ಅತ್ತೆ ಮಗಳ ಜೊತೆ ಮದುವೆ ಮಾಡಿಸದ್ದಕ್ಕೆ ಮಗನಿಂದಲೇ ತಂದೆಯ ಕೊಲೆ!

Public TV
2 Min Read

ಚಿಕ್ಕಬಳ್ಳಾಪುರ: ಅತ್ತೆ ಮಗಳ ಜೊತೆ ಮದುವೆ ಮಾಡಿಸಲಿಲ್ಲ ಎಂದು ಮಗನೊಬ್ಬ ತನ್ನ ತಂದೆಯ ಮೇಲೆ ಭಾರೀ ಗಾತ್ರದ ಸೈಜುಗಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಣಿವಾಲ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಸುರೇಶ್(25) ತನ್ನ ತಂದೆ ವೆಂಕಟೇಶಪ್ಪನನ್ನು ಕೊಲೆ ಮಾಡಿದ ಆರೋಪಿ. ವೆಂಕಟೇಶಪ್ಪ ಮೇ 14ರ ಮುಂಜಾನೆ 2 ಗಂಟೆ ಸಮಯದಲ್ಲಿ ಗ್ರಾಮದ ಜಗುಲಿಕಟ್ಟೆ ಮೇಲೆ ಮಲಗಿದ್ದನು. ಆಗ ಸುರೇಶ್ ತನ್ನ ತಂದೆಯನ್ನು ಕೊಲೆ ಮಾಡಿರುವ ಸತ್ಯ ಪೊಲೀಸರ ತನಿಖೆಯಿಂದ ಬಯಲಾಗಿದೆ.

ಅತ್ತೆ ಮಗಳ ಮೇಲೆ ಪ್ರೀತಿ: ಸುರೇಶ್ ತನ್ನ ಅತ್ತೆ ಮಗಳು ಎಂದರೆ ಕೊಲೆಯಾದ ವೆಂಕಟೇಶಪ್ಪನ ತಂಗಿಯ ಮಗಳನ್ನು ಪ್ರೀತಿಸುತ್ತಿದ್ದನು. ಹಾಗಾಗಿ ತಂದೆಗೆ ಆಕೆಯ ಜೊತೆ ಮದುವೆ ಮಾಡಿಸು ಎಂದು ಸುರೇಶ್ ಪೀಡಿಸುತ್ತಿದ್ದನು. ಇತ್ತ ಹುಡುಗಿಗೆ 17 ವರ್ಷವಾದ ಹಿನ್ನೆಲೆಯಲ್ಲಿ ಮದುವೆ ಮಾಡಲ್ಲ ಎಂದು ಹುಡುಗಿ ಪೋಷಕರು ಮದುವೆಗೆ ನಿರಾಕರಿಸಿದ್ದಾರೆ. ಇದರಿಂದ ವೆಂಕಟೇಶಪ್ಪ ತನ್ನ ಮಗ ಸುರೇಶ್ ಬಳಿ ಆ ಹುಡುಗಿಯನ್ನು ಅವರು ಮದುವೆ ಮಾಡಿಸಿಕೊಡಲು ಸಿದ್ಧರಿಲ್ಲ. ನಿನಗೆ ಬೇರೆ ಹುಡುಗಿ ಜೊತೆ ಮದುವೆ ಮಾಡಿಸುತ್ತೇನೆ ಎಂದು ಹೇಳಿ ಬೈದಿದ್ದ.

ಕೊಲೆಯಾದ ವೆಂಕಟೇಶಪ್ಪನಿಗೆ ಇಬ್ಬರು ಹೆಂಡತಿಯರಿದ್ದು, ಸುರೇಶ್ ಮೊದಲನೇ ಹೆಂಡತಿಯ ಮಗ. ವೆಂಕಟೇಶಪ್ಪ ಸುರೇಶ್‍ನನ್ನು ಬೆಂಗಳೂರಿಗೆ ಕೆಲಸಕ್ಕೆ ಕಳುಹಿಸಿ ಎರಡನೇ ಹೆಂಡತಿ ಮಗನನ್ನ ಮಾತ್ರ ಮನೆಯಲ್ಲಿ ಇಟ್ಟುಕೊಂಡಿದ್ದನು. ಸುರೇಶ್ ಬೆಂಗಳೂರಿನ ಬೈಕ್ ಶೋ ರೂಂವೊಂದರಲ್ಲಿ ಮೆಕ್ಯಾನಿಕ್ ಹೆಲ್ಫರ್ ಆಗಿ ಕೆಲಸ ಮಾಡುತ್ತಿದ್ದನು. ದುಡಿದ ಹಣವನನ್ನು ತನ್ನ ತಂದೆಗೆ ತಂದು ಕೊಡುತ್ತಿದ್ದ. ಆದರೆ ವೆಂಕಟೇಶಪ್ಪ ಆ ಹಣವನ್ನೆಲ್ಲಾ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಗೆ ಖರ್ಚು ಮಾಡಿ ಹಾಳು ಮಾಡುತ್ತಿದ್ದನು. ಈ ಬಗ್ಗೆ ಸುರೇಶ್ ಸಾಕಷ್ಟು ಬಾರಿ ತಂದೆಗೆ ಬುದ್ಧಿವಾದ ಹೇಳಿದ್ದ.

