ಹಾವೇರಿ: ಅಂಬುಲೆನ್ಸ್ ವಾಹನದಲ್ಲಿ ಆಕ್ಸಿಜನ್ ಕೊರತೆ ಆರೋಪಿಸಿ ತಾಯಿಯ ಸ್ಥಿತಿ ಕಂಡು ಕಣ್ಣೀರಿಟ್ಟ ಪುತ್ರ ವಿಡಿಯೋ ಚಿತ್ರೀಕರಣ ಮಾಡಿ ಫೇಸ್ ಬುಕ್ ಹಾಗೂ ವಾಟ್ಸಪ್ ಹರಿಬಿಟ್ಟ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿ ಜಿಲ್ಲಾಸ್ಪತ್ರೆಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ ವಾಹನದಲ್ಲಿ ಈ ಘಟನೆ ನಡೆದಿದೆ. ಮುಮ್ತಾಜ್(56) ಜಿಲ್ಲೆಯ ಬ್ಯಾಡಗಿ ಪಟ್ಟಣದ ನಿವಾಸಿಯಾಗಿದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಹುಬ್ಬಳ್ಳಿ ಆಸ್ಪತ್ರೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಆಕ್ಸಿಜನ್ ಕೊರತೆ ಕಾಣಿಸಿದ್ದರಿಂದ ಬೇರೆ ಅಂಬುಲೆನ್ಸ್ ಗಳಿಗೆ ಫೋನ್ ಮಾಡಿ ಪರಶುರಾಮ ಆಕ್ಸಿಜನ್ ಕೇಳಿದ್ದಾರೆ.
ಆಕ್ಸಿಜನ್ ಕೊರತೆ ಆಗಿರೋದು ಕಂಡು ತನ್ನ ಮೊಬೈಲ್ ನಲ್ಲಿ ತಾಯಿಯ ಸ್ಥಿತಿಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮಗ ಹರಿಬಿಟ್ಟಿದ್ದಾರೆ. ತಾಯಿಯ ಸ್ಥಿತಿ ಚಿತ್ರೀಕರಿಸಿದ ನಂತರ ಸೆಲ್ಫಿ ವಿಡಿಯೋ ಮೂಲಕ ಅಂಬುಲೆನ್ಸ್ ದುಃಸ್ಥಿತಿ ವಿರುದ್ಧ ಕಣ್ಣೀರು ಹಾಕಿ ಇಂತಹ ಸ್ಥಿತಿ ಯಾವ ತಾಯಿಗೆ ಬರಬಾರದು ಇದನ್ನು ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲಿ ಶೇರ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಆಕ್ಸಿಜನ್ ಕೊರತೆ ನಡುವೆಯೂ ಹುಬ್ಬಳ್ಳಿಯ ಕಿಮ್ಸ್ ಗೆ ಮುಮ್ತಾಜ್ ರನ್ನು ಸೇಫ್ ಆಗಿ ಒಯ್ದು ಚಿಕಿತ್ಸೆಗಾಗಿ ಅಂಬುಲೆನ್ಸ್ ಸಿಬ್ಬಂದಿ ದಾಖಲು ಮಾಡಿದ್ದಾರೆ. ಕಿಮ್ಸ್ ಆಸ್ಪತ್ರೆಗೆ ದಾಖಲಾದ ಮುಮ್ತಾಜ್ ಅವರಿಗೆ ಚಿಕಿತ್ಸೆ ಪಡೆದುಕೊಂಡು ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಮಾತನಾಡಿದ ಸಿಬ್ಬಂದಿ ಯಾವುದೇ ತೊಂದರೆ ಇಲ್ಲದೆ ಕಿಮ್ಸ್ ಆಸ್ಪತ್ರೆ ದಾಖಲಿಸಿದ್ದೇವೆ. ಆಕ್ಸಿಜನ್ ಕೊರತೆ ಇತ್ತು ಎಂಬುದನ್ನು ಅಂಬುಲೆನ್ಸ್ ಸಿಬ್ಬಂದಿ ಅಲ್ಲಗಳೆದಿದ್ದಾರೆ.