ಕೇಂದ್ರ ಮಂತ್ರಿಗೆ ಕ್ಲಾಸ್ – ಗೈರಾದ ಸಂಸದರಿಗೂ ಬಿಸಿ ಮುಟ್ಟಿಸಿದ ಸ್ಪೀಕರ್

Public TV
1 Min Read

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕೇಂದ್ರ ಸಚಿವರನ್ನು ತರಾಟೆ ತೆಗೆದುಕೊಂಡ ಘಟನೆ ಮಂಗಳವಾರ ನಡೆದಿದೆ.

ಪ್ರಶ್ನೋತ್ತರ ಅವಧಿಯಲ್ಲಿ ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವ ರೌಸಾಹೇಬ್ ಪಾಟೀಲ್ ದಾನ್ವೆ ಅವರಿಗೆ ಸ್ಪೀಕರ್ ಕ್ಲಾಸ್ ತೆಗೆದುಕೊಂಡಿದ್ದು, ಸದನದಲ್ಲಿ ಚರ್ಚೆಯಾಗುತ್ತಿರುವ ವಿಷಯಗಳ ಬಗ್ಗೆ ಗಮನಹರಿಸಿ ಎಂದು ಗರಂ ಆಗಿ ಪ್ರತಿಕ್ರಿಯಿಸಿದರು.

ಶಿವಸೇನೆಯ ಸಂಸದ ಹೇಮಂತ್ ತುಕಾರಾಮ್ ಗೋಡ್ಸೆ ಅವರು ಹೆಚ್ಚುವರಿ ಪ್ರಶ್ನೆ ಕೇಳುವ ವೇಳೆ ದಾನ್ವೆ ಅವರು ಇನ್ನೊಂದು ಬಾರಿ ಕೇಳಿ ಎಂದು ಹೇಳಿದ್ದಾರೆ. ಆಗ ಕೋಪಗೊಂಡ ಓಂ ಬಿರ್ಲಾ ಅವರು, ಸನ್ಮಾನ್ಯ ಸಚಿವರೇ ಪ್ರಶ್ನೆಗಳ ಬಗ್ಗೆ ಗಮನಹರಿಸಿ, ಸರಿಯಾಗಿ ಕೇಳಿ ಎಂದು ಖಾರವಾಗಿ ಹೇಳಿದರು.

ನಂತರ ಗೋಡ್ಸೆಯವರು ಮತ್ತೊಂದು ಪ್ರಶ್ನೆಯನ್ನು ಕೇಳಿದ್ದು, ಆಗ ದಾನ್ವೆಯವರ ಸಾಲಿನಲ್ಲೇ ಕುಳಿತಿದ್ದ ಕೇಂದ್ರ ನಾಗರಿಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಎದ್ದು ನಿಂತು ಪ್ರಶ್ನೆಗೆ ಉತ್ತರಿಸಿದರು. ಅಲ್ಲದೆ ಗೋಡ್ಸೆಯವರು ಕೇಳಿದ ಹೆಚ್ಚುವರಿ ಪ್ರಶ್ನೆಗಳಿಗೂ ಪಾಸ್ವಾನ್ ಅವರೇ ಉತ್ತರಿಸಿದರು.

ನೀವು ಕುಳಿತುಕೊಂಡೇ ಉತ್ತರಿಸಿ, ಸದನವು ನಿಮಗೆ ಅನುಮತಿ ನೀಡುತ್ತದೆ. ನಿಮ್ಮ ಕಾಲು ಮುರಿದಿದೆ. ಕುಳಿತುಕೊಂಡೆ ಉತ್ತರ ನೀಡಿ ಎಂದು ಪಾಸ್ವಾನ್ ಅವರಿಗೆ ಸೂಚಿಸಿದರು.

ಹಲವು ಸಂಸದರು ಗೈರಾಗಿದ್ದಕ್ಕೆ ಸ್ಪೀಕರ್ ಮೊದಲೇ ಕೆಂಡಾಮಂಡಲವಾಗಿದ್ದರು. ಪ್ರಶ್ನೋತ್ತರ ಅವಧಿಯಲ್ಲೇ ಸಂಸದರು ಇಲ್ಲದ್ದನ್ನು ಕಂಡು ಬೇಸರ ವ್ಯಕ್ತಪಡಿಸಿದ್ದರು. ಹೆಸರು ನೋಂದಾಯಿಸಿಕೊಂಡವರು ಯಾರು ಸದನಕ್ಕೆ ಹಾಜರಾಗಿಲ್ಲವೋ ಅವರು ಚಳಿಗಾಲದ ಅಧಿವೇಶನ ಮುಗಿಯುವವರೆಗೆ ಯಾವುದೇ ಪ್ರಶ್ನೆ ಕೇಳುವಂತಿಲ್ಲ ಎಂದು ಖಡಕ್ ಆಗಿ ಹೇಳಿ ಬಿಸಿ ಮುಟ್ಟಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *