಟಿಲ್ಲ ಎಂದರು. ಇದರ ನಡುವೆ ಮಧ್ಯ ಪ್ರವೇಶ ಮಾಡಿದ ಹೆಚ್‍ಕೆ ಪಾಟೀಲ್ ಅವರು, ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದರು. ಬಳಿಕ ಮಾತನಾಡಿದ ಸ್ಪೀಕರ್, ಝೀರೋ ಟ್ರಾಫಿಕ್ ಕೊಟ್ಟಿದ್ದೀರಾ ಎಂಬುವುದು ನನಗೆ ಗೊತ್ತಿದೆ ಎಂದರು. ಆ ಬಳಿಕ ನಾನು ಈ ಬಗ್ಗೆ ವಿಡಿಯೋ ಕ್ಲೀಪಿಂಗ್ ನೀಡುತ್ತೇನೆ ಎಂದರು.

ಗೃಹ ಸಚಿವರ ಉತ್ತರದಿಂದ ಮತ್ತಷ್ಟು ಅಸಮಾಧಾನಗೊಂಡ ಎಟಿ ರಾಮಸ್ವಾಮಿ ಅವರು, ಇಂತಹ ಉತ್ತರವನ್ನು ಗೃಹ ಸಚಿವರು ಕೊಡುತ್ತಾರೆ. ಇಂತಹ ಮಾತನ್ನ ಕೇಳಿ ನಾನು ಒಂದು ಕ್ಷಣವೂ ಇಲ್ಲಿ ಇರಲು ಸಾಧ್ಯವಿಲ್ಲ ಎಂದರು. ಕೂಡಲೇ ನಾನು ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ನಾಳೆ ವಿವರ ನೀಡುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *