ಶೀಘ್ರದಲ್ಲೇ ಏರಿಕೆ ಆಗಲಿದೆ ಅಕ್ಕಿ ಬೆಲೆ!

Public TV
1 Min Read

ಬಳ್ಳಾರಿ: ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಸಹ ಏರಿಕೆಯಾಗುವ ಸಾಧ್ಯತೆಯಿದೆ.

ಹೌದು, ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಗಗನಕ್ಕೇರುವುದು ಅಕ್ಷರಶಃ ಖಚಿತವಾಗಿದೆ. ಯಾಕಂದ್ರೆ ಈ ಭಾರಿ ಭತ್ತದ ನಾಡು ಎಂದು ಪ್ರಸಿದ್ಧಿ ಪಡೆದಿರುವ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಭತ್ತದ ಬೆಳೆಗೂ ಸಹ ಬರ ಬಂದಿದೆ. ತುಂಗಭದ್ರಾ ಜಲಾಶಯದಿಂದ ಭತ್ತದ ಬೆಳೆಗೆ ನೀರು ಸಿಗದ ಪರಿಣಾಮ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ವಹಿವಾಟಿನ ಭತ್ತದ ಇಳುವರಿ ಕುಂಠಿತಗೊಂಡಿದೆ.

ಈ ಮೂರು ಜಿಲ್ಲೆಗಳು ಭತ್ತದ ಬೆಳೆಗೆ ಹೆಸರುವಾಸಿ. ತುಂಗಭದ್ರಾ ಜಲಾಶಯದ ನೀರನ್ನೂ ಬಳಸಿ ಬಂಗಾರದಂತಹ ಭತ್ತದ ಬೆಳೆಯನ್ನು ಬೆಳೆಯೋ ನಾಡಿನಲ್ಲೀಗ ಭತ್ತದ ಬೆಳೆಗೂ ಸಹ ಬರ ಬಂದಿದೆ. ಬರಗಾಲ ಹಾಗೂ ಟಿಬಿ ಡ್ಯಾಂನಿಂದ ರೈತರಿಗೆ ನೀರು ಸಿಗದ ಪರಿಣಾಮ ಈ ಬಾರಿ ಬಳ್ಳಾರಿ ಕೊಪ್ಪಳ ರಾಯಚೂರು ಜಿಲ್ಲೆಗಳ ಸುಮಾರು 6 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಭತ್ತದ ಇಳುವರಿ ಇಲ್ಲದಾಗಿದೆ. ಬಳ್ಳಾರಿ ಜಿಲ್ಲೆಯೊಂದರಲ್ಲೇ 80 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಿಲ್ಲ.

ಭತ್ತದ ಬೆಳೆಯನ್ನೆ ನಂಬಿಕೊಂಡು ವ್ಯವಸಾಯ ಮಾಡೋ ರೈತರು ನೀರು ಕೊಡಿ ಇಲ್ಲಾ ಮೋಡ ಬಿತ್ತನೆ ಮಾಡಿ ಅಂತಾ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಭತ್ತದ ಬೆಳೆ ಬೆಳೆಯದ ಪರಿಣಾಮ ಮುಂದಿನ ವರ್ಷ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಗಗನಕ್ಕೇರುವುದು ಖಚಿತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *