ಹಾವೇರಿ: ಬುದ್ಧಿ ಮಾತು ಹೇಳಿದಕ್ಕೆ ಪಾಪಿ ಮಗನೊಬ್ಬ ತಂದೆಯನ್ನೇ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ದಾರುಣ ಘಟನೆ ಜಿಲ್ಲೆಯ ಹಾನಗಲ್ ತಾಲೂಕು ಬಿಂಗಾಪುರ ಗ್ರಾಮದಲ್ಲಿ ನಡೆದಿದೆ.
ಬಿಂಗಾಪುರ ಗ್ರಾಮದ ನಿವಾಸಿ ಮುರಾರಿ ಡಾಂಗೆ(55) ಮೃತ ದುರ್ದೈವಿ. ಸಿದ್ದಪ್ಪ(35) ಕೊಲೆ ಮಾಡಿದ ಆರೋಪಿ. ಶನಿವಾರದಂದು ಕ್ಷುಲಕ ಕಾರಣಕ್ಕೆ ಮನೆಯಲ್ಲಿ ಜಗಳ ಆಗಿತ್ತು. ಆದರಿಂದ ಮಗನಿಗೆ ತಂದೆ ಮುರಾರಿ ಬುದ್ಧಿ ಮಾತು ಹೇಳಿದ್ದರು. ಆದ್ರೆ ಬುದ್ಧಿ ಹೇಳಿದ್ದೇ ತಪ್ಪಾಗಿ ಹೋಯ್ತು. ತಂದೆ ಮಾತಿಗೆ ಕೋಪಗೊಂಡ ಮಗ ಸಿಟ್ಟಿನಿಂದ ಕೈಗೆ ಸಿಕ್ಕ ಕಟ್ಟಿಗೆಯಲ್ಲಿ ಹೊಡೆದು ಕೊಲೆ ಮಾಡಿದ್ದಾನೆ.
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿ ಸಿದ್ದಪ್ಪನ ವಿರುದ್ಧ ಆಡೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರ ನಡೆಸುತ್ತಿದ್ದಾರೆ.