ಕೊಲೆ ಮಾಡಿದ್ದರು ಯಾಕೆ?: ಮತ್ತೊಂದೆಡೆ ಮಗ ಸುರೇಶ್ ಗೆ ಮಾನಸಿಕ ಖಾಯಿಲೆವಿದ್ದು, ಅಮಾವಾಸ್ಯೆ ದಿನ ಚಿತ್ರ ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದನು. ಹೀಗಾಗಿ ಕೊಲೆಯಾದ ದಿನವೂ ಕೂಡ ಅಮಾವಾಸ್ಯೆ ಆಗಿದ್ದು, ಅಂದು ಕೂಡ ವಿಚಿತ್ರವಾಗಿ ವರ್ತಿಸಿದ್ದ. ಸುರೇಶ್‍ನನ್ನು ವೆಂಕಟೇಶಪ್ಪ ಮಂತ್ರವಾದಿ ಬಳಿ ಕರೆದುಕೊಂಡು ಹೋಗಿ ಮಂತ್ರ ಹಾಕಿಸಿಕೊಂಡು ಕರೆದುಕೊಂಡು ಬಂದಿದ್ದ. ಬರುವಾಗಲೇ ಅತ್ತೆ ಮಗಳ ಮದುವೆ ವಿಚಾರದಲ್ಲಿ ಇಬ್ಬರ ನಡುವೆ ವಾದ ವಿವಾದವೂ ಜೋರಾಗಿ ನಡೆದಿತ್ತು. ಹೀಗಾಗಿ ರಾತ್ರಿಯೆಲ್ಲಾ ತಂದೆಯ ಬಗ್ಗೆ ಬೇಸರ ಪಟ್ಟುಕೊಂಡು ತಲೆಕೆಡೆಸಿಕೊಂಡಿದ್ದ ಸುರೇಶ್ ಕೊನೆಗೆ ಮಧ್ಯರಾತ್ರಿ ಮಲಗಿದ್ದ ತಂದೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ತನಿಖೆ ವೇಳೆ ಸತ್ಯ ಬಾಯ್ಬಿಟ್ಟ: ಸುರೇಶ್ ಕೊಲೆ ಮಾಡಿ ಮನೆಯಲ್ಲೇ ಏನೂ ಆರಿಯದ ಹಾಗೆ ವರ್ತಿಸಿದ್ದ. ಇನ್ನೂ ಹಲವು ಆಯಾಮಗಳಿಂದಲೂ ತನಿಖೆಗಿಳಿದ ಪೊಲೀಸರಿಗೆ ಮೊದ ಮೊದಲು ಯಾವ ಸುಳಿವು ಸಿಗಲಿಲ್ಲ. ಆದರೆ ಸುರೇಶ್‍ನ ಹೇಳಿಕೆ ಪಡೆದುಕೊಳ್ಳುವಾಗ ಒಂದೊಂದು ಬಾರಿ ಒಂದೊಂದು ಹೇಳಿಕೆ ನೀಡುತ್ತಿದ್ದ ಹಾಗೂ ಕೊಲೆಯಾದ ರಾತ್ರಿ ಈತ 3 ಗಂಟೆಯಲ್ಲಿ ಓಡಾಡುತ್ತಿದ್ದನ್ನು ಕೆಲ ಗ್ರಾಮಸ್ಥರು ಕಂಡಿದ್ದರು. ಈ ವಿಷಯ ತಿಳಿದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸುರೇಶ್ ಸತ್ಯ ಬಾಯ್ಬಿಟ್ಟಿದ್ದಾನೆ. ಸದ್ಯ ತಂದೆಯನ್ನೇ ಕೊಲೆ ಮಾಡಿ ಸುರೇಶ್ ಜೈಲು ಸೇರಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *