ಸ್ಪೀಕರ್ ಕಾಂಗ್ರೆಸ್ ಏಜೆಂಟ್‍ರಂತೆ ವರ್ತಿಸುತ್ತಿದ್ದಾರೆ: ಶೋಭಾ ಕರಂದ್ಲಾಜೆ

Public TV
1 Min Read

ಬೆಂಗಳೂರು: ವಿಶ್ವಾಸಮತ ಮಂಡಿಸದೆ ಕಾಲಹರಣ ಮಾಡುವ ಮೂಲಕ ಸಿಎಂ ಹಾಗೂ ಸ್ಪೀಕರ್ ನಾಟಕವಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ವಿಶ್ವಾಸಮತಯಾಚನೆ ಮಾಡುತ್ತೇನೆಂದು ಅಧಿವೇಶನ ಆರಂಭಿಸಿದರು. ಆದರೆ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಕಾಲಹರಣ ಮಾಡುತ್ತಿದ್ದಾರೆ. ಈ ಮೂಲಕ ಸಮಯ ಮುಂದೂಡುವ ಕೆಲಸ ಮಾಡಿ, ಸದನದಲ್ಲಿ ಗಲಭೆ ಏಳುವಂತೆ ಮಾಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.

ಒಂದೆಡೆ ಸಂವಿಧಾನಾತ್ಮಕವಾಗಿ ಹಾಗೂ ನಿಯಮಬದ್ಧವಾಗಿ ನೀಡಿದ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸುತ್ತಿಲ್ಲ. ಇನ್ನೊಂದೆಡೆ ಸದನದಲ್ಲಿ ವಿಶ್ವಾಸಮತಯಾಚನೆಗೆ ಅವಕಾಶ ನೀಡದೆ, ಕಾಲಹರಣ ಮಾಡುತ್ತಿದ್ದಾರೆ. ಈ ಮೂಲಕ ಸ್ಪೀಕರ್ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.

ಸದನದಲ್ಲಿ ವಿಶ್ವಾಸಮತಯಾಚೆನೆಗೆ ಅವಕಾಶ ನೀಡದೆ, ಸ್ಪೀಕರ್ ಮುಖ್ಯಮಂತ್ರಿ ಸೇರಿ ನಾಟಕ ಆಡುತ್ತಿದ್ದಾರೆ. ಸ್ಪೀಕರ್ ಕಾಂಗ್ರೆಸ್ ಏಜೆಂಟ್‍ರಂತೆ ವರ್ತಿಸುತ್ತಿದ್ದಾರೆ. ಸ್ಪೀಕರ್ ಪ್ರಮಾಣಿಕವಾಗಿ ಇಂದೇ ವಿಶ್ವಾಸಮತ ಸಾಬೀತು ಮಾಡಲು ನಿರ್ದೇಶನ ನೀಡಬೇಕು ಎಂದರು.

Share This Article
Leave a Comment

Leave a Reply

Your email address will not be published. Required fields are marked *